ಮಡಿಕೇರಿ: ರೋಟರಿ ಸದಸ್ಯತ್ವ, ಪೋಲಿಯೋ ಪ್ಲಸ್, ಪಬ್ಲಿಕ್ ಇಮೇಜ್ ಕುರಿತ ಕಾರ್ಯಾಗಾರ

Update: 2018-08-13 18:10 GMT

ಮಡಿಕೇರಿ,ಆ.13: ಸಾಮಾಜಿಕ ಜಾಲ ತಾಣಗಳಲ್ಲಿ ರೋಟರಿಯ ಸಮಾಜಸೇವಾ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ರೋಟರಿಯ ಜನಸೇವೆಯ ಮಾಹಿತಿಯನ್ನು ತಲುಪಿಸಬೇಕೆಂದು ರೋಟರಿ ಜಿಲ್ಲೆ 3150 ರ ಮಾಜಿ ಗವರ್ನರ್ ರವಿ ವಡ್ಲಮನಿ ಹೇಳಿದ್ದಾರೆ.

ನಗರದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಸದಸ್ಯತ್ವ, ಪೋಲಿಯೋ ಪ್ಲಸ್, ಪಬ್ಲಿಕ್ ಇಮೇಜ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರವಿ ವಡ್ಲಮನಿ, ರೋಟರಿ ಸೇವಾ ಸಂಘಟನೆಯ ಈವರೆಗಿನ ಕಾರ್ಯಯೋಜನೆಗಳ ಅಪೂರ್ವ ಯಶಸ್ವಿನ ಆಧಾರದ ಮೇಲೆ ರೋಟರಿಯನ್ನು ಬ್ರಾಂಡ್ ಎಂದು ಪರಿಗಣಿಸಿ ಮತ್ತಷ್ಟು ಸದಸ್ಯರನ್ನು ಆಕರ್ಷಿಸುವದರೊಂದಿಗೆ ಫಲಾನುಭವಿಗಳಿಗೆ ರೋಟರಿ ಸೇವಾ ಕಾರ್ಯಯೋಜನೆಯನ್ನು ತಲುಪಿಸಬೇಕಾದ ಅಗತ್ಯವಿದೆ ಎಂದರು. 

ನಾಯಕತ್ವ ಗುಣ, ಉತ್ತಮ ಪ್ರಜೆಗಳಾಗಲು ರೋಟರಿಯನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು ಎಂದು ಸಮಾಜಕ್ಕೆ ಮನದಟ್ಟು ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದ ರವಿ ವಡ್ಲಮಾನಿ, ವ್ಯಕ್ತಿಗಳು ಎಷ್ಟೇ ಕೆಲಸ ಮಾಡಿದರೂ ಅವರ ಅಗಲಿಕೆಯ ನಂತರ ಹೆಸರು ನೆನಪಾಗಿಯಷ್ಟೇ ಉಳಿಯುತ್ತದೆ. ಆದರೆ, ರೋಟರಿಯಂಥ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯ ಕಾರ್ಯಯೋಜನೆಗಳು ಸಮಾಜದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿಯುತ್ತದೆ. ರೋಟರಿ ಎಂಬ ಆಲದ ಮರದಡಿ ಲಕ್ಷಾಂತರ ನಾಯಕರು ಬೆಳೆಯುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. ರೋಟರಿಯ ಪ್ರಭಾವವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿಯಾಗಿ ಜನಸಮುದಾಯಕ್ಕೆ ತಲುಪಿಸಬೇಕೆಂದೂ ಅವರು ಕರೆ ನೀಡಿದರು.

