ಹನೂರು: ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ
ಹನೂರು,ಆ.15: ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಡಲು ತಮ್ಮ ಹೋರಾಟ, ಚಳುವಳಿ, ತ್ಯಾಗ ಬಲಿದಾನ, ಜೈಲು ವಾಸದ ಮೂಲಕ ಜೀವವನ್ನೆ ತೆತ್ತಂತಹ ಮಹನೀಯರನ್ನು ಸ್ಮರಣೆ ಮಾಡುವಂತಹ ದಿನವಾಗಿದೆ ಇದು ಎಂದು ಶಾಸಕ ಆರ್.ನರೇಂದ್ರರಾಜುಗೌಡ ತಿಳಿಸಿದರು
ಪಟ್ಟಣ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಹನೂರು ತಾಲೂಕು ಆಡಳಿತ ಮಂಡಳಿ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 71 ವರ್ಷಗಳಲ್ಲಿ ಭಾರತ ಪ್ರಪಂಚದಲ್ಲಿಯೇ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಅನೇಕ ಮುಂದುವರೆದ ದೇಶಗಳ ಸಾಲುಗಳಲ್ಲಿ ನಮ್ಮ ದೇಶವು ಸಹ ಇದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ದೇಶಕ್ಕಾಗಿ ಗಡಿಯಲ್ಲಿ ನಿಂತು ನಮ್ಮ ರಕ್ಷಣೆಗೆ ಪ್ರಾಣವನ್ನು ತೆತ್ತಂತಹ ವೀರ ಸೈನಿಕರನ್ನು ನೆನೆಯುವುದರ ಜೊತೆಗೆ ದೇಶಕ್ಕೆ ಅನ್ನ ನೀಡುತ್ತಿರುವ ರೈತನನ್ನು ನೆನೆದು ಅವರಿಗೆ ಉತ್ತೇಜನ ನೀಡಿ, ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಈ ಸಂದರ್ಭ ತಾಲೂಕಿನ ಗಡಿಭಾಗದ ಮಾರ್ಟಳ್ಳಿಯ ಪಿಯುಸಿ ವಿದ್ಯಾರ್ಥಿಗಳಾದ ಅಜಿತ್ ಮತ್ತು ತಂಡ ಸೈನಿಕರಾಗಿ ಆಯ್ಕೆಯಾಗಿದ್ದು, ಅವರು ವಿವಿಧ ಬಗೆಯ ಸಾಹಸ ಪ್ರದರ್ಶನವನ್ನು ಪ್ರದರ್ಶಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಅಲ್ಲಿ ನೆರೆದಿದ್ದ ಎಲ್ಲಾ ಗಣ್ಯರು, ಸಾರ್ವಜನಿಕರು ಅಭಿನಂಧಿಸಿ ಗೌರವಿಸಿದರು.
ನಂತರ ಕಳೆದ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮತ್ತು ಕಾರ್ಯಕ್ರಮದಲ್ಲಿ ಉತ್ತಮ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥ ಸಂಚಲನ ಮಾಡಿದ ತಂಡಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ತಹಶೀಲ್ದಾರ್ ಶಿವರಾಮ್ ದ್ವಜಾರೋಹಣ ನೆರವೇರಿಸಿದರು. ಪಪಂ ಅಧ್ಯಕ್ಷೆ ಮಮತಾಮಹದೇವ, ತಾಪಂ ಉಪಾಧ್ಯಕ್ಷ ಲತರಾಜಣ್ಣ, ಪಪಂ ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ರಾಜುಗೌಡ, ಬಾಲರಾಜನಾಯ್ಡು , ಡಿಎಫ್ಒ ಏಡುಕೂಂಡಲು, ಬಿಇಒ ಟಿಆರ್ ಸ್ವಾಮಿ, ಬಿಆರ್ಸಿ ಕ್ಯಾತ ರಾಜಶ್ವ ನೀರಿಕ್ಷಕರಾದ ಮಾದೇಶ್, ರಾಜಶೇಖರ್, ಎಎಸ್ಎಫ್ ಪ್ರಶಾಂತ್, ಅಂಕರಾಜು ಇನ್ನಿತರರು ಹಾಜರಿದ್ದರು.