×
Ad

ದಾವಣಗೆರೆ: ಉ.ಕ ಅಭಿವೃದ್ಧಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಧರಣಿ

Update: 2018-08-03 23:03 IST

ದಾವಣಗೆರೆ,ಆ.03: ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. 

ನಗರದ ಶ್ರೀ ಜಯದೇವ ವೃತ್ತದಿಂದ ವಿಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ನೇತೃತ್ವದಲ್ಲಿ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಎಸಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಯಿತು. 

ಇದೇ ವೇಳೆ ಮಾತನಾಡಿದ ಕೆ.ಜಿ.ಯಲ್ಲಪ್ಪ, ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣದ ಮೂಲಕ ಅಖಂಡ ಕರ್ನಾಟಕವನ್ನಾಗಿ ಒಗ್ಗೂಡಿಸುವಲ್ಲಿ ಅದರಲ್ಲೂ ಏಕೀಕರಣದ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರೇ ಉತ್ತರ ಕರ್ನಾಟಕದ ಮಹನೀಯರು ಎಂಬುದನ್ನು ಸರ್ಕಾರವೂ ಅರಿಯಬೇಕು. ಉ.ಕ ದವರಿಂದಲೇ ಅಖಂಡ ಕರ್ನಾಟಕವೂ ರೂಪುಗೊಂಡಿದೆ ಎಂದರು. 

ಅಲ್ಲದೇ, ಉತ್ತರ ಕರ್ನಾಟಕದ ಅನೇಕರ ತ್ಯಾಗ, ಬಲಿದಾನದಿಂದಲೇ ನಮ್ಮ ರಾಜ್ಯ ಅಖಂಡವಾಗಿದೆ. ಆದರೆ, ಇಂತಹ ಕೊಡುಗೆ ನೀಡಿದ ಉತ್ತರ ಕರ್ನಾಟಕವನ್ನೇ ಈವರೆಗೆ ಆಳಿದ ಸರ್ಕಾರಗಳು ಕಡೆಗಣಿಸಿವೆ. ಅಲ್ಲದೇ, ಅದೇ ಭಾಗವನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳು ತಮ್ಮ ಭಾಗದ ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ತೋರುತ್ತಾ ಬಂದಿದ್ದು ಸರಿಯಲ್ಲ. ಇಂದಿಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಆಗಿಲ್ಲ ಎಂದು ದೂರಿದ ಅವರು, ಕುಡಿಯುವ ನೀರಿಗಾಗಿ ಮಹದಾಯಿ ಯೋಜನೆ, ಕಳಸಾ ಬಂಡೂರಿ ನಾಲಾ ಜೋಡಣೆ ಹಾಗೂ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಹೊಟ್ಟೆಪಾಡಿಗಾಗಿ ಇಂದಿಗೂ ಜನರು ಗುಳೇ ಹೋಗುವುದನ್ನು ಕಾಣುತ್ತಿದ್ದೇವೆ. ಇದನ್ನೆಲ್ಲಾ ತಡೆಗಟ್ಟುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಆಳುವ ಸರ್ಕಾರಗಳು ಯಾಕೆ ಮಾಡಿಲ್ಲ? ಈವರೆಗೆ ಆಳಿದ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಕಡೆಗಣಿಸಿದ್ದು ಸಹ ಪ್ರತ್ಯೇಕತೆ ಕೂಗಿದೆ ಕಾರಣವಾಗಿದೆ ಎಂದರು. 

ಕರ್ನಾಟಕವೆಂದರೆ ಕೇವಲ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ರಾಮನಗರವಲ್ಲ. ಇಡೀ ರಾಜ್ಯವೇ ಕರ್ನಾಟಕವೆಂಬುದನ್ನು ಸಿಎಂ ಅರಿಯಬೇಕು. ಮೈತ್ರಿ ಸರ್ಕಾರದ ತಮ್ಮ ಚೊಚ್ಚಲ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಸಮರ್ಪಕ ಅನುದಾನವನ್ನೇ ಕುಮಾರಸ್ವಾಮಿ ಒದಗಿಸಲಿಲ್ಲ. ದಾವಣಗೆರೆ ಜಿಲ್ಲೆಗೂ ಯಾವುದೇ ಅನುಕೂಲ ಮಾಡಿಕೊಡದೇ, ಪ್ರಾದೇಶಿಕ ಅಸಮಾನತೆ ಸೃಷ್ಟಿಗೆ ಸ್ವತಃ ಮೈತ್ರಿ ಸಿಎಂ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. 

ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರಗಳು ಮಲತಾಯಿ ಧೋರಣೆಯನ್ನೇ ಅನುಸರಿಸಿಕೊಂಡು ಬಂದಿವೆ. ಇದೀಗ ಮೈತ್ರಿ ಸರ್ಕಾರದಲ್ಲೂ ಕುಮಾರಸ್ವಾಮಿ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಧೋರಣೆಯಿಂದಲೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕತೆಯ ಕೂಗು ಮೊಳಗಿದೆ. ತಕ್ಷಣವೇ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕುಮಾರಸ್ವಾಮಿ ಮುಂದಾಗಲಿ. ಬೃಹತ್ ಕೈಗಾರಿಕೆಗಳನ್ನು, ಸರ್ಕಾರಿ ಯೋಜನೆ ಉತ್ತರ ಕರ್ನಾಟಕಕ್ಕೆ ಕಲ್ಪಿಸಿ, ಅಲ್ಲಿನ ಜನರ ಬದುಕನ್ನೂ ಹಸನಾಗಿಸಲಿ ಎಂದರು. 

ಪ್ರತಿಭಟನೆಯಲ್ಲಿ ವೇದಿಕೆ ಮುಖಂಡರಾದ ಎಸ್.ನಾಗರಾಜ ಗೌಡ, ಎಸ್. ಶ್ರೇಯಸ್, ಅಮ್ಜದ್ ಅಲಿ, ಸೈಯದ್ ನಜೀರ್, ಸಿಕಂದರ್ ಹಜರತ್, ತೆಲಗಿ ರಾಮಣ್ಣ, ಆರೀಫ್, ಶಿವಣ್ಣ, ಮಂಜುನಾಥ ಗಂಗೂರ್, ಮಂಜುನಾಥ ಪವಾರ್, ನಾಗರಾಜ, ಗಿರೀಶ, ಸಂತೋಷ ದೊಡ್ಮನಿ, ದಯಾನಂದ, ಬಾಬುರಾವ್, ಮುನೀರ್, ಖೇಮರ್, ಅಜಂ, ಶಫೀ, ಮಂಜುನಾಥ ಸ್ವಾಮಿ, ಸೈಯದ್ ಅಕ್ಬರ್, ಕೆ.ಎಚ್. ಮಹಬೂಬ್, ಬಿಲಾಲ್, ಮೊಹಿಯುದ್ದೀನ್, ಬೀರಪ್ಪ, ನಿಸಾರ್ ಅಹಮ್ಮದ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News