ಸೇನಾ ಕಾರ್ಯಾಚರಣೆ ಅಂತ್ಯ, ಸಂಕಷ್ಟದಲ್ಲಿ ಸಿಲುಕಿರುವವರ ಪತ್ತೆಗೆ ‘ಡ್ರೋನ್’ ಬಳಕೆ: ಎಡಿಜಿಪಿ ಭಾಸ್ಕರ ರಾವ್

Update: 2018-08-21 12:17 GMT

ಮಡಿಕೇರಿ, ಆ.21: ಮಹಾಮಳೆಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಉಂಟಾದ ಗುಡ್ಡ ಕುಸಿತ, ಪ್ರವಾಹಗಳಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಿರುವವರ ರಕ್ಷಣೆಗಾಗಿ ಕಳೆದ ಒಂದು ವಾರಗಳಿಂದ ಸೈನಿಕ ಪಡೆಯನ್ನು ಒಳಗೊಂಡಂತೆ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸೋಮವಾರ ಸಂಜೆ ಮುಕ್ತಾಯಗೊಳಿಸಲಾಗಿದೆ ಎಂದು ಎಡಿಜಿಪಿ ಭಾಸ್ಕರ ರಾವ್ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದ್ದರೂ, ಜಿಲ್ಲೆಯ ಸ್ಥಿತಿಗತಿಗಳನ್ನು ಅವಲೋಕಿಸಿ, ಜಿಲ್ಲಾಡಳಿತದ ನಿರ್ಧಾರದ ಬಳಿಕವಷ್ಟೆ ವಿವಿಧ ರಕ್ಷಣಾ ಪಡೆಗಳು ಜಿಲ್ಲೆಯಿಂದ ತೆರಳಲಿವೆ ಎಂದು ತಿಳಿಸಿದರು.

‘ಡ್ರೋನ್' ಕಾರ್ಯಾಚರಣೆ
ವಿವಿಧ ರಕ್ಷಣಾ ಕಾರ್ಯಾಚರಣೆಯ ಬಳಿಕ ಬುಧವಾರದಿಂದ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಗಂಭೀರ ಸ್ವರೂಪದಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ 8 ಡ್ರೋನ್ ಗಳ ಮೂಲಕ ಕಾರ್ಯಾಚರಣೆ ನಡೆಸಿ, ಇನ್ನೂ ಯಾರಾದರು ಸಂಕಷ್ಟದಲ್ಲಿ ಸಿಲುಕಿದ್ದಾರೆಯೇ, ಸಾಕು ಪ್ರಾಣಿಗಳು ಯಾವುದಾದರು ತೊಂದರೆಗೆ ಸಿಲುಕಿಕೊಂಡಿವೆ ಎಂಬುದನ್ನು ಗುರುತಿಸಿ ರಕ್ಷಣಾ ಕಾರ್ಯವನ್ನು ನಡೆಸಲಾಗುವುದೆಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.

ಡಿಜಿಪಿ ನೀಲಮಣಿ ರಾಜು ಅವರು ಮುತುವರ್ಜಿ ವಹಿಸಿ ಬಳ್ಳಾರಿ, ಕೊಪ್ಪಳ ಮತ್ತು ಗುಲ್ಬರ್ಗದಿಂದ 16 ಮಂದಿ ಆಪರೇಟರ್ ಗಳೊಂದಿಗೆ ಡ್ರೋನ್ ಗಳನ್ನು ಒದಗಿಸಿದ್ದು, ಇವುಗಳನ್ನು ಬಳಸಿ ಮಡಿಕೇರಿ ತಾಲೂಕಿನಲ್ಲಿ ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗಿರುವ ಮಕ್ಕಂದೂರು, ಮಾದಾಪುರ, ಜೋಡುಪಾಲ ವಿಭಾಗ ಸೇರಿದಂತೆ ವಿವಿಧೆಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

