ಶಿವಮೊಗ್ಗ ಡಿಸಿ ಡಾ.ಲೋಕೇಶ್ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ದಯಾನಂದ ಅಧಿಕಾರ ಸ್ವೀಕಾರ
Update: 2018-08-07 17:14 GMT
ಶಿವಮೊಗ್ಗ, ಆ. 7: ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಂ. ಲೋಕೇಶ್ ಅವರನ್ನು ದಿಢೀರ್ ಆಗಿ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅವರ ಸ್ಥಾನಕ್ಕೆ ಕೆ.ಎ. ದಯಾನಂದ್ರನ್ನು ನೇಮಿಸಿದೆ.
ಕೆ.ಎ.ದಯಾನಂದ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಅವರನ್ನು ಆ ಹುದ್ದೆಯಿಂದ ವರ್ಗಾಯಿಸಲಾಗಿತ್ತು. ಇದೀಗ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ನಿಯೋಜಿಸಿದ್ದು, ಸರಕಾರದ ಸೂಚನೆಯಂತೆ ಮಂಗಳವಾರವೇ ದಯಾನಂದ್ ಅವರು, ಡಾ. ಎಂ.ಲೋಕೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ಹಾಗೂ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಜಿಲ್ಲೆಯ ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸುವ ಜೊತೆಗೆ ಆಡಳಿತಾತ್ಮಕ ಸುಧಾರಣೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.