ಕೊಡಗಿನಲ್ಲಿ ಮಳೆ ಕಷ್ಟ, ನಷ್ಟ : ಮಂಗಳೂರು ರಸ್ತೆಯಲ್ಲಿ ವಾಹನ ಸಂಚಾರ ಸಂಕಷ್ಟ
ಮಡಿಕೇರಿ, ಆ.10 : ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಆಶ್ಲೇಷ ಮಳೆಯ ವೇಗ ಹೆಚ್ಚಾಗಿದ್ದು, ಜನರು ನಲುಗಿ ಹೋಗಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾದ ಕಾರಣ ಅಲ್ಲಲ್ಲಿ ಭೂ ಕುಸಿತ, ಸಂಪರ್ಕ ಕಡಿತ, ಕೃಷಿ ಹಾನಿ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ.
ಎರಡು ದಿನದ ಹಿಂದೆ ಬಿದ್ದ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹದ ಪರಿಸ್ಥಿತಿ ಏರ್ಪಟ್ಟಿತ್ತು. ಶುಕ್ರವಾರ ಮಳೆಯ ಪ್ರಮಾಣ ಕೊಂಚ ಇಳಿಮುಖಗೊಂಡಿದೆಯಾದರು, ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ಬಿರುಸಿನ ಮಳೆ, ಶೀತಗಾಳಿ ಜನರನ್ನು ಹೈರಾಣಾಗಿಸಿದೆ.
ಕಾವೇರಿಯ ಕ್ಷೇತ್ರ ಭಾಗಮಂಡಲ, ತಲಕಾವೇರಿಯಲ್ಲಿ ಗುರುವಾರ ಬೆಳಗ್ಗಿನಿಂದ ಶುಕ್ರವಾರದ ಬೆಳಗ್ಗಿನವರೆಗೆ ಅಂದಾಜು 2 ಇಂಚು ಮಳೆÉಯಾಗಿದ್ದರೆ, ಕಾವೇರಿ ನದಿ ಪಾತ್ರದ ನಾಪೋಕ್ಲು, ಮೂರ್ನಾಡು ಬಲಮುರಿ, ಸಿದ್ದಾಪುರ ವಿಭಾಗಗಳಲ್ಲಿಯು ಹದವಾಗಿ ಮಳೆಯಾಗುತ್ತಿದೆ.
ವೀರಾಜಪೇಟೆ ತಾಲ್ಲೂಕಿನ ಬಾಳೆಲೆ, ಶ್ರೀಮಂಗಲ, ವೀರಾಜಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದರೆ, ಸೋಮವಾರಪೇಟೆ ವ್ಯಾಪ್ತಿಯ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಜಿಲ್ಲೆಯ ಸಣ್ಣ ಪುಟ್ಟ ಹೊಳೆ ಪಾತ್ರಗಳಲ್ಲಿನ ಗದ್ದೆ ಬಯಲುಗಳು ನಿರಂತರವಾಗಿ ಮುಂದುವರಿದಿರುವ ಮಳೆಯಿಂದ ಜಲಾವೃತಗೊಂಡು ಕೃಷಿಗೆ ಹಾನಿಯನ್ನುಂಟುಮಾಡಿದೆ. ಹಲವೆಡೆಗಳಲ್ಲಿ ನಾಟಿ ಕಾರ್ಯವಾದ ಗದ್ದೆಗಳಲ್ಲಿ ನೀರು ನಿಂತು, ಭತ್ತದ ಸಸಿಗಳು ಕೊಳೆತು ಹೋಗುವ ಆತಂಕ ನಿರ್ಮಾಣವಾಗಿದೆ.
ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿರುವ ಕಾಫಿ ಕೃಷಿ ಹೆಚ್ಚಿನ ಪ್ರಮಾಣದ ಮಳೆಯಿಂದ ಕೊಳೆ ರೋಗದ ಬಾಧೆಗೆ ಸಿಲುಕಿದ್ದು, ಗಿಡಗಳಲ್ಲಿನ ಕಾಫಿ ಕಾಯಿಗಳು ಕೊಳೆತು ಉದುರಲಾರಂಭಿಸಿದೆ. ಇದು ಬೆಳೆಗಾರನ ಆತಂಕವನ್ನು ಹೆಚ್ಚಿಸಿದೆ.
ಪ್ರಸಕ್ತ ಸಾಲಿನ ಭಾರೀ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿನ ಒಳ ಚರಂಡಿ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದು ಬಟಾ ಬಯಲಾಗಿದೆ. ಪ್ರಸ್ತುತ ಸುರಿಯುವ ಒಂದೊಂದು ಮಳೆಯ ಸಂದರ್ಭವೂ ಮಡಿಕೇರಿ ನಗರದ ಪ್ರಮುಖ ರಸ್ತೆಗಳೇ ಚರಂಡಿಗಳಾಗಿ ಮಾರ್ಪಡುತ್ತಿವೆ.
