“ಯಾರೂ ನನ್ನನ್ನು ಗೌರವಿಸುತ್ತಿಲ್ಲ” ಖೇದ ವ್ಯಕ್ತಪಡಿಸಿದ ಮುಲಾಯಂ
Update: 2018-08-27 12:32 GMT
ಹೊಸದಿಲ್ಲಿ, ಆ.27: “ಇಂದು ನನ್ನನ್ನು ಯಾರೂ ಗೌರವಿಸುತ್ತಿಲ್ಲ. ಪ್ರಾಯಶಃ ನಾನು ಸತ್ತ ನಂತರ ಅವರು ಗೌರವ ತೋರಿಸಬಹುದು'' ಎಂದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಬೇಸರದಿಂದ ನುಡಿದಿದ್ದಾರೆ.
ಲಕ್ನೋದಲ್ಲಿ ಹಿರಿಯ ಪಕ್ಷ ನಾಯಕ ಭಗವತೀ ಸಿಂಗ್ ಅವರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ``ನಮ್ಮ ದೇಶದ ಜನರು ಕೆಲವರು ಸತ್ತ ನಂತರವಷ್ಟೇ ಅವರನ್ನು ಗೌರವಿಸುತ್ತಾರೆ ಎಂದು ಲೋಹಿಯಾಜಿ ಕೂಡ ಹೇಳಿದ್ದರು'' ಎಂದು ಮುಲಾಯಂ ಹೇಳಿದರು.
ತರುವಾಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಬಸ್ತಿ ಜಿಲ್ಲೆಯ ಕುವಾನೊ ನದಿಯಲ್ಲಿ ವಿಲೀನಗೊಳಿಸುವ ಸಂದರ್ಭ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ``ಸತ್ತ ಮೇಲೆ ನನಗೆ ಇಷ್ಟೊಂದು ಗೌರವ ದೊರೆಯುತ್ತದೆಯೆಂದು ತಿಳಿದು ಬಂದರೆ ನಾನು ಇಂದೇ ಸಾಯಲು ಇಚ್ಛಿಸುತ್ತೇನೆ,'' ಎಂದಿದ್ದರು.