ರಾಜ್ಯದ 5 ಜಿಲ್ಲೆಗಳಲ್ಲಿ ಮರು ಭೂಮಾಪನಕ್ಕೆ ಸಚಿವ ದೇಶಪಾಂಡೆ ಆದೇಶ

Update: 2018-08-02 14:56 GMT

ಬೆಂಗಳೂರು, ಆ. 2: ರಾಜ್ಯದ ಹಾಸನ, ಬೆಳಗಾವಿ, ಉತ್ತರ ಕನ್ನಡ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮರು ಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ಆದೇಶ ನೀಡಿದ್ದಾರೆ.

ಮರು ಭೂಮಾಪನ ಮತ್ತು ಟಿಪ್ಪಣಿಗಳ ಗಣಕೀಕರಣ ಮಾಡುವ ಈ ಯೋಜನೆಗೆ ಕೇಂದ್ರ ಸರಕಾರವು ಡಿಐಎಲ್ಆರ್‌ಎಂಪಿ (ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್) ಪ್ರೋತ್ಸಾಹ ಯೋಜನೆಯಡಿ ಒಟ್ಟು 24.12 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಮರು ಭೂಮಾಪನ ಯೋಜನೆಯಡಿ, ಇಲಾಖೆಯಲ್ಲಿ ಲಭ್ಯವಿರುವ ಹಳೆಯ ಮೂಲ ದಾಖಲೆಗಳನ್ನು ಇಂದೀಕರಣ (ಅಪ್ಡೇಟಿಂಗ್) ಮಾಡಲು ಉದ್ದೇಶಿಸಲಾಗಿದೆ. ಇದರ ಪ್ರಕಾರ, ಆಧುನಿಕ ಸಾಧನಗಳ ಮೂಲಕ ಭೂಮಿಯ ಅಳತೆ ಕಾರ್ಯವನ್ನು ನಡೆಸಬೇಕು ಎಂದು ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಜುಲೈ 5ರಂದು ಮಂಡಿಸಿದ ಬಜೆಟ್‌ನಲ್ಲಿಯೂ ರಾಜ್ಯದೆಲ್ಲೆಡೆ ಹಂತಹಂತವಾಗಿ ಮರು ಭೂಮಾಪನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಈ ಮಧ್ಯೆ ರಾಜ್ಯದ 14 ಜಿಲ್ಲೆಗಳ 27 ಗ್ರಾಮಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಪ್ರಾಯೋಗಿಕವಾಗಿ ಮರು ಭೂಮಾಪನ ಕಾರ್ಯವನ್ನು ನಡೆಸಲಾಗಿತ್ತು. ಈ ಅನುಭವದ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರ ನೀಡಿರುವ ಅನುದಾನವನ್ನು ಬಳಸಿಕೊಂಡು 5 ಜಿಲ್ಲೆಗಳಲ್ಲಿ ಮರು ಭೂಮಾಪನ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ದೇಶಪಾಂಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News