ಮಂಡ್ಯ: ಮನೆಗೆ ನುಗ್ಗಿ ಯುವತಿಯ ಅಪಹರಣ ಯತ್ನ; ಯುವಕನ ಬಂಧನ

Update: 2018-08-24 18:24 GMT

ಮಂಡ್ಯ, ಆ.24: ಮುಖಕ್ಕೆ ಕಪ್ಪುಬಟ್ಟೆ ಕಟ್ಟಿಕೊಂಡು ಕಾರಿನಲ್ಲಿ ಬಂದ ಯುವಕನೊಬ್ಬ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯವರಿಗೆ ಹಲ್ಲೆ ನಡೆಸಿ ಯುವತಿಯ ಕಿಡ್ನಾಪ್ ಮಾಡಲು ವಿಫಲಯತ್ನ ನಡೆಸಿರುವ ಘಟನೆ ಮಳವಳ್ಳಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಮಹದೇವು ಎಂಬವರ ಪುತ್ರ ಸುನಿಲ್ ಈ ಕೃತ್ಯವೆಸಗಿದ್ದು, ಯುವತಿಯ ಮನೆಯವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಖಕ್ಕೆ ಕಪ್ಪುಪಟ್ಟಿ ಕಟ್ಟಿಕೊಂಡು ಏಕಾಏಕಿ ಮನೆಗೆ ಬಂದ ಸುನಿಲ್ ನನ್ನ ಮೇಲೆ ಹಲ್ಲೆ ನಡೆಸಿ, ಅಡ್ಡಬಂದ ಮಗ ರಾಜೇಶನ ತೊಡೆಯ ಮೇಲೆ ಚಾಕುವಿನಿಂದ ಇರಿದು, ಪಕ್ಕದಲ್ಲೇ ಇದ್ದ ಮಗಳನ್ನು ಎಳೆದುಕೊಂಡು ಹೋಗುವ ಯತ್ನ ನಡೆಸಿದ. ಅಷ್ಟೊತ್ತಿಗೆ ಅಕ್ಕಪಕ್ಕದ ಮನೆಯವರು ಬಂದು ಹಿಡಿದು ನೋಡಿದಾಗ ಆತ ಸುನಿಲ್ ಎಂಬುದು ಗೊತ್ತಾಯಿತು. ಅಲ್ಲಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪರಾರಿಯಾದ ಎಂದು ರಾಜಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಮಗಳನ್ನು ಕಿಡ್ನಾಪ್ ಮಾಡಲೆಂದೇ ಆತ ಚಾಕು, ರಿವಾಲ್ವಾರ್ ಇಟ್ಟುಕೊಂಡು ಬಂದಿದ್ದ. ಆದರೆ, ಅಕ್ಕಪಕ್ಕದ ಜನರು ಬಂದಿದ್ದರಿಂದ ಪಾರಾದೆವು. ನನ್ನ ಮಗಳಿಗೆ ಆತನ ಮದುವೆಯಾಗಲು ಇಷ್ಟವಿಲ್ಲದಿದ್ದರೂ ಪೀಡಿಸುತ್ತಿದ್ದಾನೆ. ಬೆದರಿಕೆಯನ್ನೂ ಹಾಕಿದ್ದಾನೆ. ಇದಕ್ಕೆ ಆತನ ಮನೆಯವರ ಬೆಂಬಲವಿದೆ. ನಮಗೆ ರಕ್ಷಣೆ ಬೇಕು ಎಂದು ರಾಜಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮನೆಯವರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ತೊಂದರೆಯಾಗದಂತೆ ಕ್ರಮವಹಿಸುತ್ತೇವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಶ್ರೀಕಾಂತ್ ಕುಟುಂಬದವರಿಗೆ ಭವರಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News