ರೋಟರಿ ಕ್ಲಬ್ ವಿಸ್ತರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಬಿ.ಶೇಖರ್ ಶೆಟ್ಟಿ ಮಾತನಾಡಿ, ರೋಟರಿ ಜಿಲ್ಲೆ 3181 ಅಂತರರಾಷ್ಟ್ರೀಯ ರೋಟರಿ ನಿಗದಿಪಡಿಸಿದ ಗುರಿಯನ್ನೂ ಮೀರಿ ಕೇವಲ 45 ದಿನಗಳಲ್ಲಿ ಅತ್ಯಧಿಕ ಸದಸ್ಯರನ್ನು ನೋಂದಾಯಿಸಿಕೊಂಡಿದೆ. ಈ ವರ್ಷದಲ್ಲಿಯೇ 4 ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆಯು ಸದಸ್ಯರ ಸಂಖ್ಯೆಯನ್ನು 3300 ರಿಂದ 3700 ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದು, 15 ಹೊಸ ಕ್ಲಬ್ ಗಳ ಪ್ರಾರಂಭದ ಯೋಜನೆಯೂ ಇದೆ ಎಂದರು. ಹೊಸದಾಗಿ ರೋಟರಿ ಸೇರುವ ಸದಸ್ಯರ ಸಂಖ್ಯೆಗಿಂತ ಅವರಲ್ಲಿ ಸಾಮಾಜಿಕ ಕಾರ್ಯಯೋಜನೆಗಳ ಬದ್ದತೆ ಮುಖ್ಯವಾಗಬೇಕೆಂದೂ ಶೇಖರ್ ಶೆಟ್ಟಿ ಅಭಿಪ್ರಾಯಪಟ್ಟರು. 

ರೋಟರಿ ಜಿಲ್ಲಾ ಸದಸ್ಯತ್ವ ವಿಸ್ತರಣಾ ವಿಭಾಗದ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 3073 ಸದಸ್ಯರು ರೋಟರಿಯಲ್ಲಿದ್ದು, 35 ರೋಟರ್ಯಾಕ್ಟ್ ಗಳು, 105 ಆರ್ ಸಿಸಿ ಗಳು ಇದ್ದು, ಸಾಮಾಜಿಕ ಕಾರ್ಯಯೋಜನೆಗಳೊಂದಿಗೆ ರೋಟರಿ ಸದಸ್ಯರು ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ಕಟಿಬದ್ದರಾಗಿದ್ದಾರೆ ಎಂದರು. ರೋಟರಿ ವೆಬ್ ಸೈಟ್ ಮತ್ತು ಮೊಬೈಲ್ ಆಪ್ ಕುರಿತಂತೆ ನರೇಂದ್ರ ರಾವ್ ಮಾಹಿತಿ ನೀಡಿದರು. 

ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಕುಮಾರ್ ವಿ.ರಾವ್, ಪೊಲಿಯೋ ಪ್ಲಸ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಮುರಳಿ ಕೃಷ್ಣ, ವಲಯ 6 ರ ಅಸಿಸ್ಟೆಂಟ್ ಗವರ್ನರ್ ಧರ್ಮಪುರ ನಾರಾಯಣ್, ಕಾರ್ಯಾಗಾರ ಸಮಿತಿ ಅಧ್ಯಕ್ಷ ಮೋಹನ್ ಪ್ರಭು, ದೇವಣೀರ ತಿಲಕ್, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್.ರವಿಶಂಕರ್, ರೋಟರಿ ಜಿಲ್ಲೆಯ 2020-21 ನೇ ಸಾಲಿನ ನಿಯೋಜಿತ ಗವರ್ನರ್ ರಂಗನಾಥ ಭಟ್,  ಮಾಜಿ ಗವರ್ನರ್ ಕೃಷ್ಣಶೆಟ್ಟಿ, ದೇವದಾಸ  ರೈ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಎಂ.ಯು.ಮಹೇಶ್, ಸಂತೋಷ್ ಶೆಟ್ಟಿ ವೇದಿಕೆಯಲ್ಲಿದ್ದರು.

ಕಾರ್ಯಕ್ರಮವನ್ನು ಬಿ.ಜಿ.ಅನಂತಶಯನ, ಲೀನಾ ಪೂವಯ್ಯ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News