ನಿಯಮಾನುಸಾರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ತುಮಕೂರು ಜಿಲ್ಲಾಧಿಕಾರಿ ಸೂಚನೆ

Update: 2018-08-07 17:39 GMT

ತುಮಕೂರು,ಆ.7: ಮುಂಬರುವ ಆಗಸ್ಟ್ 29ರಂದು ನಡೆಯುವ ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ ಮತ್ತು ಗುಬ್ಬಿ ಹಾಗೂ ಕೊರಟಗೆರೆ ಪಟ್ಟಣ ಪಂ. ನ ಚುನಾವಣೆಯನ್ನು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಿಯಮಾನುಸಾರ ನಡೆಸುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ. ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಮಧುಗಿರಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ ಮತ್ತು ಗುಬ್ಬಿ ಹಾಗೂ ಕೊರಟಗೆರೆ ಪಟ್ಟಣ ಪಂ.ಗಳ ಚುನಾವಣೆಗೆ ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದ್ದು, ಕಟ್ಟುನಿಟ್ಟಿನಿಂದ ಜಾರಿಗೊಳಿಸಿ ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರು. 

ಕಳೆದ ಜೂನ್ 27ರ ಅಂತ್ಯಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ 23 ಮತಗಟ್ಟೆಗಳಿದ್ದು, 18518 ಮತದಾರರಿದ್ದಾರೆ. ಮಧುಗಿರಿ ಪುರಸಭೆಯಲ್ಲಿ 22823 ಮತದಾರರಿದ್ದು, 23 ಮತಗಟ್ಟೆಗಳಿವೆ. ಗುಬ್ಬಿ ಪಟ್ಟಣ ಪಂ.ನಲ್ಲಿ 15853 ಮತದಾರರಿದ್ದು,19 ಮತಗಟ್ಟೆಗಳು ಹಾಗೂ ಕೊರಟಗೆರೆ ಪಟ್ಟಣ ಪಂ.ನಲ್ಲಿ 12598 ಮತದಾರರಿದ್ದು, 15 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು. 

ಈಗಾಗಲೇ ಚುನಾವಣಾಧಿಕಾರಿಗಳನ್ನು ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿಯು ಪೂರ್ಣಗೊಂಡಿದ್ದು, ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಚುನಾವಣೆ ನಡೆಯುವ ನಗರ ಪ್ರದೇಶ, ಪಟ್ಟಣ ಪ್ರದೇಶದ ವ್ಯಾಪ್ತಿಗೆ ತಲಾ 2 ತಂಡಗಳಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು. ಈ ತಂಡಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು. 

ಆಗಸ್ಟ್ 8ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಹಂಚಿಕೆ ಮತ್ತಿತರ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ಅಬಕಾರಿ ಇಲಾಖೆಯ ಅಧಿಕಾರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಚುನಾವಣಾ ಮತದಾನ ಕರ್ತವ್ಯಕ್ಕೆ ಅಗತ್ಯವಿರುವ 350ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವನ್ನು ಈಗಾಗಲೇ ಗುರುತಿಸಲಾಗಿದ್ದು, ಚಿಕ್ಕನಾಯಕನಹಳ್ಳಿಯಲ್ಲಿ ಸರಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ಮಧುಗಿರಿ ಪುರಸಭೆ-ಸರಕಾರಿ ಪ್ರಥಮದರ್ಜೆ ಕಾಲೇಜು,ಮಧುಗಿರಿ, ಗುಬ್ಬಿ ಪಟ್ಟಣ ಪಂ.-ತಾಲೂಕು ಕಚೇರಿ,ಗುಬ್ಬಿ. ಕೊರಟಗೆರೆ ಪಟ್ಟಣ ಪಂ.-ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆಯಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

ರಾಜ್ಯ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಪ್ರತಿನಿತ್ಯ ಕಳುಹಿಸಬೇಕಾಗಿರುವ ಚುನಾವಣಾ ಪ್ರಕ್ರಿಯೆಯ ವರದಿಗಳನ್ನು ಸಕಾಲಕ್ಕೆ ಕಳುಹಿಸಬೇಕು. ಪ್ರಚಾರ ನಡೆಸಲು ಅಭ್ಯರ್ಥಿಗಳಿಗೆ ಹಾಗೂ ಪಕ್ಷಗಳಿಗೆ ಅನುಮತಿ ನೀಡುವಾಗ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಏಕಗವಾಕ್ಷಿಯ ಯೋಜನೆಯಡಿ ಅನುಮತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಉಪವಿಭಾಗಾಧಿಕಾರಿಗಳಾದ ಡಾ.ವೆಂಕಟೇಶಯ್ಯ, ಕೃಷ್ಣಮೂರ್ತಿ ಹಾಗೂ ಶಿವಕುಮಾರ್ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News