×
Ad

ಮಲೆನಾಡನ್ನು ಅತಿವೃಷ್ಟಿ, ಬಯಲು ಸೀಮೆಯನ್ನು ಅನಾವೃಷ್ಟಿ ಪೀಡಿತ ಎಂದು ಘೋಷಿಸಲು ಸಿಎಂ ಬಳಿ ನಿಯೋಗ

Update: 2018-07-26 23:49 IST

ಚಿಕ್ಕಮಗಳೂರು, ಜು.26: ಜಿಲ್ಲೆಯಲ್ಲಿ ಈ ಭಾರೀ ಅಪಾರ ರೀತಿ ಮಳೆಯಾಗಿದ್ದು, ಸಾಕಷ್ಟು ಸಾವು, ನೋವು, ಆಸ್ತಿ ಹಾನಿಯಾಗಿದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದೂ, ಬಯಲು ಸೀಮೆಯನ್ನು ಅನಾವೃಷ್ಟಿ ಪೀಡಿತ ಎಂದೂ ಘೋಷಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಎದುರಾಗಿರುವ ಸಮಸ್ಯೆಗಳ ಚರ್ಚೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. 

ಸಭೆಯಲ್ಲಿ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಮಲೆನಾಡು ತಾಲೂಕುಗಳು ಸೇರಿದಂತೆ ತರೀಕೆರೆಯ ಕೆಲವು ಭಾಗಗಳಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ. ಪರಿಹಾರಕ್ಕೆ ಅನುದಾನ ಕಡಿಮೆ ಇದೆ. ಹತ್ತಾರು ಮನೆಗಳಿಗೆ ಹಾನಿ ಸಂಭವಿಸಿದೆ. ನೂರಾರು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಧರೆಕುಸಿತ, ಪ್ರಾಣಹಾನಿ ಸಂಭವಿಸಿದೆ. ಕೂಡಲೇ ಜಿಲ್ಲಾಡಳಿತ ಇದಕ್ಕೆ ಸ್ಪಂದಿಸಬೇಕಿದೆ ಎಂದರು.

ಕಳೆದ 10 ವರ್ಷಗಳ ಹಿಂದೆ 3054ರ ಶೀರ್ಷಿಕೆಯಡಿ ಪ್ರತೀ ಜಿಪಂ ಕ್ಷೇತ್ರಕ್ಕೆ 50 ರಿಂದ 60 ಲಕ್ಷ ರೂ. ಅನುದಾನ ಬರುತ್ತಿತ್ತು. ಈಗ ಅದು ಕೇವಲ 8 ರಿಂದ 10 ಲಕ್ಷಕ್ಕೆ ಇಳಿದಿದೆ. ಲಿಂಕ್ ಡಾಕ್ಯುಮೆಂಟ್‌ನ ಅನುದಾನವೂ ಕಡಿಮೆಯಾಗುತ್ತಿದೆ. ಮಲೆನಾಡಿನಲ್ಲಿ ಮಳೆಯಿಂದ ರಸ್ತೆಗಳೆಲ್ಲವೂ ಕೊಚ್ಚಿಹೋಗಿದೆ. ಕಾಫಿ, ಅಡಿಕೆ, ಮೆಣಸು, ಏಲಕ್ಕಿ ಬೆಳೆಗೆ ಹಾನಿ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಬಳಿ ನಿಯೋಗ ಕೊಂಡೊಯ್ದು ಹೆಚ್ಚಿನ ಅನುದಾನ ಮಂಜೂರು ಮಾಡಿಸಬೇಕೆಂದು ಒತ್ತಾಯಿಸಿದರು.