5 ಸಾವಿರ ಗ್ರಾಮಸ್ಥರ ರಕ್ಷಣೆ
ಕಳೆದ ಆಗಸ್ಟ್ 15 ರಿಂದ ಆರಂಭಗೊಂಡ ಭಾರೀ ಮಳೆಯಿಂದ  ಉಂಟಾದ ಪ್ರಾಕೃತಿಕ ವಿಕೋಪಗಳ ಸಂದರ್ಭ ಜನ ಜೀವನವನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಭಾರತೀಯ ಸೇವೆ, ಡೋಗ್ರಾ ರೆಜಿಮೆಂಟ್ ತಂಡ, ಭಾರತೀಯ ವಾಯುಸೇನೆ, ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್, ಕರ್ನಾಟಕ ಮೀಸಲು ಪೊಲೀಸ್ ಪಡೆ, ಜಿಲ್ಲಾ ಪೊಲೀಸರು, ಅಗ್ನಿ ಶಾಮಕ ದಳ ಸೇರಿದಂತೆ ಒಟ್ಟು 1100 ಮಂದಿಯ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಉಸ್ತುವಾರಿಯೊಂದಿಗೆ ಸಂಕಷ್ಟದಲ್ಲಿದ್ದ 5 ಸಾವಿರಕ್ಕೂ ಹೆಚ್ಚಿನ ಮಂದಿಯನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಗುಡ್ಡ ಕುಸಿತ, ಮನೆಗಳು ಧರೆಗುರುಳಿದ ಭೀಕರ ಘಟನೆಗಳಲ್ಲಿ ಸಿಲುಕಿ, ತೀವ್ರ ಸಂಕಷ್ಟದಲ್ಲಿದ್ದ 1735 ಮಂದಿಯನ್ನು ಹೆಲಿಕಾಪ್ಟರ್, ಹಗ್ಗಗಳನ್ನು ಬಳಸಿ ರಕ್ಷಿಸುವ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಇದು ಪ್ರಾಕೃತಿಕ ವಿಕೋಪದ ಪ್ರಥಮ ಹಂತದ ರಕ್ಷಣಾ ಕಾರ್ಯವಾಗಿದ್ದು, ಇನ್ನು ಮುಂದೆ ಸಂತ್ರಸ್ತರಿಗೆ ನೆರವು, ಪುನರ್ವಸತಿ ಮೊದಲಾದ ಕಾರ್ಯಗಳು ನಡೆಯಬೇಕಾಗಿದೆ. ಮೊದಲ ಹಂತದಲ್ಲಿ ಪೊಲೀಸ್, ಸೈನ್ಯ ಸೇರಿದಂತೆ ವಿವಿಧ ತಂಡಗಳು ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವುದಾಗಿ ತಿಳಿಸಿದರು.

ಬುಧವಾರದಿಂದ ಡ್ರೋನ್ ಕಾರ್ಯಾಚರಣೆಯೊಂದಿಗೆ ಅತಿವೃಷ್ಟಿ ಪೀಡಿತ ಸೂಕ್ಷ್ಮ ಪ್ರದೇಶಗಳಿಗೆ ಕಾಲು ದಾರಿಗಳನ್ನು ಮಾಡಿ, ಅಲ್ಲಿ ಯಾರಾದರು ಸಿಲುಕಿ ಕೊಂಡಿದ್ದಾರೆಯೆ ಎನ್ನುವುದನ್ನು ಗುರುತಿಸಿ, ರಕ್ಷಣೆ ನೀಡುವ ಕಾರ್ಯ ನಡೆಯಲಿದೆಯೆಂದು ಸ್ಪಷ್ಟಪಡಿಸಿದರು.

4 ಮಂದಿ ನಾಪತ್ತೆ
ಇಲ್ಲಿಯವರೆಗೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅತಿವೃಷ್ಟಿಯ ಹಿನ್ನೆಲೆಯಲ್ಲಿ ಘಟಿಸಿದ ಅವಘಡಗಳಿಗೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ ಎಂದು ಭಾಸ್ಕರ ರಾವ್ ಮಾಹಿತಿ ನೀಡಿದರು.

ಕಳ್ಳತನಕ್ಕೆ ಕಡಿವಾಣ
ಪಾಕೃತಿಕ ವಿಕೋಪದಿಂದ ಹಲವು ಪ್ರದೇಶಗಳ ಜನತೆ ಮನೆಯನ್ನು ತೊರೆದಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಕಳ್ಳತನಗಳು ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 215 ಗೃಹ ರಕ್ಷಕ ಸಿಬ್ಬಂದಿಗಳನ್ನು ಅಗತ್ಯವಿರುವ ಪ್ರದೇಶಗಳ ರಕ್ಷಣೆಗೆ ನಿಯೋಜಿಸಲಾಗಿದೆಯೆಂದು ಭಾಸ್ಕರ ರಾವ್ ಮಾಹಿತಿ ನೀಡಿದರು.

