ಶಿವಮೊಗ್ಗ: ಆಸ್ಪತ್ರೆಯಿಂದ ರೋಗಿಯ ಅಪಹರಿಸಿ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2018-08-31 17:34 GMT

ಶಿವಮೊಗ್ಗ, ಆ. 30: ಅನಾರೋಗ್ಯ ನಿಮಿತ್ತ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯನ್ನು ಅಪಹರಿಸಿ, ಹತ್ಯೆ ನಡೆಸಿ ತಲೆಮರೆಸಿಕೊಂಡಿದ್ದ ಇಬ್ಬರು ಹಂತಕರನ್ನು ಶಿಕಾರಿಪುರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ. 

ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ನಂದಿಗುಡಿ ಗ್ರಾಮದ ನಿವಾಸಿ ದೇವರಾಜ್ (45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಿಕಾರಿಪುರ ಪಟ್ಟಣದ ವಾಸಿ ಶಿವರಾಜ್ (26) ಹಾಗೂ ತಾಲೂಕಿನ ಕಣಿವೆಮನೆ ಗ್ರಾಮದ ನಿವಾಸಿ ಮಾಲತೇಶ್ (36) ಕೊಲೆ ಆರೋಪಿಗಳಾಗಿದ್ದಾರೆ. 

ನಿಗೂಢವಾಗಿದ್ದ ಈ ಪ್ರಕರಣವನ್ನು ಎಸ್.ಪಿ. ಅಭಿನವ್ ಖರೆ, ಡಿವೈಎಸ್‍ಪಿ ಸುಧಾಕರನಾಯ್ಕ್ ಮಾರ್ಗದರ್ಶನದಲ್ಲಿ ಶಿಕಾರಿಪುರ ವೃತ್ತ ನಿರೀಕ್ಷಕ ಬಸವರಾಜ್, ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ನೇತೃತ್ವದ ಪೊಲೀಸ್ ತಂಡ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದೆ. 

ಘಟನೆಯ ಹಿನ್ನೆಲೆ: ಕೊಲೆಗೀಡಾದ ದೇವರಾಜ್ ಮದ್ಯವ್ಯಸನಿಯಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಅವರ ಪತ್ನಿ ಮೃತಪಟ್ಟಿದ್ದರು. ಮಗಳನ್ನು ಶಿಕಾರಿಪುರ ತಾಲೂಕಿನ ಗಾಮ ಎಂಬ ಊರಿನಲ್ಲಿರುವ ಸಂಬಂಧಿಯ ಮನೆಯಲ್ಲಿ ಬಿಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾದ ವೇಳೆ ಅವರು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಹಿಂದಿರುಗುತ್ತಿದ್ದರು. ಅದರಂತೆ ಕಳೆದ ಕೆಲ ದಿನಗಳ ಹಿಂದೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. 

ದೇವರಾಜ್ ದಾಖಲಾಗಿದ್ದ ವಾರ್ಡ್‍ನಲ್ಲಿಯೇ, ಆರೋಪಿಗಳಾದ ಶಿವರಾಜ್ ಹಾಗೂ ಮಾಲತೇಶ್‍ರವರ ಸ್ನೇಹಿತನೋರ್ವ ದಾಖಲಾಗಿದ್ದ. ಸ್ನೇಹಿತನ ಆರೋಗ್ಯ ವಿಚಾರಿಸಲೆಂದು ಆರೋಪಿಗಳು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಅಚಾನಕ್ ಆಗಿ ದೇವರಾಜ್ ಪರಿಚಯವಾಗಿತ್ತು. 
ಇದೇ ವೇಳೆ ದೇವರಾಜ್ ಮೊಬೈಲ್‍ಗೆ ಸಂಬಂಧಿಯೋರ್ವರು ಕರೆ ಮಾಡಿ, ಆತನ ಬಳಿಯಿದ್ದ ಎಟಿಎಂನ ಪಾಸ್‍ವರ್ಡ್ ವಿವರವನ್ನು ತಿಳಿಸಿದ್ದರು. ದೇವರಾಜ್‍ಗೆ ಸರಿಯಾಗಿ ಬರೆದುಕೊಳ್ಳಲು ಸಾಧ್ಯವಾಗದ ಕಾರಣದಿಂದ, ಅಲ್ಲಿಯೇ ಇದ್ದ ಆರೋಪಿ ಶಿವರಾಜ್‍ಗೆ ಮೊಬೈಲ್ ಕೊಟ್ಟು ಪಾಸ್‍ವರ್ಡ್ ಬರೆಯಿಸಿಕೊಂಡಿದ್ದರು ಎನ್ನಲಾಗಿದೆ. 

