ಪ್ರಧಾನಿ ಮೋದಿ ಹಿಂದುತ್ವವಾದಿ, ಮೂಲಭೂತವಾದಿಗಳ ಚೌಕೀದಾರ: ಪ್ರೊ.ಮಹೇಶ್ ಚಂದ್ರಗುರು
ಮೈಸೂರು,ಜು.31: ಪ್ರಧಾನಿ ನರೇಂದ್ರ ಮೋದಿ ರೈತ, ಕಾರ್ಮಿಕ, ದಲಿತ, ಆದಿವಾಸಿ, ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಅಲಕ್ಷಿತ ಸಮುದಾಯದ ಚೌಕೀದಾರ ಆಗುವ ಬದಲು ಹಿಂದುತ್ವವಾದಿ, ಮೂಲಭೂತವಾದಿ, ಮಾರುಕಟ್ಟೆ ಶಕ್ತಿಗಳು ಮತ್ತು ಶೋಷಕ ಶಕ್ತಿಗಳ ಚೌಕೀದಾರ ಆಗಿ ಬದುಕುತ್ತಿರುವುದು ದೇಶಕ್ಕೆ ಮಾಡಿದ ಬಹುದೊಡ್ಡ ದ್ರೋಹ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಶ್ರೀ ಬಸವರಾಜ ಪಾಟೀಲ್ಗೌಡ ಯತ್ನಾಳ್ ನೀಡಿದ ಹಿಂದುತ್ವವಾದ ಮತ್ತು ಕೇಂದ್ರ ಸರ್ಕಾರವನ್ನು ವಿರೋಧಿಸುವ ಪ್ರಗತಿಪರರನ್ನು ಗುಂಡಿಟ್ಟು ಕೊಲ್ಲಬೇಕೆಂಬ ಬೇಜವಾಬ್ದಾರಿಯುತ ಹೇಳಿಕೆಯನ್ನು ವಿರೋಧಿಸಿ ಮೈಸೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಂಗಳವಾರ ನಗರದ ಟೌನ್ಹಾಲ್ ಅಂಬೇಡ್ಕರ್ ಪ್ರತಿಮೆ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಮೋದಿ ಸಾಹೇಬರು ಸಂಸತ್ತಿನ ಒಳಗೆ ಹೇಳುವುದು ಒಂದು, ಹೊರಗೆ ಮಾಡುವುದು ಮತ್ತೊಂದು. ಇವರು ಇತ್ತೀಚಿನ ದಿನಗಳಲ್ಲಿ ಭಾಗೀದಾರ್ ಮತ್ತು ಚೌಕೀದಾರ ಎಂಬ ಪದಗಳನ್ನು ಯಥೇಚ್ಛವಾಗಿ ಬಳಸಿ ಭಾರತೀಯರನ್ನು ದಾರಿತಪ್ಪಿಸುತ್ತಿದ್ದಾರೆ. ಇವರು ಶೋಷಿತ ಜನವರ್ಗಗಳ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿಲ್ಲ. ಬದಲಿಗೆ ಉದ್ದಿಮೆದಾರರು, ವ್ಯಾಪಾರಿಗಳು ಮತ್ತು ಮೇಲ್ಜಾತಿ ಪ್ರಭುತ್ವದ ಅಭಿವೃದ್ಧಿಯಲ್ಲಿ ಭಾಗಿಯಾಗಿರುವುದು ಸಂವಿಧಾನ ಮತ್ತು ಪ್ರಜಾಸತ್ತೆಗಳಿಗೆ ಬಗೆದಿರುವ ಬಹುದೊಡ್ಡ ಅಪಚಾರ ಎಂದು ಬೇಸರ ವ್ಯಕ್ತಪಡಿಸಿದರು.
2014ರಲ್ಲಿ ಭಾರತವನ್ನು ಸರ್ವಜನಾಂಗಗಳ ಶಾಂತಿಯ ತೋಟ ಮತ್ತು ಪ್ರಬುದ್ಧ ಭಾರತವನ್ನಾಗಿ ರೂಪಿಸುವ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಮತ್ತು ಯುವಕರು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಹಲವಾರು ಕಷ್ಟಗಳ ಸರಮಾಲೆಯನ್ನು ಎದುರಿಸಲು ಪ್ರಸ್ತುತ ಕೇಂದ್ರ ಸರ್ಕಾರವನ್ನು ನಿಯಂತ್ರಿಸುತ್ತಿರುವ ಹಿಂದುತ್ವವಾದಿಗಳೇ ನೇರ ಕಾರಣವೆಂದು ಆರೋಪಿಸಿದರು.
ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ವಾಸ್ತವವಾಗಿ ಸಂವಿಧಾನ, ಪ್ರಜಾಸತ್ತೆ, ನಾಗರಿಕ ಸಮಾಜ ಮತ್ತು ಮಾನವೀಯ ಮೌಲ್ಯಗಳ ವಾರಸುದಾರರು ಮತ್ತು ರಕ್ಷಕರು. ಇಂತಹ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರಿಂದಲೇ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ.
ಪ್ರೊ.ಭಗವಾನ್, ನೀಡುಮಾಮಿಡಿ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ಗಿರೀಶ್ ಕಾರ್ನಾಡ್, ನರೇಂದ್ರ ನಾಯಕ್, ಪ್ರಕಾಶ್ ರಾಜ್, ಮಹೇಶ್ ಚಂದ್ರಗುರು, ಬರಗೂರು ರಾಮಚಂದ್ರಪ್ಪ, ಹುಲಿಕಲ್ ನಟರಾಜ್ ಮೊದಲಾದ ಪ್ರಗತಿಪರರನ್ನು ಕೊಲ್ಲುವುದೇ ನಮ್ಮ ನಿಜವಾದ ಧರ್ಮವೆಂದು ಹೊರಟಿರುವ ಎನ್ಡಿಎ ಸರ್ಕಾರ ಕೃಪಾಪೋಷಿತ ಹಿಂದುತ್ವವಾದಿಗಳು ಪ್ರತಿಪಾದಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಒದಗಿರುವ ಬಹುದೊಡ್ಡ ಗಂಡಾಂತರವಾಗಿದೆ.
ಇತ್ತೀಚೆಗೆ ಬಸವರಾಜ ಪಾಟೀಲ್ ಯತ್ನಾಳ್ ಎಂಬ ಸಂವಿಧಾನ ದ್ರೋಹಿ, ಪ್ರಗತಿಪರರನ್ನು ಗುಂಡಿಕ್ಕಿ ಕೊಲ್ಲಬೇಕೆಂದು ನೀಡಿರುವ ಹೇಳಿಕೆಯನ್ನು ಕೇಳಿಯೂ ಮೌನವಾಗಿರುವ ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪ್ರಜಾಪ್ರಭುತ್ವದ ವಾರಸುದಾರರು ಸಂವಿಧಾನದ ಆಶಯಗಳು ಮತ್ತು ದೇಶದ ಕಾನೂನುಗಳಿಗೆ ಅನುಗುಣವಾಗಿ ಯತ್ನಾಳ್ ವಿರುದ್ಧ ಸೂಕ್ತ ಕ್ರಮ ಜರುಗಿಸದಿರುವುದನ್ನು ಕರ್ನಾಟಕದ ಜನ ಆತಂಕದಿಂದ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಪ್ರಗತಿಪರ ಸಂಘಟನೆಗಳ ಸಮನ್ವಯ ಸಮಿತಿಯನ್ನು ರಚಿಸಿ 'ಎನ್ಡಿಎ ಹಠಾವ್, ದೇಶ್ ಬಚಾವ್' ಆಂದೋಲನವನ್ನು ಸಂಘಟಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಸಿಪಿಐಎಂ ಪಕ್ಷದ ಬಸವರಾಜು, ಪಿಯುಸಿಎಲ್ ಧುರೀಣ ಡಾ.ಎನ್.ಲಕ್ಷ್ಮಿನಾರಾಯಣ್, ಪ್ರಗತಿಪರ ಚಿಂತಕಿ ಡಾ.ರತಿರಾವ್, ಸಿಪಿಐ ಧುರೀಣ ಮುದ್ದುಕೃಷ್ಣ, ದಸಂಸ ಮುಖಂಡರಾದ ವರದಯ್ಯ, ಶಂಭಯ್ಯ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ದೇವೇಂದ್ರ, ಮಹೇಶ್, ಜವರಪ್ಪ, ರೈತಸಂಘದ ಧುರೀಣರು ಮತ್ತಿತರ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.