ಓ ಮೆಣಸೇ...

Update: 2018-08-05 18:49 GMT


ಕಾಂಗ್ರೆಸ್-ಜೆಡಿಎಸ್ ಅನೇಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿ ನಾಯಕ
ದೈಹಿಕ ಸಂಪರ್ಕದ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಿ.

---------------------
 

ನಾನು ಉದ್ಯಮಿಗಳೊಂದಿಗೆ ಕಾಣಿಸಿಕೊಳ್ಳಲು ಹೆದರುವುದಿಲ್ಲ - ನರೇಂದ್ರ ಮೋದಿ, ಪ್ರಧಾನಿ
 
ಬಡವರೊಂದಿಗೆ ಕಾಣಿಸಿಕೊಳ್ಳುವುದಕ್ಕಷ್ಟೇ ಹೆದರಿಕೆ.

---------------------

ಇಂದಿನ ಬಹುತೇಕ ರಾಜಕಾರಣಿಗಳ ತಲೆಯಲ್ಲಿ ವೌಢ್ಯವೆಂಬ ಮಲ ತುಂಬಿದೆ - ಪ್ರೊ ಕಾಳೇಗೌಡ ನಾಗಾವರ, ಸಾಹಿತಿ
 
ಮಲಹೊರುವ ಪದ್ಧತಿ ಜಾರಿಯಲ್ಲಿರುವುದು ಕಾರಣವಿರಬಹುದು.

---------------------
 
ನನಗೆ ವಯಸ್ಸಾಗಿದ್ದರಿಂದ ಮಂತ್ರಿ ಮಾಡಲ್ಲ ಅಂತಾರೆ ಅದಕ್ಕೆ ನಾನೇನು ಮಾಡಲು ಸಾಧ್ಯ - ಶಾಮನೂರು ಶಿವಶಂಕರಪ್ಪ, ಶಾಸಕ
ವಯಸ್ಸಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸುವುದು.

---------------------
 
ಹೈಕಮಾಂಡ್ ಒಪ್ಪಿದರೆ ಆಪರೇಷನ್ ಕಮಲ ನಡೆಸಲು ಸಿದ್ಧ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
 
ಯಾವ ಆಪರೇಷನ್ ನಡೆಸಿದರೂ ‘ಕ’ ದಿಂದ ‘ಮಲ’ವನ್ನು ಬೇರ್ಪಡಿಸಲು ಅಸಾಧ್ಯ.

---------------------
 
ನಾನು ಶಾಸಕನಾದಾಗೆಲ್ಲ ಭದ್ರಾ ಜಲಾಶಯ ತುಂಬುತ್ತದೆ - ಬಿ.ಕೆ. ಸಂಗಮೇಶ್ವರ್, ಶಾಸಕ
 
ಭದ್ರ ಜಲಾಶಯ ನಿರ್ಮಾಣ ಮಾಡಿರುವುದೇ ನೀವು ಶಾಸಕರಾಗಿ ಆಯ್ಕೆಯಾಗುವುದಕ್ಕಂತೆ.

---------------------
 
ಸಿದ್ದರಾಮಯ್ಯ ಧರ್ಮ ಒಡೆದರೆ ಕುಮಾರಸ್ವಾಮಿ ರಾಜ್ಯ ಒಡೆಯುತ್ತಿದ್ದಾರೆ - ಶೋಭಾ ಕರಂದ್ಲಾಜೆ, ಸಂಸದೆ

ಅಂದರೆ ನಿಮಗೆ ಒಡೆಯುವುದಕ್ಕೆ ಏನನ್ನೂ ಉಳಿಸಿಲ್ಲ ಎಂದು ಚಿಂತೆಯೇ?
---------------------


ಬಳ್ಳಾರಿ ಪ್ರವೇಶ ನಿಷೇಧ ವನವಾಸಕ್ಕೆ ಸಮ - ಜನಾರ್ದನ ರೆಡ್ಡಿ, ಮಾಜಿ ಸಚಿವ
  ಜೈಲು ವಾಸ ಯಾವುದಕ್ಕೆ ಸಮ?
---------------------
 
ನಮ್ಮದು ನಿಜವಾದ ಪ್ರಜಾಪ್ರಭುತ್ವ ಪಕ್ಷ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಪ್ರಜೆಗಳಿಂದ ದೋಚುವ ಪ್ರಭುತ್ವ ಪಕ್ಷವಾಗಿರಬಹುದು.

