×
Ad

ಪತ್ರಕರ್ತರು ರಾಜಕಾರಣಿ, ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳಬೇಕು: ಹಿರಿಯ ಪತ್ರಕರ್ತ ಬಿ.ಎಂ. ಹನೀಫ್

Update: 2018-08-05 18:34 IST

ದಾವಣಗೆರೆ,ಆ.05: ಪತ್ರಕರ್ತರು ರಾಜಕಾರಣಿ, ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಜನರ ಕೆಲಸಕ್ಕಾಗಿ ಮಾತ್ರ ಅವರನ್ನು ಸಂಪರ್ಕದಲ್ಲಿಟ್ಟುಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸಲಹೆ ನೀಡಿದರು.

ಭಾನುವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ವರದಿಗಾರರ ಕೂಟದಿಂದ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ರಾಜಕಾರಣಿಗಳು ಜನರು ಕೊಟ್ಟ ಅಧಿಕಾರದಿಂದ ಆಡಳಿತ ನಡೆಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳಿಗೆ ನೀವು ಸಮಾಜ ಸೇವಕರೆಂದು ನೆನಪಿಸುವ ಪ್ರಯತ್ನವಾಗಬೇಕು. ಸ್ನೇಹ, ನೆರವು, ಜಾತಿ ಹೆಸರಿನಲ್ಲಿ ಬರುವ ಆಮಿಷ ಮೀರಿ ಕೆಲಸ ಮಾಡಬೇಕು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪತ್ರಕರ್ತರು ಮೊದಲು ತಾವು ಶುದ್ಧವಾಗಿರಬೇಕು ಎಂದರು.

ಪ್ರಬುದ್ಧ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿದೆ. ಹಾಗೆಯೇ ಸ್ವತಂತ್ರ ಪತ್ರಿಕೆಗಳ ಸಂಖ್ಯೆಯೂ ಇನ್ನೂ ಹೆಚ್ಚಳ ಆಗಬೇಕಿದೆ ಎಂದ ಅವರು, ಇಂದಿನ ದಿನಗಳಲ್ಲಿ ಕಮಿಷನ್ ದಂಧೆಯೇ ಅಭಿವೃದ್ಧಿ ಎಂಬಂತಾಗಿದೆ. ಕಾಮಗಾರಿಗಳಿಗೆ ಮಂಜೂರಾದ ಒಟ್ಟು ಹಣದಲ್ಲಿ ಶೇ. 40ರಷ್ಟು ಮಾತ್ರವೇ ಸದ್ಬಳಕೆಯಾಗುತ್ತಿದೆ. ಇನ್ನುಳಿದ ಹಣವು ಕಮಿಷನ್ ರೂಪದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೇಬು ಸೇರುತ್ತಿದೆ. ಇದರ ವಿರುದ್ಧ ಧ್ವನಿ ಎತ್ತಲು ಸ್ವತಂತ್ರ ಮಾಧ್ಯಮಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎಂದರು.

ಪತ್ರಕರ್ತರು ಮಾಹಿತಿ ಪಡೆಯುವ ಸಲುವಾಗಿ ಅಧಿಕಾರಿ, ರಾಜಕಾರಣಿಗಳನ್ನು ಓಲೈಸುವ ಅಗತ್ಯವಿಲ್ಲ. ಅದಕ್ಕಾಗಿ ನಾನಾ ದಾರಿಗಳಿವೆ. ಯಾವುದೇ ಸಂದರ್ಭ ಪತ್ರಕರ್ತರು ಪ್ರಾಮಾಣಿಕತೆ ಮರೆಯಬಾರದು. ಭಾಷೆಯ ಬಳಕೆ, ಸಾರ್ವಜನಿಕ ಸಂಬಂಧ ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಳೆದ ವರ್ಷಗಳಿಗೆ ಹೋಲಿಸಿದರೆ ಈಗ ದಾವಣಗೆರೆ ಸಾಕಷ್ಟು ಸುಧಾರಣೆಯಾಗಿದೆ. ಇದರಲ್ಲಿ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದರು.

ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಸ್ಮಾರ್ಟ್ ಕೆಲಸಗಳು ಆಗುವಂತೆ ಪತ್ರಕರ್ತರು ನಿಗಾ ವಹಿಸಬೇಕು. ಚೆನ್ನಾಗಿರುವ ರಸ್ತೆಯನ್ನೇ ಅಗೆದು, ಕಾಮಗಾರಿಯ ಹಣ ಕೊಳ್ಳೆ ಹೊಡೆಯುವುದು ಅಭಿವೃದ್ಧಿಯಲ್ಲ. ಸಮಾಜಕ್ಕೆ ಒಳಿತಾಗುವ ಕೆಲಸಗಳ ಬಗ್ಗೆ ಪತ್ರಕರ್ತರು ಗಮನ ಹರಿಸಬೇಕು ಎಂದರು.

24*7 ಮಾಧ್ಯಮ ಯುಗದಲ್ಲಿ ಪತ್ರಿಕಾ ಕ್ಷೇತ್ರದಲ್ಲೂ ಧಾವಂತ ಮನೆ ಮಾಡುತ್ತಿದೆ. ಇದರಿಂದಾಗಿ ಪತ್ರಕರ್ತರೂ ಹೆಚ್ಚುವರಿ ಕೆಲಸ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ. ಎಕ್ಸ್‍ಕ್ಲೂಸಿವ್ ಸುದ್ದಿಗಳಿಗೆ ಮಹತ್ವ ಕೊಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಆದರೂ ಇತ್ತೀಚಿನ ಪತ್ರಕರ್ತರಲ್ಲಿ ಭಾಷಾಂತರ ಜ್ಞಾನ ಕಡಿಮೆ ಇದ್ದು, ಈ ಬಗ್ಗೆ ತರಬೇತಿ ಅಗತ್ಯವಿದೆ. ಕನ್ನಡವನ್ನು ಅದ್ಭುತವಾಗಿ ಬರೆಯಬಲ್ಲ ಪತ್ರಕರ್ತರಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಪತ್ರಕರ್ತರಾದ ಎನ್.ಆರ್. ನಟರಾಜ್, ಹೆಚ್.ಎಂ. ರಾಜಶೇಖರ, ಮಂಜುನಾಥ ಕಾಡಜ್ಜಿ, ಐ. ಗುರುಶಾಂತಪ್ಪ, ಹೆಚ್.ಟಿ. ಪರಶುರಾಮ ಅವರಿಗೆ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಎಸ್. ಬಡದಾಳ್ ಪ್ರಾಸ್ತಾವಿಕ ಮಾತನಾಡಿದರು. ಖಜಾಂಚಿ ಎಲ್. ತಾರಾನಾಥ್, ಮಾಜಿ ಅಧ್ಯಕ್ಷರಾದ ಕೆ. ಏಕಾಂತಪ್ಪ, ಬಸವರಾಜ ದೊಡ್ಮನಿ, ಜಿ.ಎಂ.ಆರ್. ಆರಾಧ್ಯ, ಗಣೇಶ ಕಮ್ಲಾಪುರ, ವಿನಾಯಕ ಪೂಜಾರ  ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News