ಶಿವಮೊಗ್ಗ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ
ಶಿವಮೊಗ್ಗ, ಜು. 26: ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿಕೊಂಡು ಒಳ ಪ್ರವೇಶಿಸಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣ ಅಪಹರಿಸಿದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಆಜಾದ್ ನಗರ 1 ನೇ ತಿರುವಿನಲ್ಲಿ ನಡೆದಿದೆ.
ಮೊಹಮ್ಮದ್ ಜಾಫರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಅವರು ಕಾರ್ಯನಿಮಿತ್ತ ಮನೆಯ ಮುಂಬಾಗಿಲಿನ ಇಂಟರ್ಲಾಕ್ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೊಂದಿಗೆ ಹೊರ ತೆರಳಿದ್ದರು. ಈ ವೇಳೆ ಕಳ್ಳರು ಈ ಕೃತ್ಯ ನಡೆಸಿದ್ದು, ಅವರು ಮನೆಗೆ ಆಗಮಿಸಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಡೋಲೆ, ಕಿವಿಯೊಲೆ, ಚಿನ್ನದ ಸರ, ಉಂಗುರ ಸೇರಿದಂತೆ 1.25 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ.
ಮೊಹಮ್ಮದ್ ಜಾಫರ್ ರವರು ಮುಂಬಾಗಿಲ ಇಂಟರ್ಲಾಕ್ ಬೀಗದ ಒಂದು ಕೀಯನ್ನು, ಮನೆಯ ಟಿ.ವಿ. ಸ್ಟ್ಯಾಂಡ್ ಬಳಿಯಿಟ್ಟಿದ್ದರು. ಆದರೆ ಈ ಕೀ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಕೀ ಬಳಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.