ಪ್ರವಾಹಕ್ಕೆ ಸಿಲುಕಿದ ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ: ಸಚಿವ ದೇಶಪಾಂಡೆ

Update: 2018-08-18 17:30 GMT

ಮೈಸೂರು,ಆ.18: ಜನರ ರಕ್ಷಣೆಯಷ್ಟೇ ನಮ್ಮ ಮೊದಲ ಆದ್ಯತೆಯಾಗಿದ್ದು, ಪರಿಹಾರ ವಿತರಣೆ ಬಗ್ಗೆ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ನಂಜನಗೂಡಿನ ಪ್ರವಾಹ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಪರಿಣಾಮ ನೂರಾರು ಜನ ಸಂಪರ್ಕ ಕಳೆದುಕೊಂಡಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ಕಾರ್ಯಕ್ಕೂ ತೊಡಕು ಉಂಟಾಗಿದೆ. ಈಗಾಗಲೇ ಸೇನಾ ಹೆಲಿಕಾಪ್ಟರ್ ಸೇನಾ ಸಿಬ್ಬಂದಿ ಹಲವರನ್ನು ರಕ್ಷಿಸಿದ್ದಾರೆ. ಕಾರವಾರದಿಂದ ನೌಕಾ ಸಿಬ್ಬಂದಿಗಳನ್ನು ಕರೆಸಿಕೊಳ್ಳುತ್ತಿದ್ದೇವೆ. ಬೋಟ್‍ಗಳ ಮೂಲಕ ಮತ್ತಷ್ಟು ಜನರನ್ನು ರಕ್ಷಣೆ ಮಾಡಲಿದ್ದೇವೆ. ಜಮೀನುಗಳ ತುಂಬಾ ನೀರು ನಿಂತಿರುವ ಕಾರಣದಿಂದಾಗಿ ಬೆಳೆ ಹಾನಿ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಡ್ರೋನ್ ಕ್ಯಾಮರಾ ಮೂಲಕ ಬೆಳೆಹಾನಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.

ಮೈಸೂರು ಜಿಲ್ಲೆಯಲ್ಲೂ ನೀರಿನ ಹೊರ ಹರಿವಿನಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಇದೆ. ಹಣಕ್ಕೆ ನಮ್ಮಲ್ಲಿ ಕೊರತೆ ಇಲ್ಲ. ಪ್ರವಾಹ ಪರಿಹಾರಕ್ಕಾಗಿ ಹೆಚ್ಚಿನ ಅನುದಾನ ನೀಡಲು ಶೀಘ್ರದಲ್ಲೇ  ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಚಿವದ್ವಯರ ಭೇಟಿ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿದ ನಂಜನಗೂಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಿಗ್ಗೆ ಕಪಿಲಾ ನದಿಯ ಪ್ರವಾಹದಿಂದ ಹಾನಿಗೊಳಗಾದ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠ, ಮುಡಿಕಟ್ಟೆ, ತೋಪಿನ ಬೀದಿ, ತೇರಿನ ಬೀದಿ, ಹಳ್ಳದಕೇರಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ಹೆಜ್ಜಿಗೆ ಸೇತುವೆ, ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ, ಸುತ್ತೂರುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗಂಜಿ ಕೇಂದ್ರಕ್ಕೂ ಭೇಟಿ ನೀಡಿ, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. 

ಈ ಸಂದರ್ಭ ಶಾಸಕರಾದ ಹರ್ಷವರ್ಧನ್, ಡಾ.ಯತಿಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ವಾಸು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ತಹಶೀಲ್ದಾರ್ ದಯಾನಂದ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ, ತಾ.ಪಂ.ಉಪಾಧ್ಯಕ್ಷ ಗೋವಿಂದರಾಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News