ಹುಳಿಯಾರು: ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿ; ಬಾಲಕ ಮೃತ್ಯು

Update: 2018-08-21 14:28 GMT

ಹುಳಿಯಾರು,ಆ.21: ರಸ್ತೆ ತಿರುವಿನಲ್ಲಿ ದ್ವಿಚಕ್ರ ವಾಹನಗಳು ಪರಸ್ಪರ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಹುಳಿಯಾರಿನಲ್ಲಿ ನಡೆದಿದೆ. 

ಮೃತ ಬಾಲಕನನ್ನು ಮನೋಜ್ (16) ಎಂದು ಗುರುತಿಸಲಾಗಿದೆ. ಈತ ಲಿಂಗಪ್ಪಪಾಳ್ಯದ ಲೇಟ್ ಡಿ.ಬೀರಪ್ಪ ಎಂಬವರ ಮಗನಾಗಿದ್ದು, ಈತ ಜಿಪಿಯುಸಿಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಂಪನಹಳ್ಳಿಯಲ್ಲಿರುವ ಅವರ ತೋಟಕ್ಕೆ ಹೋಗಿ ವಾಪಸ್ ಲಿಂಗಪ್ಪನಪಾಳ್ಯಕ್ಕೆ ಬರುತ್ತಿದ್ದಾಗ ಕೆ.ಸಿ.ಪಾಳ್ಯದ ಆಂಜನೇಯಸ್ವಾಮಿ ದೇವಾಲಯದ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಹುಳಿಯಾರಿನಿಂದ ಕಂಪನಹಳ್ಳಿಗೆ ಬೈಕಿನಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ರೈತ ಸಂಘದ ಕೆ.ಸಿ.ಜಯಣ್ಣ ಎಂಬ ವ್ಯಕ್ತಿಯ ಬೈಕ್ ಹಾಗೂ ಟಿವಿಎಸ್ ಮುಖಾಮುಖಿ ಢಿಕ್ಕಿಯಾಗಿ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಮನೋಜ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕನಾಯಕನಹಳ್ಳಿಗೆ ಕರೆದೊಯ್ದು ಅಲ್ಲಿಂದ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಬೈಕಿನ ಸವಾರ ಕೆ.ಸಿ.ಜಯಣ್ಣ ಎಂಬಾತನಿಗೆ ತುಮಕೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಪ್ರಕರಣ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತ ಬಾಲಕನ ಅಂತ್ಯಕ್ರಿಯೆ ಲಿಂಗಪ್ಪನ ಪಾಳ್ಯದ ಜಮೀನಿನಲ್ಲಿ ನಡೆಯಿತು. ಮೃತನ ಕಣ್ಣನ್ನು ಪೋಷಕರು ದಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News