×
Ad

ಮಡಿಕೇರಿ: ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ಹಿಮವನ ಪ್ರತಿಭಾ ಸಂಗಮ

Update: 2018-08-05 19:55 IST

ಮಡಿಕೇರಿ, ಆ.5: ಮಕ್ಕಳು ತಮ್ಮಲ್ಲಿನ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಕರೆ ನೀಡಿದ್ದಾರೆ. 

ನಗರದಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಸಾಹಿತ್ಯ, ಸಾಂಸ್ಕೃತಿಕ ಅಭಿನಂದನಾ ಕಾರ್ಯಕ್ರಮವಾದ ಹಿಮವನ ಪ್ರತಿಭಾ ಸಂಗಮ  ಉದ್ಘಾಟಿಸಿ ಮಾತನಾಡಿದ ಅನಂತಶಯನ, ಪ್ರತಿಯೊಂದು ಮಗುವಿನಲ್ಲಿಯೂ ಅಪ್ಪಟ ಪ್ರತಿಭೆಯಿರುತ್ತದೆ. ಆದರೆ ಅದನ್ನು ಹೊರಹೊಮ್ಮಿಸುವ ವಿಧಾನ ತಿಳಿದಿರುವುದಿಲ್ಲ. ಹೀಗಾಗಿ ಮನದಲ್ಲಿ ಧೂಳುಹಿಡಿದಂತಿರುವ ಪ್ರತಿಭೆಯನ್ನು ಹೊರತರಲು ಬುದ್ದಿವಂತಿಕೆಯನ್ನು ಬಳಸಿಕೊಳ್ಳಬೇಕು. ಪೋಷಕರು, ಶಿಕ್ಷಕರು, ಹಿರಿಯರಿಗೆ ಗೌರವ ನೀಡುವ ಮನೋಭಾವನೆ ಚಿಕ್ಕಂದಿನಲ್ಲಿಯೇ ಬರಬೇಕೆಂದು ಹೇಳಿದರು. 

ಪ್ರತೀ ಕ್ಷಣ, ಪ್ರತೀ ನಿತ್ಯ ಕೂಡ ಅಮೂಲ್ಯವಾಗಿದ್ದು, ಸ್ಪರ್ಧಾತ್ಮಕ ದಿನಗಳು ಇದಾಗಿರುವುದರಿಂದಾಗಿ ಮಕ್ಕಳ ವಿಶೇಷತೆಯ ಗುಣಗಳು ಅನಾವರಣಗೊಳ್ಳಲೇಬೇಕಾದ ಅನಿವಾರ್ಯತೆ ಈಗಿದೆ ಎಂದು ಅನಂತಶಯನ ಅಭಿಪ್ರಾಯಪಟ್ಟರು.

ಕೈ ದೀವಿಗೆ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಂಗೀತಾ ರವಿರಾಜ್, ಕನ್ನಡ ಭಾಷಿಕರೇ ಕಡಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪ್ರಜ್ವಲಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ. ಮೊಬೈಲ್, ಟಿವಿಗಳಿಂದ ಮಕ್ಕಳು ಓದುವುದಿಲ್ಲ ಎಂಬ ಅಪವಾದ ಮಾಡುವುದಕ್ಕಿಂತ ಮನೆಯಲ್ಲಿಯೇ ಮಕ್ಕಳಿಗೆ ಕಿರು ಗ್ರಂಥಾಲಯ, ಪುಸ್ತಕಗಳನ್ನು ವ್ಯವಸ್ಥೆಗೊಳಿಸಿ ಸಾಹಿತ್ಯಾಭಿರುಚಿ ಮೂಡಿಸುವ ಪ್ರಯತ್ನ ಮೊದಲಿಗೆ ಆಗಬೇಕೆಂದು ಕರೆ ನೀಡಿದರು. 

ವಿವೇಕಪಥ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಮರ್ಥ ಕನ್ನಡಿಗ ಸಂಸ್ಥೆಯ ಕಾರ್ಯಕ್ರಮ ಪ್ರಧಾನ ಸಂಚಾಲಕ ಬಸವರಾಜು ಕಲ್ಲುಸಕ್ಕರೆ, ಸರ್ಕಾರಿ ಶಾಲೆಗಳನ್ನು ರಾಜ್ಯದಲ್ಲಿ ಉಳಿಸುವ ನಿಟ್ಟಿನಲ್ಲಿ ಸಮರ್ಥ ಕನ್ನಡಿಗರು ಸಂಸ್ಥೆಯು ಪ್ರತೀಯೋರ್ವ ಕನ್ನಡಿಗನಿಂದಲೂ ತಲಾ 1 ರೂಪಾಯಿ ದೇಣಿಗೆ ಸಂಗ್ರಹಿಸುತ್ತಿದೆ. ಈ ರೀತಿ 6 ಕೋಟಿ ಕನ್ನಡಿಗರಿಂದ ಸಂಗ್ರಹಿತ 6 ಕೋಟಿ ರೂ. ಹಣದಲ್ಲಿ ಅಳಿವಿನಂಚಿನಲ್ಲಿರುವ ಕನ್ನಡ ಶಾಲೆಗಳ ರಕ್ಷಣೆ ಸಾಧ್ಯ ಎಂದು ಹೇಳಿದರು. 

