×
Ad

ನಾರಾಯಣ ಗುರು ಆದರ್ಶ ಸುಧಾರಣೆ ಪ್ರಸ್ತುತ ಸಂದರ್ಭಕ್ಕೂ ಅವಶ್ಯಕ: ಚಾ.ನಗರ ಜಿಲ್ಲಾಧಿಕಾರಿ ಕಾವೇರಿ

Update: 2018-08-27 23:30 IST

ಚಾಮರಾಜನಗರ, ಆ. 27: ಬ್ರಹ್ಮಶ್ರೀ ನಾರಾಯಣ ಗುರು ಅವರು 19 ನೇ ಶತಮಾನದಲ್ಲಿ ಆರಂಭಿಸಿದ ಸಾಮಾಜಿಕ ಸುಧಾರಣೆಗಳು ಪ್ರಸ್ತುತ ಸಂದರ್ಭಕ್ಕೂ ಅವಶ್ಯಕವಾಗಿವೆ ಎಂದು ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಅಭಿಪ್ರಾಯ ಪಟ್ಟರು.

ನಗರದ ಜೆ. ಎಚ್ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತಯು ಸಂಸೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಹ್ಮಶ್ರೀ ನಾರಾಯಣಗುರು ಅವರು ಸಾಮಾಜಿಕ ಸಮಾನತೆಗೆ ಅನೇಕ ಸುದಾರಣೆಗಳನ್ನು ತಂದರು ಎಲ್ಲಾ ಜಾತಿಗಳು ಸಮಾನ ಎಂದು ಪ್ರತಿಪಾದಿಸಿದರು. ಅವರ ಸಮಾಜ ಮುಖಿ ಸುಧಾರಣೆಗಳು ಇಂದಿಗೂ ಅಗತ್ಯವಾಗಿವೆ ಎಂದು ಕಾವೇರಿ ಅವರು ತಿಳಿಸಿದರು.  

ನಾರಾಯಣಗುರು ಅವರ ಕೊಡುಗೆ ಸಾಧನೆ, ಕೆಲಸಗಳು ಉತ್ತೇಜನಕಾರಿಯಾಗಿದೆ. ಅವರ ಪ್ರಭಾವದಿಂದ ಅನೇಕ ಬದಲಾವಣೆಗಳು ಆಗಿವೆ.  ವಿಶೇಷವಾಗಿ ಕೇರಳ ರಾಜ್ಯದಲ್ಲಿ ಅವರು ಹಾಕಿಕೊಟ್ಟ ಅಡಿಗಲ್ಲಿನ ಮೇಲೆ ಬಹಳಷ್ಟು ಪ್ರಮುಖ ಸಾಧನೆಗಳು ಆಗಿವೆ ಎಂದು ಜಿಲ್ಲಾಧಿಕಾರಿ ಕಾವೇರಿ ಅವರು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು ಮಾತನಾಡಿ, ನಾರಾಯಣಗುರು ಅವರ ಕಾಲದಲ್ಲಿ ಮೂಢನಂಬಿಕೆ ಮೇಲು-ಕೀಳು ಇನ್ನಿತರ ಪರಿಸ್ಥಿತಿ ಇತ್ತು, ಅಂತಹ ಸಮಯದಲ್ಲಿ ಸುಧಾರಣೆಗೆ ಅಪಾರವಾಗಿ ಶ್ರಮಿಸಿ ಅರಿವು ಮೂಡಿಸಲು ನಾರಾಯಣಗುರು ಮುಂದಾದರು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅರಿವು ಮೂಡಿಸುವ ಕೆಲಸ ಇಂದೂ ಸಹ ಮುಂದುವರಿಯಬೇಕಿದೆ ಎಂದರು.  

ನಾರಾಯಣಗುರು ಅವರ ಚಿಂತನೆ ಹಾದಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೂ ಚಿಂತನೆ ನಡೆಸಬೇಕಿದೆ. ಹೊಸ ಸಮಾಜ ನಿರ್ಮಾಣ ಮಾಡುವಲ್ಲಿ ನಾರಾಯಣಗುರು ಅವರ ಆದರ್ಶಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ಹರೀಶ್‍ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಮುಖ್ಯ ಉಪನ್ಯಾಸ ನೀಡಿದ ಖ್ಯಾತ ಬರಹಗಾರರಾದ ಈಚನೂರು ಕುಮಾರ್ ಮಾತನಾಡಿ,

ನಾರಾಯಣಗುರು ಅವರು ತೋರಿಸಿದ ಸನ್ಮಾರ್ಗ ಸಮಾಜಮುಖಿ ಕಾರ್ಯಗಳು ಇನ್ನೂ ಜೀವಂತವಾಗಿವೆ. ಆದರೆ ಅವರು ನೀಡಿದ ಮಾರ್ಗದರ್ಶನವನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದು ವಿಷಾದಿಸಿದರು.  ಕೆಳಸಮುದಾಯದ ಜನರ ಮನೆಗೆ ಹೋಗಿ ಅವರೊಂದಿಗೆ ಸಹ ಬೋಜನ ಮಾಡಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡಿದರು. ಮೌಢ್ಯತೆ, ಜಾತಿ ನಿರ್ಮೂಲನೆಗೆ ವಿಶೇಷವಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟ ನೀತಿಯನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಈಚನೂರು ಕುಮಾರ್ ಅವರು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚೆನ್ನಪ್ಪ, ಸಮಾಜದ ಮುಖಂಡರಾದ ವೆಂಕಟೇಶ್, ಸಂಪತ್, ರಾಜಣ್ಣ, ಪುಟ್ಟಪ್ಪ, ಮೇರು ನಟ ಡಾ.ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News