ಸಾಲಬಾಧೆ: ವಿಷ ಸೇವಿಸಿ ರೈತ ಆತ್ಮಹತ್ಯೆ
ಮಂಡ್ಯ, ಆ.11: ಸಾಲಬಾಧೆ ತಾಳಲಾರದೆ ರೈತನೊಬ್ಬ ಜಮೀನು ಬಳಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ಪೇಟೆ ತಾಲೂಕು ಐಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಕೆ.ಆರ್.ಪೇಟೆ ತಾಲೂಕು ರಾಗಿಮುದ್ದನಹಳ್ಳಿಯ ಹೆಂಡತಿ ಮನೆ ಐಚನಹಳ್ಳಿಯಲ್ಲಿ ವಾಸವಿದ್ದ ಗಿರೀಶ(38) ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ.
ಜಮೀನು ಬಳಿ ಶುಕ್ರವಾರ ಮಧ್ಯಾಹ್ನ ವಿಷ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗಿರೀಶ್ ಅವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಮೃತಪಟ್ಟಿದ್ದಾರೆ.
ಗಿರೀಶ ಕೃಷಿ ಚಟುವಟಿಕೆಗಾಗಿ ಧರ್ಮಸ್ಥಳ ಸಂಸ್ಥೆ ಸೇರಿದಂತೆ ಹಲವು ಸ್ವಸಹಾಯ ಸಂಘಗಳಿಂದ ಸುಮಾರು 2 ಲಕ್ಷ ಸಾಲ ಮಾಡಿದ್ದು, ಕೃಷಿ ಕೈಕೊಟ್ಟಿದ್ದರಿಂದ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.
ಈ ಸಂಬಂಧ ಮೃತರ ಪತ್ನಿ ಲತಾ ಪೊಲೀಸರಿಗೆ ದೂರು ನೀಡಿದ್ದು, ಕೆ.ಆರ್.ಪೇಟೆಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.