ಗಮಕ ದುಂಧುಬಿ ಪತ್ರಿಕೆಯ ಪ್ರಧಾನ ಸಂಪಾದಕ ಕೃ.ಪಾ.ಮಂಜುನಾಥ್ ಮಾತನಾಡಿ, ಎಷ್ಟು ಸಾವಿರ ಪುಸ್ತಕಗಳನ್ನು ರಚಿಸಿದ್ದೇವೆ ಎನ್ನುವುದಕ್ಕಿಂತ ಸಾವಿರದ ಸಾಹಿತ್ಯವನ್ನು ಎಷ್ಟು ರಚಿಸಿದ್ದೇವೆ ಎನ್ನುವುದು ಮುಖ್ಯ ಎಂದರು. ಉದಯೋನ್ಮುಖ ಕವಿ, ಸಾಹಿತಿಗಳಿಗೆ ಸಮರ್ಥ ಕನ್ನಡಿಗ ಸಂಸ್ಥೆಯು ಸೂಕ್ತ ವೇದಿಕೆ ಕಲ್ಪಿಸುತ್ತಾ ಸಾಹಿತ್ಯ, ಸಂಸ್ಕೃತಿಯ ರಕ್ಷಣೆಗೆ ಮುಂದಾಗಿದೆ. ಕಾವ್ಯ ಎಂಬುದು ಕವಿಗಳ ಚಿಂತನೆ, ಚೇತನದ ಪ್ರತೀಕವಾಗಬೇಕೆಂದು. ಆತುರದ ಸಾಹಿತ್ಯ ರಚನೆಗಿಂತ ಸ್ಮರಣೀಯ ಸಾಹಿತ್ಯ ರಚನೆ ಮುಖ್ಯವಾಗಬೇಕೆಂದು ಹೇಳಿದರು.

ಸಮರ್ಥ ಕನ್ನಡಿಗ ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮೀ ಮಾತನಾಡಿ, ಕೊಡಗಿನಲ್ಲಿ ಸಾಹಿತಿಗಳು, ಕವಿಗಳು, ಬರಹಗಾರರು, ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರತರಾಗಿರುವವರನ್ನು ಪ್ರೋತ್ಸಾಹಿಸಲು ಸಮರ್ಥ ಕನ್ನಡಿಗ ಸಂಸ್ಥೆ ಬದ್ದವಾಗಿದೆ. ಹೊಸಬರಿಗೆ ವೇದಿಕೆಯಲ್ಲಿ ಅವಕಾಶ ನೀಡುತ್ತಾ ಸುಪ್ತ ಪ್ರತಿಭೆಗಳನ್ನು ಸಾಹಿತ್ಯ ಮತ್ತು ಕಲಾ ಲೋಕಕ್ಕೆ ಪರಿಚಯಿಸಲಾಗುತ್ತದೆ ಎಂದು ತಿಳಿಸಿದರು.

ಸಮರ್ಥ ಕನ್ನಡಿಗ ಸಂಸ್ಥೆಯ ಮೈಸೂರು ಜಿಲ್ಲೆಯ ಪ್ರಧಾನ ಸಂಚಾಲಕ ದೊರೆಸ್ವಾಮಿ ಸಿದ್ದೇಗೌಡ, ಗೌರವ ಸಲಹೆಗಾರ ಲಿಂಗೇಶ್ ಹುಣಸೂರು ವೇದಿಕೆಯಲ್ಲಿದ್ದರು. ಮೌನ ವಿ.ಜಯಕುಮಾರ್ ಭರತನಾಟ್ಯ ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ಲವೀನ್ ಲೋಪೇಸ್ ಸ್ವಾಗತಿಸಿ, ಡಾ.ವೀಣಾ ನಿರೂಪಿಸಿ, ದಿಲೀಶ್ ಜಿ.ನಾಯರ್ ವಂದಿಸಿದರು. 

ಜಿಲ್ಲೆಯಾದ್ಯಂತಲಿನಿಂದ ಬಂದಿದ್ದ ವಿದ್ಯಾರ್ಥಿಗಳು ಹಿಮವನ ಪ್ರತಿಭಾ ಸಂಗಮದ ಅಂಗವಾಗಿನ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News