ಭ್ರಷ್ಟಾಚಾರ ರಹಿತ ಇಲಾಖೆಯಾಗಿ ರೂಪುಗೊಳ್ಳಲು ಶ್ರಮಿಸುವಂತೆ ಕರೆ: ವಿಧಾನ ಪರಿಷತ್ ಸದಸ್ಯ ಭೋಜೇಗೌಡ

Update: 2018-07-29 16:47 GMT

ಶಿವಮೊಗ್ಗ, ಜು. 28: ಶಿಕ್ಷಣ ಇಲಾಖೆಯನ್ನು ಸಂಪೂರ್ಣ ಭ್ರಷ್ಟಾಚಾರ ರಹಿತ ಇಲಾಖೆಯಾಗಿ ರೂಪುಗೊಳ್ಳಲು ಶಿಕ್ಷಣ ಇಲಾಖೆಯ ಎಲ್ಲಾ ಹಂತ ಅಧಿಕಾರಿಗಳು ಶ್ರಮಿಸುವಂತೆ ವಿಧಾನಪರಿಷತ್ ಸದಸ್ಯ ಭೋಜೆಗೌಡ ಕರೆ ನೀಡಿದ್ದಾರೆ. .

ಡಯಟ್ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ಶಿಕ್ಷಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಂತದ ನೌಕರರು ಒಂದೇ ಕುಟುಂಬವೆಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಸೇವಾ ವಿಷಯಗಳಲ್ಲಿ ಪರಸ್ಪರರ ನಡುವೆ ಸಾಮರಸ್ಯ, ಸಮನ್ವಯತೆ ಇರಬೇಕಾದುದು ಮುಖ್ಯ' ಎಂದರು.

ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ-ಸಿಬ್ಬಂದಿಗಳು ಕಚೇರಿಗೆ ಭೇಟಿ ನೀಡುವ ಶಿಕ್ಷಕರು ಹಾಗೂ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಸ್ನೇಹಪೂರ್ವಕವಾಗಿ ವ್ಯವಹರಿಸುವಂತೆ ಸೂಚಿಸಿದ ಅವರು, ಶಿಕ್ಷಕರೂ ಕೂಡ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಂಕಲ್ಪ ಮಾಡುವಂತೆ ಸೂಚಿಸಿದರು.

ಶಿಕ್ಷಕರ ಭಡ್ತಿ, ಕಾಲ್ಪನಿಕ ವೇತನ ಮತ್ತು ಎನ್.ಪಿ.ಎಸ್.ನೌಕರರ ಸಮಸ್ಯೆಗಳಂತಹ ರಾಜ್ಯಮಟ್ಟದ ವಿಷಯಗಳನ್ನು ಒಳಗೊಂಡು ಇನ್ನೂ ಅನೇಕ ವಿಷಯಗಳನ್ನು ಸರ್ಕಾರದ ಗಮನ ಸೆಳೆದು ಶೀಘ್ರದಲ್ಲಿ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು. ಸ್ಥಳೀಯ ಸಮಸ್ಯೆಗಳನ್ನು ಅರಿಯುವ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಶಿಕ್ಷಕರಿಗೆ ಆಗುತ್ತಿರುವ ಅನಗತ್ಯ ಕಿರುಕುಳ ಮುಂತಾದ ವಿಷಯಗಳ ಕುರಿತು ಸ್ಥಳದಲ್ಲಿಯೇ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಸದುದ್ದೇಶದಿಂದ ಇಂತಹ ಸಮಾಲೋಚನಾ ಸಭೆಗಳನ್ನು ಆಗಾಗ್ಗೆ ನಡೆಸಲಾಗುತ್ತಿದೆ ಶಿಕ್ಷಕರು ತಮ್ಮ ಕೆಲಸ-ಕಾರ್ಯಗಳಿಗಾಗಿ ಅಧಿಕಾರಿ-ಸಿಬ್ಬಂಧಿಗಳಿಗೆ ಆಮಿಷ ಒಡ್ಡುವುದು ತರವಲ್ಲ. ಶಿಕ್ಷಕರು ಸೂಚಿಸುವ ಎಲ್ಲಾ ಅಹವಾಲುಗಳನ್ನು ಸರ್ಕಾರದ ಗಮನಸೆಳೆದು ಇತ್ಯರ್ಥಪಡಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಛಾಡೋ ಮಾತನಾಡಿ, ಜಿಲ್ಲೆಯಲ್ಲಿನ ನೂರಾರು ಶಾಲೆಗಳಿಗೆ ಕಾಯಕಲ್ಪ ಆಗಬೇಕಾದ ತುರ್ತು ಇದೆ. ಜಿಲ್ಲೆಯ ಶಿಕ್ಷಕರ ಪರಿಶ್ರಮದಿಂದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಶ್ರೇಣಿ ಪಡೆಯಲು ಸಾಧ್ಯವಾಗಿದೆ. 600 ಕ್ಕೂ ಹೆಚ್ಚಿನ ಮಕ್ಕಳ 600+ ಅಂಕಗಳನ್ನು ಗಳಿಸಿರುವುದು ಜಿಲ್ಲೆಗೆ ಕೀರೀಟಪ್ರಾಯವೆನಿಸಿದೆ.  ಜಿಲ್ಲೆಯ ಕಲಾಶಿಕ್ಷಕರು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹರ್ಷದ ಸಂಗತಿ ಎಂದ ಅವರು, 272 ಶಾಲೆಗಳ ಪೈಕಿ 150 ಕ್ಕೂ ಶಾಲೆಗಳಿಗೆ ಅಗತ್ಯಕ್ಕೆ ಪೂರಕವಾಗಿ ಕಟ್ಟಡಗಳನ್ನು ನಿರ್ಮಿಸಲು ಮಂಜೂರಾತಿ ದೊರೆತಿದ್ದು, ಟೆಂಡರ್ ಕಾರ್ಯ ಪೂರ್ಣಗೊಂಡಿದೆ ಎಂದು ಹೇಳಿದರು. 

ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರಿದ್ದ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಶಾಸಕರ ಈ ರೀತಿಯ ಪ್ರಯತ್ನ ಅಭಿನಂದನೀಯ. ಅನುದಾನಿತ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಇರುವ ತೊಡಕುಗಳನ್ನು ನಿವಾರಿಸಿ ಅನುಮತಿ ನೀಡಬೇಕು. ಪ್ರಾಥಮಿಕ ಶಾಲೆಗಳಲ್ಲಿ ಅರ್ಹರಿರುವ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಶೂ, ಬಟ್ಟೆಗಳನ್ನು ಅನುದಾನಿತ ಶಾಲೆಗಳಿಗೂ ವಿಸ್ತರಿಸಬೇಕು. ಇಂತಹ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಸೆಳೆದು ಪರಿಹರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಸಿ.ನಂಜಯ್ಯ, ಶಿಕ್ಷಣಾಧಿಕಾರಿ ಸೋಮಶೇಖರಪ್ಪ ಸೇರಿದಂತೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಶಿಕ್ಷಕರು ಹಾಗೂ ಎಲ್ಲಾ ವೃಂದದ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News