37 ಕಿ.ಮೀ. ಹೆದ್ದಾರಿ ಸಂಪೂರ್ಣ ಕುಸಿತ : 'ಮಡಿಕೇರಿ - ಮಂಗಳೂರು ರಸ್ತೆ ಸಂಪರ್ಕ ಸದ್ಯಕ್ಕಿಲ್ಲ'

Update: 2018-08-19 16:29 GMT

ಮಡಿಕೇರಿ,ಆ.19 : ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡಗಿನಲ್ಲಿ ರಸ್ತೆಗಳ ದುರಸ್ಥಿಗೆ ಹಲವು ತಿಂಗಳುಗಳೇ ಬೇಕಾಗಬಹುದು. ಮಡಿಕೇರಿ - ಮಂಗಳೂರು ರಾಜ್ಯ ಹೆದ್ದಾರಿ ದುರಸ್ಥಿಯಾಗಿ ಲಘು ವಾಹನ ಸಂಚಾರಕ್ಕೆ ಕನಿಷ್ಟ 30 ದಿನಗಳು ಬೇಕಾಗಿದ್ದು, ಇದೇ ಮಾರ್ಗದಲ್ಲಿ ಬಸ್, ಲಾರಿ ಸಂಚಾರಕ್ಕೆ 6 ತಿಂಗಳಾದರೂ ಬೇಕಾಗಲಿದೆ.

ಇದರಿಂದಾಗಿ ಶಿಕ್ಷಣ, ಆರೋಗ್ಯ ಸಂಬಂಧಿತ ಚಟುವಟಿಕೆಗಳಿಗೆ ಮಂಗಳೂರನ್ನೇ ಬಹುಪಾಲು ಆಶ್ರಯಿಸಿರುವ ಕೊಡಗಿನ ಜನತೆಗೆ ಸಾಕಷ್ಟು ಸಮಸ್ಯೆಯಾಗಲಿದೆ. ಮಂಗಳೂರು ರಾಜ್ಯ ಹೆದ್ದಾರಿ ತಾಳತ್ತಮನೆಯಿಂದ ಸಂಪಾಜೆಯವರೆಗೆ 37 ಕಿ.ಮೀ. ಸಂಪೂರ್ಣ ಕುಸಿದಿದ್ದು,  ಇದನ್ನು ಮಳೆ ಸಂಪೂರ್ಣವಾಗಿ ನಿಂತ ನಂತರವಷ್ಟೇ ದುರಸ್ಥಿಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಪರ್ಯಾಯ ಮಾರ್ಗವಾಗಿರುವ ಮಡಿಕೇರಿ - ಭಾಗಮಂಡಲ - ಕರಿಕೆ- ಮಂಗಳೂರು ರಸ್ತೆಯಲ್ಲಿ ಸದ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಬಸ್ ಸಂಚಾರಕ್ಕೆ ಅನೇಕ ತಿಂಗಳೇ ಬೇಕಾಗಬಹುದು ಎಂದೂ ರೇವಣ್ಣ ಸ್ಪಷ್ಟಪಡಿಸಿದರು. 

ಮಡಿಕೇರಿ - ಸೋಮವಾರಪೇಟೆ ರಸ್ತೆಯಲ್ಲಿಯೂ ಭೂಕುಸಿತದಿಂದಾಗಿ ರಸ್ತೆ ಸಂಪೂರ್ಣ ಕುಸಿದಿದ್ದು, 2 ತಿಂಗಳಾದರೂ ಈ ರಸ್ತೆ ದುರಸ್ಥಿಗೆ ಬೇಕಾದೀತು ಎಂದೂ ಸಚಿವರು ತಿಳಿಸಿದರು.

ಮಳೆ ಸಂಪೂರ್ಣವಾಗಿ ನಿಲ್ಲದೆ ಕೊಡಗಿನಲ್ಲಿ ಯಾವುದೇ ರಸ್ತೆಗಳನ್ನು ದುರಸ್ಥಿಗೊಳಿಸಲು ಅಸಾಧ್ಯ. ಹೀಗಾಗಿ ಕೊಡಗಿನ ರಸ್ತೆಗಳು ಮಾಮೂಲಿನಂತೆ ವಾಹನ ಸಂಚಾರಕ್ಕೆ ಮುಕ್ತವಾಗಲು ನವಂಬರ್ ತಿಂಗಳವರೆಗೆ ಕಾಯಬೇಕಾಗುತ್ತದೆ ಎಂದೂ ರೇವಣ್ಣ ಹೇಳಿದರು.

ಮಂಗಳೂರು ಹಾಸನ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ ಮತ್ತು ತೊಗರಿ ಬೇಳೆ, ಒಂದು ಸಾವಿರ ಬಾಕ್ಸ್ ಕುಡಿಯುವ ನೀರನ್ನು ನಿರಾಶ್ರಿತರಿಗೆ ಪೂರೈಸಲಾಗಿದೆ. ಹಾಗೆಯೇ ಅಡುಗೆ ಎಣ್ಣೆ ಮತ್ತು ಬಟ್ಟೆ ಪೂರೈಸಲಾಗುವುದು ಎಂದು ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣ   ತಿಳಿಸಿದರು.   

ಕೊಡಗಿನಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಾಶ್ರಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಕಾ9ರ ಸದಾ ಸ್ಪಂದಿಸಲಿದೆ ಎಂದು   ಸಚಿವರು ಹೇಳಿದರು. 

274 ಕಿ.ಮೀ. ರಸ್ತೆ ಹಾನಿ
ಕೊಡಗು ಜಿಲ್ಲೆಯಲ್ಲಿ ಲೋಕೋಪಯೋಗಿ ರಸ್ತೆಗೆ ಸಂಬಂಧಿಸಿದಂತೆ 274 ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, 139 ಕೋಟಿ ರು. ನಷ್ಟವಾಗಿದೆ. ಅಂತೆಯೇ 40 ಸೇತುವೆಗಳು ಹಾನಿಗೊಳಗಾಗಿದ್ದು, ಲೋಕೋಪಯೋಗಿ ಇಲಾಖೆಗೆ ಸುಮಾರು 150 ಕೋಟಿ ರೂ ನಷ್ಟು ನಷ್ಟ ಉಂಟಾಗಿದೆ.  ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಎಚ್.ಡಿ.ರೇವಣ್ಣ  ಮಾಹಿತಿ ನೀಡಿದರು. 

ಸದ್ಯ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಎರಡು ಉಪ ವಿಭಾಗಗಳ ಕಚೇರಿ, ಹಾಗೂ ಮಡಿಕೇರಿಯಲ್ಲಿ ಒಂದು ವಿಶೇಷ ವಿಭಾಗದ ಕಚೇರಿ ತೆರೆಯಲಾಗಿದೆ ಎಂದರು. 

ಹಾಸನ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು, 5 ಸಾವಿರ ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ ಮತ್ತು ತೊಗರಿ ಬೇಳೆ, ಒಂದು ಸಾವಿರ ಬಾಕ್ಸ್ ಕುಡಿಯುವ ನೀರನ್ನು ನಿರಾಶ್ರಿತರಿಗೆ ಪೂರೈಸಲಾಗಿದೆ. ಹಾಗೆಯೇ ಅಡುಗೆ ಎಣ್ಣೆ ಮತ್ತು ಬಟ್ಟೆ ಪೂರೈಸಲಾಗುವುದು ಎಂದು ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News