---------------------
 
ನಾನು ಸಮಗ್ರ ಕರ್ನಾಟಕದ ಮುಖ್ಯಮಂತ್ರಿ - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಕಾಂಗ್ರೆಸ್ ಅದನ್ನು ಸಮಗ್ರವಾಗಿ ಒಪ್ಪುವವರೆಗೆ.

---------------------
 
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಸಿಕ್ಕರೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನನ್ನ ಜಯ ಖಚಿತ - ವೀರಪ್ಪ ಮೊಯ್ಲಿ, ಸಂಸದ
  ಇವಿಎಂ ಬೆಂಬಲ ಸಿಕ್ಕಿದರೆ ಸಾಕಾಗುವುದಿಲ್ಲವೇ?

---------------------

ಜಾತಿ, ಧರ್ಮ, ಪ್ರಾಂತದ ಹೆಸರಿನಲ್ಲಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಒಡೆಯುವುದು ಸುಲಭದ ಕೆಲಸವಲ್ಲ - ಕೆ.ಎಸ್. ಈಶ್ವರಪ್ಪ, ಶಾಸಕ
ಜಾತಿ ಧರ್ಮದ ಹೆಸರಲ್ಲಿ ಜನರ ತಲೆ ಒಡೆಯುವುದಷ್ಟೇ ನಿಮಗೆ ಸುಲಭ.

---------------------
   
ಪರಿಸರ ಸಮತೋಲನದಿಂದ ಮಾತ್ರ ನಿಜವಾದ ಅಭಿವೃದ್ಧಿ ಸಾಧಿಸಲು ಸಾಧ್ಯ - ಯು.ಟಿ. ಖಾದರ್, ಸಚಿವ

ಜೊತೆಗೆ ಆಳುವವರಿಗೆ ಬುದ್ಧಿ ಸಮತೋಲನದ ಅಗತ್ಯವೂ ಇದೆ.

---------------------

ಮಂತ್ರಿಗಿರಿಗಿಂತ ಪಕ್ಷದ ಅಧ್ಯಕ್ಷ ಹುದ್ದೆ ದೊಡ್ಡದು - ಡಿ.ಕೆ. ಶಿವಕುಮಾರ್, ಸಚಿವ

ಡಿಕೆಶಿಯವರಿಗಿಂತ ದೊಡ್ಡದೇನೂ ಅಲ್ಲ ಬಿಡಿ.

---------------------

ತುಲಾಭಾರ, ಪಾದಪೂಜೆಗಳಂತಹ ಪ್ರಕ್ರಿಯೆಗಳು ಜನರನ್ನು ಧಾರ್ಮಿಕವಾಗಿ ಒಗ್ಗೂಡಿಸುತ್ತದೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಹಾಗಾದರೆ ತಾವೇಕೆ ದಲಿತರ ಪಾದಪೂಜೆ ಮಾಡಬಾರದು?
---------------------

ಪ್ರತ್ಯೇಕ ರಾಜ್ಯದ ಹೋರಾಟಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಬಿಜೆಪಿಯ ನಾಯಕರಿಗಷ್ಟೇ ಸಂಬಂಧ.

---------------------

ಆಷಾಡದ ಬಳಿಕ ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ ಸಿಗಲಿದೆ
- ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
  ಮಧುಮೇಹಿ ಸಚಿವಾಕಾಂಕ್ಷಿಗಳು ಏನು ಮಾಡಬೇಕು?
---------------------
ನಾನು ಮತ್ತು ನನ್ನ ಮಗ ಕುಮಾರಸ್ವಾಮಿ ಬದುಕಿರುವ ತನಕ ಕರ್ನಾಟಕ ಇಬ್ಭಾಗವಾಗಲು ಬಿಡುವುದಿಲ್ಲ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಅಂದರೆ ತಮ್ಮ ಹಿರಿಯ ಮಗ ರೇವಣ್ಣ ಬದುಕಿದ್ದರೆ ಕರ್ನಾಟಕ ಒಡೆಯುತ್ತದೆ ಎಂಬ ಆರೋಪವೇ?
---------------------
  ವಿವಿಧ ಕಾರಣಗಳಿಂದ ಈ ಹಿಂದೆ ಪಕ್ಷ ಬಿಟ್ಟು ಹೋಗಿರುವ ನಾಯಕರನ್ನು ಮನವೊಲಿಸಿ ಮತ್ತೆ ಪಕ್ಷಕ್ಕೆ ವಾಪಸ್ ಕರೆತರುವ ಕೆಲಸವಾಗಬೇಕು
- ಕೆ.ಸಿ ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ
ಮಮತಾ ಬ್ಯಾನರ್ಜಿಯಿಂದಲೇ ಅದು ಶುರುವಾಗಲಿ.

---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...