ಹಣ ಸಂಗ್ರಹಕ್ಕೆ ಅವಕಾಶವಿಲ್ಲ
ಕೊಡಗಿನಲ್ಲಿ ಘಟಿಸಿದ ಪ್ರಾಕೃತಿಕ ವಿಕೋಪಗಳ ಬೆನ್ನಲ್ಲೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಂತ್ರಸ್ತರ ಹೆಸರಿನಲ್ಲಿ ಡಬ್ಬಿಗಳನ್ನು ಹಿಡಿದು ಹಣ ಸಂಗ್ರಹಿಸುವುದಕ್ಕೆ ಅವಕಾಶವಿಲ್ಲವೆಂದು ಭಾಸ್ಕರ ರಾವ್ ಎಚ್ಚರಿಕೆ ನೀಡಿದರು. ಈ ರೀತಿ ಜನರಿಂದ ಬಲತ್ಕಾರವಾಗಿ ಹಣ ಸಂಗ್ರಹಿಸುವುದು ಅಪರಾಧವಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ನೆರವು ನೀಡಲು ಬಯಸುವವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗಷ್ಟೆ ತಮ್ಮ ನೆರವನ್ನು ನೀಡಬೇಕೆಂದು ತಿಳಿಸಿದರು.

ನಾಡಿನ ವಿವಿಧೆಡೆಗಳಿಂದ ಕೊಡಗಿಗೆ ಲೆಕ್ಕವಿಲ್ಲದಷ್ಟು ನೆರವಿನ ಸಾಮಗ್ರಿಗಳು ಹರಿದು ಬರುತ್ತಿದ್ದು, ಅವುಗಳನ್ನು ಯಾವುದೇ ಏಜೆನ್ಸಿಗಳ ಮೂಲಕ ವಿತರಿಸುವ ಪ್ರಯತ್ನ ಬೇಡ. ನೆರವಿನ ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಮಾತ್ರ ತಲುಪಿಸಬೇಕೆಂದು ಅವರು ಸ್ಪಷ್ಟಪಡಿಸಿದರು.

ಸುಳ್ಳು ಸಂದೇಶಕ್ಕೆ ಶಿಕ್ಷೆ
ಸಾಮಾಜಿಕ ಜಾಲತಾಣಗಳಲ್ಲಿ ಹವಾಗುಣ ಮತ್ತು ಕೊಡಗಿನ ಸ್ಥಿತಿಗತಿಯ ಕುರಿತು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಭಾಸ್ಕರ್ ರಾವ್ ಇದೇ ಸಂದರ್ಭ ಎಚ್ಚರಿಕೆ ನೀಡಿದರು. 

ಕೊಡಗಿನಲ್ಲಿ ನಡೆದಿರುವ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಅವೈಜ್ಞಾನಿಕವಾದ ವಿಚಾರಗಳನ್ನು ಜನರಲ್ಲಿ ಭಿತ್ತಿ ಆತಂಕ ಮೂಡಿಸಲಾಗುತ್ತಿದೆ. ಜನರ ಹಾದಿ ತಪ್ಪಿಸುವ ಕಾರ್ಯ ಕೆಲವು ಮಾಧ್ಯಮಗಳಲ್ಲಿ ಜ್ಯೋತೀಷಿಗಳೆನಿಸಿಕೊಂಡವರಿಂದ ನಡೆಯುತ್ತಿದ್ದು, ಈ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದರು. ಜನರನ್ನು ಹಾದಿ ತಪ್ಪಿಸುವ ಪ್ರಯತ್ನಗಳು ನಮ್ಮ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಾಮಾಗ್ರಿಗಾಗಿ ಚೆಕ್ ಪೋಸ್ಟ್
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಪನ್ನೇಕರ್ ಮಾತನಾಡಿ, ಕೊಡಗಿಗೆ ಹೊರ ಜಿಲ್ಲೆಗಳಿಂದ ಬರುವ ನೆರವಿನ ಸಾಮಾಗ್ರಿಗಳು ಸಮರ್ಪಕವಾಗಿ ಸಂತ್ರಸ್ತರಿಗೆ ದೊರಕುವಂತೆ ಮಾಡಲು ಮತ್ತು ಅಗತ್ಯ ಮಾಹಿತಿಯನ್ನು ನೆರವು ಒದಗಿಸುವವರಿಗೆ ನೀಡಲು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕೂಡಿಗೆ ಮತ್ತು ಕುಶಾಲನಗರ ವಿಭಾಗದಲ್ಲಿ 2 ಚೆಕ್ ಪೋಸ್ಟ್ ಗಳನ್ನು ತೆರೆಯಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯದ ಐಜಿಪಿ ಶರತ್ ಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News