ಹಾಸನ: ಅತೀವೃಷ್ಠಿ ಹಾನಿಗೆ ತ್ವರಿತ ಪರಿಹಾರ ಕ್ರಮ ಕೈಗೊಳ್ಳಲು ಡಿಸಿ ರೋಹಿಣಿ ಸಿಂಧೂರಿ ಸೂಚನೆ

Update: 2018-08-03 17:27 GMT

ಹಾಸನ, ಆ.3: ಜಿಲ್ಲೆಯ ವಿವಿದೆಡೆ ಅತೀವೃಷ್ಠಿಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ರಾಷ್ಟೀಯ ಪ್ರಕೃತಿ ವಿಕೋಪ ನಿಧಿ ಮಾನದಂಡದಂತೆ ಪರಿಹಾರಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆ. 2ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯ ಅನುಪಾಲನೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು ಎನ್.ಡಿ.ಆರ್.ಎಫ್ ಯೋಜನೆಯಡಿ ಇರುವ ಅನುದಾನ ಸದ್ಬಳಕೆ ಮಾಡಿ ಮಳೆಹಾನಿ ಪರಿಹಾರ ಕೈಗೊಳ್ಳುವಂತೆ ತಿಳಿಸಿದರು. ಅತಿವೃಷ್ಠಿ ಹಿನ್ನಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಬೆಳೆ, ಮನೆ, ಜಾನುವಾರು, ಜೀವಹಾನಿಗೆ ಪರಿಹಾರ ನೀಡುವುದರ ಜೊತೆಗೆ ಸರ್ಕಾರಿ ಕಟ್ಟಡಗಳು, ರಸ್ತೆಗಳು, ಮೋರಿ, ಚರಂಡಿಗಳ ದುರಸ್ಥಿ, ಕುಡಿಯುವ ನೀರು, ವಿದ್ಯುತ್ ಸಂರ್ಪಕಗಳನ್ನು ಸರಿಪಡಿಸುವ ಕಾರ್ಯ ಕೈಗೊಳ್ಳಬಹುದಾಗಿದೆ ಎಂದರು.

ಮಳೆಯಿಂದ ಹಾನಿಗೀಡಾಗಿರುವ ಅಂಗನವಾಡಿ, ಆಸ್ಪತ್ರೆ, ಶಾಲಾ ಕಟ್ಟಡಗಳು, ರಸ್ತೆ, ಮೋರಿ, ಚರಂಡಿಗಳನ್ನು ಗುರುತಿಸಿ ಅಂದಾಜು ವೆಚ್ಚ ಪಟ್ಟಿ ಸಿದ್ದಪಡಿಸಿ ಕಾಮಗಾರಿ ಕೈಗೊಳ್ಳಿ. ಮನೆ, ಕೊಟ್ಟಿಗೆ, ಜಮೀನುಗಳಿಗೆ ಉಂಟಾಗಿರುವ ಹಾನಿಯನ್ನು ಭರಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಮುಖ್ಯಮಂತ್ರಿಯವರು ಜನತಾದರ್ಶದಲ್ಲಿ ಸ್ವೀಕರಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಕಳಿಸಲಾಗುವ ಪತ್ರಗಳನ್ನು ಮೊದಲ ಆದ್ಯತೆ ಮೇರೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ. ಜಗದೀಶ್ ಮಾತನಾಡಿ, ಎಲ್ಲಾ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ. ಸರ್ಕಾರದ ಸಾಮಾಜಿಕ ಏಳಿಗೆಯ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿ ಸಿಬ್ಬಂದಿಗಳು ಬದ್ದತೆಯಿಂದ, ಆಸಕ್ತಿಯಿಂದ ಹಾಗೂ ಪ್ರಾಮಾಣಿಕತೆಯಿಂದ ತೊಡಗಿಕೊಳ್ಳಬೇಕು ಎಂದರು. ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿಯಾಗಬೇಕು, ಸ್ವಚ್ಚತೆ, ಕುಡಿಯುವ ನೀರು ಪೂರೈಕೆ ಬಗ್ಗೆ ಗ್ರಾಮ ಪಂಚಾಯತ್ ಗಳು ಇನ್ನಷ್ಟು ಹೆಚ್ಚಿನ ಗಮನ ಹರಿಸಬೇಕು ಎಂದರು.

ಎಲ್ಲಾ ಗ್ರಾಮೀಣ ವಿದ್ಯಾರ್ಥಿ ವಸತಿ ನಿಲಯಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಸಂಜೆ ಉಳಿದುಕೊಳ್ಳುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮಾತ್ರ ಹಣ ಪಾವತಿಯಾಗಬೇಕು. ನಕಲಿ ಲೆಕ್ಕಗಳಿಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಲ್ಲಾ ಹಾಸ್ಟೆಲ್‍ಗಳಿಗೆ ಸಮೀಪದ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಪರಿವೀಕ್ಷಕರು ಒಂದೊಂದು ದಿನ ಭೇಟಿ ನೀಡಿ ಸಂಜೆವರೆಗೂ ಪರಿಶೀಲಿಸಿ ವಾಸ್ತವಾಂಶಗಳ ಬಗ್ಗೆ ವರದಿ ನೀಡಲು ಆದೇಶ ಹೊರಡಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಡಾ. ಹೆಚ್.ಎಲ್ ನಾಗರಾಜು, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಪ್ರಿಯಾಂಕ ಎಂ. ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News