ಮಂಗಳೂರು ರಸ್ತೆಯಲ್ಲಿ ವಾಹನ ಸಂಚಾರ
ಭಾರೀ ಮಳೆಗೆ ಮಡಿಕೇರಿ- ಮಂಗಳೂರು ರಸ್ತೆಯ ಒಂದು ಬದಿ ಕುಸಿದ ಪರಿಣಾಮ ಗುರುವಾರ ವಾಹನಗಳ ಸಂಚಾರಕ್ಕೆ ಪರ್ಯಾಯ ಮೇಕೇರಿ ಮಾರ್ಗವನ್ನು ಬಳಸಲಾಯಿತ್ತಾದರೂ ಅತ್ಯಂತ ಸಣ್ಣ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚಾಗಿ ಗಂಟೆಗಟ್ಟಲೆ ವಾಹನಗಳು ನಿಲುಗಡೆಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಖುದ್ದು ಪರಿಶೀಲಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ ಮಂಗಳೂರು ರಸ್ತೆಯ ಮತ್ತೊಂದು ಭಾಗದಿಂದಲೇ ಅಗತ್ಯ ಮುಂಜಾಗೃತಾ ಕ್ರಮದೊಂದಿಗೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಯಲ್ಲಿ ರಸ್ತೆ ಕುಸಿದ ಪ್ರದೇಶದಲ್ಲಿ ದಿನದ 24 ಗಂಟೆಯೂ ಪೊಲೀಸ್ ಸಿಬ್ಬಂದಿಗಳು ನಿಗಾ ವಹಿಸುತ್ತಿದ್ದು, ರಸ್ತೆಯ ಮತ್ತೊಂದು ಬದಿಯಿಂದ ವಾಹನಗಳ ಸುರಕ್ಷಿತ ಸಾಗಾಟಕ್ಕೆ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆ.
ಕೊಡಗು ಮಳೆ ವಿವರ
ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 22.37 ಮಿ.ಮೀ. ಕಳೆದ ವರ್ಷ ಇದೇ ದಿನ 2.95 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 2809.09 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1344.40 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 41.15 ಮಿ.ಮೀ. ಕಳೆದ ವರ್ಷ ಇದೇ ದಿನ 4 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 3949.83 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1909.25 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5 ಮಿ.ಮೀ. ಕಳೆದ ವರ್ಷ ಇದೇ ದಿನ 1.28 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2228.93 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1088.89 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 20.97 ಮಿ.ಮೀ. ಕಳೆದ ವರ್ಷ ಇದೇ ದಿನ 3.57 ಮಿ.ಮೀ ಜನವರಿಯಿಂದ ಇಲ್ಲಿಯವರೆಗಿನ ಮಳೆ 2248.50 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1035.05 ಮಿ.ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ: ಮಡಿಕೇರಿ ಕಸಬಾ 68.60, ನಾಪೋಕ್ಲು 11, ಸಂಪಾಜೆ 45.80, ಭಾಗಮಂಡಲ 39.20, ವಿರಾಜಪೇಟೆ ಕಸಬಾ 3, ಹುದಿಕೇರಿ 14, ಶ್ರೀಮಂಗಲ 8.80, ಪೊನ್ನಂಪೇಟೆ 1.20, ಅಮ್ಮತ್ತಿ 3, ಸೋಮವಾರಪೇಟೆ ಕಸಬಾ 14.20, ಶನಿವಾರಸಂತೆ 19.60, ಶಾಂತಳ್ಳಿ 58, ಕೊಡ್ಲಿಪೇಟೆ 12, ಕುಶಾಲನಗರ 6, ಸುಂಟಿಕೊಪ್ಪ 16 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2855.67 ಅಡಿಗಳು, ಕಳೆದ ವರ್ಷ ಇದೇ ದಿನ 2857.81 ಅಡಿ. ಇಂದು ಹಾರಂಗಿಯಲ್ಲಿ ಬಿದ್ದ ಮಳೆ 20.80 ಮಿ.ಮೀ, ಕಳೆದ ವರ್ಷ ಇದೇ ದಿನ 0.00 ಮಿ.ಮೀ. ಇಂದಿನ ನೀರಿನ ಒಳಹರಿವು 10373 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 3360 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 21,183 ಕ್ಯುಸೆಕ್. ನಾಲೆಗೆ 1000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನದಿಗೆ 5200 ಕ್ಯುಸೆಕ್. ನಾಲೆಗೆ 50 ಕ್ಯುಸೆಕ್.