ಎನ್.ಆರ್.ಪುರಕ್ಕೆ ಹಿಂದಿರುಗಿದ ಹಕ್ಕಿಪಿಕ್ಕಿ ಕುಟುಂಬಗಳು: ಶಾಸಕರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಫಲ
ಚಿಕ್ಕಮಗಳೂರು, ಜು.30: ಕಳೆದ ಗ್ರಹಣದ ಹಿಂದಿನ ದಿನ ಮಾಲೆಯಾಳಿ ಮಾಂತ್ರಿಕನೊಬ್ಬನ ಮಾತು ನಂಬಿ ಸಾವಿನ ಭೀತಿಯಿಂದ ಗ್ರಾಮ ತೊರೆದಿದ್ದ 60 ಕುಟುಂಬಗಳೊಂದಿಗೆ ಸೋಮವಾರ ಶಾಸಕ ಟಿ.ಡಿ.ರಾಜೇಗೌಡ ನಡೆಸಿದ ಸಂದಾನ ಸಭೆ ಸಫಲವಾಗಿದ್ದು, ಗ್ರಾಮ ತೊರೆದಿದ್ದ ಹಕ್ಕಿಪಿಕ್ಕಿ ಸಮುದಾಯದ ಕುಟುಂಬಗಳ ಸದಸ್ಯರು ಸೋಮವಾರ ಎನ್.ಆರ್.ಪುರ ಪಟ್ಟಣಕ್ಕೆ ಆಗಮಿಸಿದ್ದಾರೆ.
ಮೂಢ ನಂಬಿಕೆಗೆ ಬಲಿಯಾದ ಸಮುದಾಯದ ನೂರಾರು ಜನರು ಸಾವಿನ ಭೀತಿಯಿಂದಾಗಿ ತಾವು ವಾಸವಿದ್ದ ಜಾಗ, ಮನೆ, ಆಸ್ತಿಪಾಸ್ತಿ, ಸಾಕು ಪ್ರಾಣಿಗಳನ್ನು ಸ್ಥಳದಲ್ಲೇ ಬಿಟ್ಟು ಗ್ರಹಣದ ಹಿಂದಿನ ದಿನ ರಾತ್ರೋರಾತ್ರಿ ಗ್ರಾಮ ತೊರೆದಿದ್ದ ಹಕ್ಕಿಪಿಕ್ಕಿ ಸಮುದಾಯದವರ ಮನವೊಲಿಸಿ ಗ್ರಾಮಕ್ಕೆ ವಾಪಸ್ ಕರೆತರಲು ಮುಂದಾಗಿದ್ದ ಎನ್.ಆರ್.ಪುರ ತಾಲೂಕಿನ ತಹಶೀಲ್ದಾರ್ ರವಿವಾರ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಆದರೆ ಸೋಮವಾರ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನೆಲೆಸಿದ್ದ ಹಕ್ಕಿಪಿಕ್ಕಿ ಸಮುದಾಯದ ಮುಖಂಡರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂದಾನ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರಿಂದ ಸಮುದಾಯದ ಮುಖಂಡರು ಸೋಮವಾರ ಎನ್.ಆರ್.ಪುರ ಪಟ್ಟಣಕ್ಕೆ ಆಗಮಿಸಿದ್ದರು.
ಇವರೊಂದಿಗೆ ಶಾಸಕ ರಾಜೇಗೌಡ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸಂದಾನ ಸಭೆ ನಡೆಸಿ ತಾಲೂಕು ವ್ಯಾಪ್ತಿಯಲ್ಲಿ ಬೇರೆಡೆ ನಿವೇಶನ ಕಲ್ಪಿಸಿಕೊಡುವ ಭರವಸೆ ನೀಡಿದರೆಂದು ತಿಳಿದು ಬಂದಿದ್ದು, ಶಾಸಕರ ಭರವಸೆ ಮೇರೆಗೆ ಸಮುದಾಯದ 60 ಕುಟುಂಬಗಳು ಎನ್.ಆರ್.ಪುರ ಪಟ್ಟಣದಲ್ಲಿ ಉಳಿದು ಕೊಂಡಿವೆ. ಶಾಸಕರು ಹಾಗೂ ಅಧಿಕಾರಿಗಳು ನಡೆಸಿದ ಸಂದಾನ ಸಭೆಯಲ್ಲಿ 60 ಕುಟುಂಬಗಳು ಮತ್ತೆ ತಾವು ಮೊದಲು ವಾಸವಿದ್ದ ಸಿಗುವಾನಿ ಗ್ರಾಮಕ್ಕೆ ತೆರಳಲು ನಿರಾಕರಿಸಿದ್ದರಿಂದ ಕಂದಾಯಾಧಿಕಾರಿಗಳು ತಾಲೂಕು ವ್ಯಾಪ್ತಿಯಲ್ಲಿಯೇ ಬೇರೆಡೆ ನಿವೇಶನ ಕಲ್ಪಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಸಮುದಾಯದ 60 ಕುಟುಂಬಗಳ ಸದಸ್ಯರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದು, ಇದಕ್ಕೆ ಸಮುದಾಯದ ಮುಖಂಡರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎನ್.ಆರ್.ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಿಗುವಾನಿ ಗ್ರಾಮದಲ್ಲಿ ಕಂದಾಯ ಇಲಾಖೆ ನೀಡಿದ್ದ ಜಾಗದಲ್ಲಿ ಕಳೆದ 25 ವರ್ಷಗಳಿಂದ ವಾಸವಿದ್ದ ಹಕ್ಕಿಪಿಕ್ಕಿ ಹಾಗೂ ಹಾವು ಗೊಲ್ಲ ಸಮುದಾಯದವರು ಕಳೆದ ಗ್ರಹಣದ ಹಿಂದಿನ ದಿನ ಮಲೆಯಾಳಿ ಮಾಂತ್ರಿಕನ ಜ್ಯೋತಿಷ್ಯ ನಂಬಿ ರಾತ್ರೋರಾತ್ರಿ ಮನೆ, ಜಾಗ, ಜಾನುವಾರುಗಳನ್ನು ಸ್ಥಳದಲ್ಲೇ ಬಿಟ್ಟು ತೀರ್ಥಹಳ್ಳಿಗೆ ಗುಳೇ ಹೋಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕಳೆದ ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯಾಧಿಕಾರಿಗಳು ನಿವಾಸಿಗಳು ಸ್ಥಳ ತೊರೆದಿದ್ದ ಬಗ್ಗೆ ಖಚಿತಪಡಿಸಿಕೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರ ಆದೇಶದಂತೆ ಎನ್.ಆರ್.ಪುರ ತಹಶೀಲ್ದಾರ್ ಗೋಪಿನಾಥ್, ಕೋಟೇಶ್ವರ ಎಂಬಲ್ಲಿ ನೆಲೆಸಿದ್ದ ಹಕ್ಕಿಪಿಕ್ಕಿ ಸಮುದಾಯದ 60 ಕುಟುಂಬಗಳನ್ನು ರವಿವಾರ ಭೇಟಿ ಮಾಡಿ ಗ್ರಾಮಕ್ಕೆ ಬರುವಂತೆ ಮನವೊಲಿಸಿದ್ದರು. ಆ ಬಳಿಕವೂ ಸಮುದಾಯದ ಮುಖಂಡರು ತಾವು ಯಾವುದೇ ಕಾರಣಕ್ಕೂ ಆ ಸ್ಥಳಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಬೇರೆಡೆ ಜಾಗನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ಮೂಢಾಚರಣೆ ಅನುಸರಿಸುತ್ತಿದ್ದ ಕುಟುಂಬಗಳು
ಸಾಕಷ್ಟು ಮೂಢಾಚರಣೆ ಅನುಸರಿಸುತ್ತಿದ್ದ ಈ ಕುಟುಂಬಗಳ ಪೈಕಿ ಕಳೆದ 4 ವರ್ಷಗಳಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿಂತಿತರಾಗಿದ್ದ ಸಮುದಾಯದ ಮುಖಂಡರು ಇತ್ತೀಚೆಗೆ ಮಲೆಯಾಳಿ ಮಾಂತ್ರಿಕನೊಬ್ಬನ ಬಳಿಗೆ ಹೋಗಿ ತಮ್ಮ ಸಮುದಾಯದಲ್ಲಿ ಹೆಚ್ಚುತ್ತಿರುವ ಸಾವಿನ ರಹಸ್ಯದ ಬಗ್ಗೆ ತಿಳಿಸಿ ಪರಿಹಾರ ಸೂಚಿಸುವಂತೆ ಇತ್ತೀಚೆಗೆ ಕೇಳಿಕೊಂಡಿದ್ದರು. ಈ ವೇಳೆ ಮಲೆಯಾಳಿ ಜ್ಯೋತಿಷಿ, ಇಡೀ ಸಮುದಾಯದ ಜನರು ಗ್ರಹಣದ ಒಳಗಾಗಿ ಗ್ರಾಮವನ್ನು ತೊರೆದು ಬೇರೆಡೆಗೆ ಹೋಗಬೇಕು. ತಪ್ಪಿದಲ್ಲಿ ಸಾವಿನ ಸಂಖ್ಯೆ ಹೆಚ್ಚಲಿದೆ. ಗ್ರಹಣದ ದಿನ ಗ್ರಾಮದಲ್ಲಿ ಮೂವರು ಸಾವನ್ನಪ್ಪಲಿದ್ದು, ಉಳಿದವರು ರಕ್ತಕಾರಿ ಸಾಯಲಿದ್ದಾರೆಂದು ಹೇಳಿ ಹೆದರಿಸಿದ್ದ ಎಂದು ತಿಳಿದು ಬಂದಿದೆ.
ಮಲೆಯಾಳಿ ಮಾಂತ್ರಿಕನ ಮಾತು ನಂಬಿದ ಸಮುದಾಯದ ಎಲ್ಲ ಸದಸ್ಯರು ಗ್ರಹಣದ ಹಿಂದಿನ ದಿನ ಗುರುವಾರ ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿಕೊಂಡು ತಾಲೂಕಿನ ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಗುಳೇ ಹೋಗಿದ್ದರು. ಗ್ರಾಮದಲ್ಲಿ ಈ ಸಮುದಾಯದ ಸುಮಾರು 60 ಮನೆಗಳಿದ್ದು, ಬಹುತೇಕ ಕುಟುಂಬಗಳು ಗುಡೆಸಲುಗಳಲ್ಲಿಯೇ ವಾಸವಿದ್ದರು. ಗುರುವಾರ ರಾತ್ರೋರಾತ್ರಿ ಗ್ರಾಮ ತೊರೆಯುವ ಮುನ್ನ ನಿವಾಸಿಗಳು ತಾವು ಸಾಕುತ್ತಿದ್ದ ನಾಯಿ, ಹಂದಿ, ಕುರಿ, ಕೋಳಿ ಮತ್ತಿತರ ಪ್ರಾಣಿ, ಪಕ್ಷಿಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.