ಹನೂರು: ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

Update: 2018-08-11 14:35 GMT

ಹನೂರು,ಆ.11: ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಭೀಮನ ಅಮವಾಸ್ಯೆ ಪ್ರಯುಕ್ತ ಪೂಜಾ ಕಾರ್ಯಗಳು ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ನೆರವೇರಿತು.

ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತಾಧಿಗಳು ಮಾದಪ್ಪನ ದರ್ಶನ ಪಡೆದರು. ಭಕ್ತರಿಗಾಗಿ ಪ್ರಾಧಿಕಾರವು ಅಲ್ಲಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಸೌಲಭ್ಯವನ್ನು ಕಲ್ಪಿಸಿತ್ತು. ಅಲ್ಲದೆ ಎರಡು ಕಡೆ ಪ್ರತ್ಯೇಕ ದಾಸೋಹದ ವ್ಯವಸ್ಥೆ ಮಾಡಿ, ಹರಕೆ ಹೊತ್ತ ಭಕ್ತರು ಅಲ್ಲಲ್ಲಿ ಅನ್ನದಾನ ಮಾಡುವ ಮೂಲಕ ತಮ್ಮ ಕಾಣಿಕೆ ಸಲ್ಲಿಸಿದರು.

ಪ್ರಾಧಿಕಾರವು ಅಂತರಗಂಗೆಯನ್ನು ಶುದ್ದೀಕರಿಸಿದ್ದು, ಮುಡಿಸೇವೆ ನಂತರ ಭಕ್ತರು ಅಂತರಗಂಗೆಯಲ್ಲಿ ಮಿಂದರು. ಭೀಮನ ಅಮಾವಾಸ್ಯೆ ಹಿನ್ನಲೆಯಲ್ಲಿ ಜಾತ್ರೆಗೆ ಎರಡು ದಿನಗಳ ಮುನ್ನವೇ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಶುಕ್ರವಾರ ಇಡೀ ರಾತ್ರಿ ರಂಗಮಂದಿರ ಮುಂಭಾಗ ಮಹದೇಶ್ವರ ಭಕ್ತಗೀತೆಗಳನ್ನು ಹಾಡಿದರು. ಇನ್ನು ಪ್ರಾಧಿಕಾರವು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಇದೇ ಮೊದಲ ಭಾರಿಗೆ ಕ್ಷೇತ್ರದಾದ್ಯಂತ ಸಿಸಿ ಕ್ಯಾಮಾರವನ್ನು ಅಳವಡಿಸಿತ್ತು. ಅಲ್ಲದೆ ಹೆಚ್ಚಿನ ಭದ್ರತೆಗಾಗಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಿಂದ ಹಾಗೂ ಜಿಲ್ಲೆಯ ವಿವಿಧ ಠಾಣೆಗಳಿಂದ ಹೆಚ್ಚಿನ ಸಿಬ್ಬಂಧಿಯನ್ನು ಕರೆಸಿ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಿತ್ತು. 

ಸಾರ್ವಜನಿಕರ ಸಂಚಾರಕ್ಕೆ ಅಡಚಣೆ: ಹನೂರು ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಕೌದಳ್ಳಿ ಗ್ರಾಮದ ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸ್ವಾಮಿಯ ದರ್ಶನಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ವಾಹನಗಳು ಬಂದಿದ್ದರಿಂದ ಒಂದು ತಾಸುಗಳ ಕಾಲ ವಾಹನ ದಟ್ಟನೆ ಹೆಚ್ಚಾಗಿ, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಅಲ್ಲಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News