ಬೆಳವಾಡಿ ರವೀಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಾಗುತ್ತಿದ್ದರೆ, ಬಯಲುಸೀಮೆಯಲ್ಲಿ ಪ್ರಕೃತಿ ಮುನಿಸಿಕೊಂಡಿದೆ. ಲಕ್ಯಾ, ಅಂಬಳೆ ಹೋಬಳಿ ಸೇರಿದಂತೆ ಕಡೂರು, ತರೀಕೆರೆ ಭಾಗದಲ್ಲಿ ಇದುವರೆಗೆ ಮಳೆ ಬಂದಿಲ್ಲ. ಬಿತ್ತನೆ ಬೀಜ, ಗೊಬ್ಬರ ದಾಸ್ತಾನಿದ್ದರೂ ಬಿತ್ತನೆ ಕಾರ್ಯವೇ ಆರಂಭವಾಗಿಲ್ಲ. ಹೆಸರಿಗೆ ಜಿಲ್ಲೆಯಲ್ಲಿ ಶೇ.40 ರಷ್ಟು ಹೆಚ್ಚು ಮಳೆಯಾಗಿದೆ ಎನ್ನುತ್ತಾರೆ. ಈ ಕಾರಣಕ್ಕೆ ಚಿಕ್ಕಮಗಳೂರು ತಾಲೂಕಿನ ಬಯಲು ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಸದಸ್ಯೆ ಶಿಲ್ಪಾ ರವಿ ಮಾತನಾಡಿ, ಒಂದೆಡೆ ಅಣೆಕಟ್ಟುಗಳು ತುಂಬಿ ಪೂಜೆ ಮಾಡುತ್ತಿದ್ದಾರೆ. ನಾವು ಮಳೆ ನಿಲ್ಲಲಿ ಎಂದು ಪೂಜೆ ಮಾಡುವ ಪರಿಸ್ಥಿತಿ ಬಂದಿದೆ. ಅಧಿಕ ಮಳೆಯಿಂದ ಕೊಳೆರೋಗದಿಂದ ಬೆಳೆಹಾನಿ ಸಂಭವಿಸಿದೆ. ಕಾಫಿ, ಅಡಿಕೆ, ಮೆಣಸಿನಂತಹ ಬೆಳೆಗಳನ್ನೇ ನಂಬಿ ನಾವು ಜೀವನ ಮಾಡಬೇಕಿದೆ. ಸರಕಾರ ಇತ್ತ ಕೂಡಲೇ ಗಮನ ಹರಿಸಬೇಕು ಎಂದರು.

ಮೂಡಿಗೆರೆ ತಾಪಂ ಅಧ್ಯಕ್ಷ ರತನ್ ಮಾತನಾಡಿ, ಮಲೆನಾಡಿನಿಂದ ಬಯಲು ಸೀಮೆಗೆ ಸಾಕಷ್ಟು ಪ್ರಮಾಣದ ನೀರು ಕೊಡುತ್ತೇವೆ. ನಾವು ಮಾತ್ರ ದೊಡ್ಡ ಪ್ರಮಾಣದ ಹಾನಿ ಅನುಭವಿಸುತ್ತೇವೆ. ಆದರೆ ಯಾರೂ ನಮ್ಮ ಬಳಿ ಬರುತ್ತಿಲ್ಲ. ನಮ್ಮ ಸಮಸ್ಯೆ ಯಾರಿಗೆ ಹೇಳಬೇಕೋ ಅರ್ಥವಾಗುತ್ತಿಲ್ಲ. ರಾಜ್ಯ ಸರಕಾರದಿಂದ ಯಾರೂ ಬರುತ್ತಿಲ್ಲ. ಉಸ್ತುವಾರಿ ಸಚಿವರು ಮೊದಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಜಿಪಂನಿಂದ ತಕ್ಷಣಕ್ಕೆ ಅತಿವೃಷ್ಟಿ, ಅನಾವೃಷ್ಟಿಯ ಪರಿಹಾರ ನೀಡಲು ಆಗುತ್ತಿಲ್ಲ. ಜಿಲ್ಲಾಧಿಕಾರಿ ಜೊತೆ ಈ ಸಂಬಂಧ ಚರ್ಚಿಸಬೇಕು. ಹಾನಿ ಸಂಬಂಧ ಎಲ್ಲ ತಾಲೂಕುಗಳಿಂದ ಮಾಹಿತಿ ತರಿಸಿದ್ದೇವೆ. ಅದು ಸಮರ್ಪಕ ಆದಂತಿಲ್ಲ. ಮತ್ತೊಂದು ಪಟ್ಟಿ ತರಿಸಿಕೊಂಡು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ನಂತರ ಮುಖ್ಯಮಂತ್ರಿ ಬಳಿ ನಿಯೋಗ ತೆರಳೋಣ ಎಂದು ತಿಳಿಸಿದರು.

ಪ್ರಭಾಕರ್, ಬಣಕಲ್ ಶಾಮಣ್ಣ, ಮಹೇಶ್ ಒಡೆಯರ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News