ತದನಂತರ ದೇವರಾಜ್ ಆರೋಪಿಗಳ ಜೊತೆಯೇ ಆಸ್ಪತ್ರೆಗೆ ಸಮೀಪದ ಎಟಿಎಂಗೆ ತೆರಳಿ, ಸುಮಾರು 2000 ರೂ. ಡ್ರಾ ಮಾಡಿಕೊಂಡಿದ್ದರು. ಎಟಿಎಂ ಸ್ಕ್ರೀನ್‍ನಲ್ಲಿ ಸುಮಾರು 90 ಸಾವಿರ ರೂ. ಬಾಕಿ ಮೊತ್ತವಿರುವ ವಿವರವನ್ನು ಆರೋಪಿಗಳು ಗಮನಿಸಿದ್ದಾರೆ. ಇದು ಆರೋಪಿಗಳ ಚಿತ್ತ ಕದಡುವಂತೆ ಮಾಡಿತ್ತು. 

ಪಾಸ್‍ವರ್ಡ್ ಗೊತ್ತಿದ್ದ ಕಾರಣದಿಂದ ಹೇಗಾದರೂ ಮಾಡಿ ದೇವರಾಜ್‍ರಿಂದ ಎಟಿಎಂ ಕಾರ್ಡ್ ಕಿತ್ತುಕೊಂಡು, ಹಣ ಲಪಟಾಯಿಸುವ ಸಂಚು ರೂಪಿಸಿದ್ದರು. ಆ. 18 ರಂದು ಆರೋಪಿಗಳು ದೇವರಾಜ್‍ನನ್ನು ಆಸ್ಪತ್ರೆಯಿಂದ ಹೊರ ಕರೆತಂದಿದ್ದಾರೆ. ಎಟಿಎಂ ಕಾರ್ಡ್ ನೀಡುವಂತೆ ದಬಾಯಿಸಿದ್ದಾರೆ. 
ನಿರಾಕರಿಸಿದ ದೇವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಎಟಿಎಂ ಕಿತ್ತುಕೊಂಡಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ದೇವರಾಜ್‍ನನ್ನು ಆರೋಪಿಗಳು ಬೈಕ್‍ನಲ್ಲಿ ಕಾಗಿನೆಲೆ ಅರಣ್ಯ ಪ್ರದೇಶದ ಬಳಿ ಕರೆತಂದಿದ್ದಾರೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಿದ್ದಾರೆ. ನಂತರ ಚೀಲದಲ್ಲಿ ಶವ ತುಂಬಿ ಅಲ್ಲಿಯೇ ಕಾಲುವೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು ಎನ್ನಲಾಗಿದೆ. 

ನಾಪತ್ತೆ ಕೇಸ್: ಎಟಿಎಂ ಕಾರ್ಡ್ ಮೂಲಕ ಆರೋಪಿಗಳು ಸುಮಾರು 60 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಿಕೊಂಡಿದ್ದರು. ಈ ನಡುವೆ ದೇವರಾಜ್ ಆಸ್ಪತ್ರೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವುದು ಅವರ ಕುಟುಂಬದವರ ಗಮನಕ್ಕೆ ಬಂದಿತ್ತು. ಆಸ್ಪತ್ರೆಯವರು ಮಾಹಿತಿಯಿಲ್ಲವೆಂದು ತಿಳಿಸಿದ್ದರು. ಮತ್ತೊಂದೆಡೆ ದೇವರಾಜ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಹಾಗೂ ಎಟಿಎಂನಿಂದ ಸಾವಿರಾರು ರೂ. ಬಿಡುಗಡೆ ಮಾಡಿಕೊಂಡಿದ್ದ ವಿಷಯ ಗಮನಕ್ಕೆ ಬಂದಿತ್ತು. ಈ ಕಾರಣದಿಂದ ಆ. 22 ರಂದು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಕುಟುಂಬದವರು ದೇವರಾಜ್ ನಾಪತ್ತೆಯಾಗಿದ್ದಾನೆಂದು ದೂರು ದಾಖಲಿಸಿದ್ದರು. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಯಲ್ಲಿ ಅಳವಡಿಸಿದ್ದ ಸಿ. ಸಿ. ಕ್ಯಾಮರಾ ವಿವರ ಕಲೆ ಹಾಕಿದಾಗ ಆರೋಪಿಗಳ ಮುಖ ಚಹರೆ ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ ಮುಂದುವರಿಸಿದಾಗ ಆರೋಪಿಗಳ ಸಕಲ ವಿವರ ಕಲೆ ಹಾಕಿದ್ದರು. ತದನಂತರ ಆರೋಪಿಗಳೂ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯೆಯ ವೃತ್ತಾಂತ ಬೆಳಕಿಗೆ ಬಂದಿತ್ತು. 

ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಚೀಲದಲ್ಲಿ ತುಂಬಿ ಕಾಲುವೆಯಲ್ಲಿ ಎಸೆದಿದ್ದ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದರು. ಮೃತದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿತ್ತು. ತದನಂತರ ಆರೋಪಿಗಳಿಬ್ಬರ ವಿರುದ್ದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News