ಮಡಿಕೇರಿ: ರಸ್ತೆ ಅಪಘಾತ; ಯುವತಿ ಸ್ಥಳದಲ್ಲೇ ಮೃತ್ಯು

Update: 2018-08-02 14:10 GMT

ಮಡಿಕೇರಿ, ಆ.2: ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಯುವತಿಯೋರ್ವಳು ಮೃತಪಟ್ಟ ಘಟನೆ ನಗರದ ಹೊರವಲಯದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಸಂಭವಿಸಿದೆ. 

ಕುಶಾಲನಗರದ ಹಾರಂಗಿ ಹೇರೂರು ಗ್ರಾಮದ ನಿವಾಸಿ ಭವ್ಯ(26) ಎಂಬಾಕೆಯೇ ಮೃತಪಟ್ಟ ಯುವತಿ.

ಸೋಮವಾರಪೇಟೆ ತಾಲೂಕು ಬಜೆಗುಂಡಿ ನಿವಾಸಿ ನವೀನ್ ಕುಮಾರ್ ತನ್ನ ಸ್ನೇಹಿತ ಮೋಹನ್ ಅವರೊಂದಿಗೆ ಆರ್.ಟಿ.ಓ. ಕಚೇರಿಗೆ ಆಗಮಿಸಿ ಚಾಲನಾ ಪರವಾನಗಿ ನವೀಕರಣ ಮಾಡಿಸಿಕೊಂಡು ಮಡಿಕೇರಿಗೆ ಬಂದಿದ್ದರು. ಈ ಸಂದರ್ಭ ಸಿಕ್ಕಿದ ಪರಿಚಿತೆ ಭವ್ಯಳೊಂದಿಗೆ ಅಬ್ಬಿಫಾಲ್ಸ್ ನೋಡಲು ಅಪಾಚಿ ಬೈಕ್ ನಲ್ಲಿ ತೆರಳಿದ್ದಾನೆ. ಮೋಹನ್ ಕೂಡ ಬೇರೊಂದು ಬೈಕ್‍ನಲ್ಲಿ ಇವರನ್ನು ಹಿಂಬಾಲಿಸಿದ್ದಾನೆ. ಆರ್.ಟಿ.ಓ. ಕಚೇರಿಯ ಮುಂದಿನ ಅಬ್ಬಿಫಾಲ್ಸ್ ರಸ್ತೆಯ ತಿರುವಿನಲ್ಲಿ ನವೀನ್‍ ಕುಮಾರ್ ಚಲಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿ ಬಿದ್ದಿದ್ದು, ಈ ಸಂದರ್ಭ ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಭವ್ಯ ರಸ್ತೆಗೆ ಬಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. 

ನವೀನ್ ಕುಮಾರ್ ಗೆ ಗಾಯಗಳಾಗಿದ್ದು, ಮತ್ತೊಂದು ಬೈಕ್‍ನಲ್ಲಿ ಬರುತ್ತಿದ್ದ ಮೋಹನ್ ಗೆ ಕೂಡ ತಿರುವು ರಸ್ತೆಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News