ಕೊಡಗಿನ ಪರ ಮಾತನಾಡುವವರೇ ಕೇಂದ್ರದಲ್ಲಿ ಇಲ್ಲ: ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ

Update: 2018-08-27 16:02 GMT

ಬೆಂಗಳೂರು/ಧಾರವಾಡ, ಆ. 27: ಮಳೆ ಹಾಗೂ ಪ್ರವಾಹದಿಂದ ಕೊಡಗು ಅನಾಥ ಸ್ಥಿತಿ ಅನುಭವಿಸುತ್ತಿದೆ. ಕೊಡಗು ಗೋವಾಗಿಂತ ದೊಡ್ಡದು. ಆದರೆ, ಅದರ ಪರ ಮಾತನಾಡುವವರು ಯಾರೂ ಇಲ್ಲ ಎಂದು ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ದುರಂತ. ಲೋಕಸಭೆ ಸದಸ್ಯನಾಗಿ ಒಬ್ಬ ವ್ಯಕ್ತಿ ಆಯ್ಕೆ ಆಗಿದ್ದು, ಅವರು ಕೊಡಗಿನವರಲ್ಲ. ಅವರು ಮೈಸೂರು ಮೂಲದವರು. ಅವರನ್ನೆ ಕೊಡಗಿನ ಪ್ರತಿನಿಧಿ ಎಂದು ಭಾವಿಸಬೇಕಿದೆ. ಆದರೆ, ಕೊಡಗಿನ ಪ್ರತಿನಿಧಿ ಯಾರೂ ಕೇಂದ್ರ ಸರಕಾರದಲ್ಲಿಲ್ಲ. ಕೊಡಗು ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯಲ್ಲಿದೆ ಎಂದರು.

ಕೊಡಗನ್ನು ಪ್ರತಿನಿಧಿಸುವ ವ್ಯಕ್ತಿಗೂ ಕೊಡಗಿಗೂ ಯಾವುದೇ ಸಂಬಂಧವಿಲ್ಲ. ಒಂದು ಕಾಲಕ್ಕೆ ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಅನಾಥ ಸ್ಥಿತಿಯಲ್ಲಿದೆ ಎಂದ ಅವರು, ಗೋವಾ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯ. ಆದರೆ, ಕೊಡಗು ಏನೂ ಲೆಕ್ಕಕ್ಕೇ ಇಲ್ಲ. ಕೊಡಗು ಗೋವಾಗಿಂತ ದೊಡ್ಡದಾಗಿತ್ತು. ಇಂದು ಅದರ ಪರವಾಗಿ ಮಾತನಾಡುವವರು ಯಾರು ಇಲ್ಲ ಎಂದು ನುಡಿದರು.

ಯಾರಿಂದಲೂ ಸೋಲಿಸಲು ಸಾಧ್ಯವಾಗದ ಕೊಡಗನ್ನು ಇಂದು ವರುಣ ಸೋಲಿಸಿದ್ದಾನೆ. ಇತ್ತೀಚೆಗೆ ಕೊಡಗಿನ ಬಗ್ಗೆ ಒಂದು ಕನಸು ಬಿತ್ತು. ಇಡೀ ದಿನ ಅದೇ ಕನಸು. ಅಲ್ಲಿ ಕೊಡಗಿನ ಶಾಲೆಗಳನ್ನು ನೋಡಬೇಕೆಂದು ಹೋದೆ. ಆದರೆ, ಅಲ್ಲಿ ಶಾಲೆಗಳು ಇದ್ದವು ಎಂಬುದಕ್ಕೆ ಕುರುಹು ಇರಲಿಲ್ಲ. ಇವತ್ತಿಗೂ ಕೂಡ ಅದೇ ಪರಿಸ್ಥಿತಿ ಇದೆ. ನನಗೆ ಈಗ ಅಪರಾಧಿ ಮನೋಭಾವ ಕಾಡುತ್ತಿದೆ. ಕೊಡಗನ್ನು ನೂತನ ರಾಜ್ಯದಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದೆ. ಇವತ್ತು ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ರಾಕ್ಷಸ ಮಳೆಗೆ ಕಾಫಿ, ಏಲಕ್ಕಿ, ಮೆಣಸು ಕೊಚ್ಚಿ ಹೋಗಿದೆ. ಸರಕಾರ ಅವರನ್ನ ಉಳಿಸುವ ಕೆಲಸ ಮಾಡಬೇಕು. ಹಣ ಎತ್ತಿ ಜೇಬಿಗೆ ತುಂಬಿಕೊಳ್ಳುವ ಜನರು ಇದ್ದಾರೆ. ಹೀಗಾಗಿ ಸಂತ್ರಸ್ತರ ಹಣ ದುರ್ಬಳಕೆ ಸರಿಯಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News