ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ ಇಬ್ಬರು ಕೂಲಿ ಕಾರ್ಮಿಕರು ಮೃತ್ಯು
Update: 2018-08-30 13:32 GMT
ಚಾಮರಾಜನಗರ,ಆ.30: ಜಮೀನಿನಲ್ಲಿ ಭತ್ತ ನಾಟಿ ಮಾಡುವಾಗ ವಿದ್ಯುತ್ ಹರಿದ ಪರಿಣಾಮ ಕೂಲಿಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರದ ಜಿಲ್ಲೆಯ ಹೊಸ ಮಾಲಂಗಿ ಗ್ರಾಮದ ರೇವಣ್ಣ ಸ್ವಾಮಿರವರ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಗ್ರಾಮದ ಮಹದೇವಸ್ವಾಮಿ (25) ನವೀನ್(20) ರವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
'ಜಮೀನಿನಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ತುಂಡಾಗಿತ್ತು, ಅದನ್ನು ಕಂಬಕ್ಕೆ ಹಾಕುವಾಗ ವಿದ್ಯುತ್ ಹರಿದ ಪರಿಣಾಮ ಮಹದೇವಸ್ವಾಮಿ ಮತ್ತು ನವೀನ್ ಸಾವನ್ನಪ್ಪಿದರು' ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿದ್ಯುತ್ ಹರಿದಿದ್ದರಿಂದ ಮತ್ತೊರ್ವ ಕೂಲಿ ಕಾರ್ಮಿಕ ಲೋಕೇಶ್ಗೆ ಗಂಭೀರ ಗಾಯವಾಗಿದ್ದು, ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.