ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಸಾಗರ ಲಾಖೆ ಎಸ್ಐಟಿ ವಶಕ್ಕೆ
Update: 2018-08-30 14:43 GMT
ಬೆಳಗಾವಿ, ಆ.30: ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಡಿ ನಗರದ ಗಣೇಶಪುರದ ನಿವಾಸಿ ಸಾಗರ ಲಾಖೆ(30)ಯನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ತನ್ನ ರೆಸಾರ್ಟ್ನಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಈಗಾಗಲೆ ಬಂಧಿತನಾಗಿರುವ ಭರತ ಕುರ್ನೆ ಬಳಿ ಸಾಗರ ಲಾಖೆ ಕೆಲಸಕ್ಕಿದ್ದು, ರೆಸಾರ್ಟ್ನ ಉಸ್ತುವಾರಿ ವಹಿಸಿಕೊಂಡಿದ್ದ. ಹೀಗಾಗಿ ಹತ್ಯೆ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹದ ಹಿನ್ನೆಲೆಯಲ್ಲಿ ಎಸ್ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸಾಗರ ಲಾಖೆ ಹಾಗೂ ಭರತ ಕುರ್ನೆ ನಡುವೆ ನಿರಂತರವಾದ ದೂರವಾಣಿ ಸಂಭಾಷಣೆ ನಡೆದಿದೆ. ಇದರ ಆಧಾರದ ಮೇಲೆ ಸಾಗರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.