ಅತಿವೃಷ್ಟಿ ಸಂಕಷ್ಟ: ಹೆಚ್ಚುವರಿ ಅಕ್ಕಿ, ಸೀಮೆಎಣ್ಣೆಗೆ ಕುಡಿಯ ಜನಾಂಗ ಬೇಡಿಕೆ

Update: 2018-08-31 18:10 GMT

ಮಡಿಕೇರಿ, ಆ.31 : ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಲ್ಲಿ ವಾಸಿಸುವ ಕುಡಿಯ ಜನಾಂಗದವರು ಕಳೆದ ಎರಡು ತಿಂಗಳುಗಳಿಂದ ಕೂಲಿ ಕೆಲಸವಿಲ್ಲದಿರುವುದರಿಂದ ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅತಿವೃಷ್ಟಿಯಿಂದ ಮುಂದಿನ ಎರಡು ತಿಂಗಳುಗಳ ಕಾಲವೂ ಕೂಲಿ ಕೆಲಸ ದೊರೆಯುವುದು ಕಷ್ಟವಾಗಿದ್ದು, ಸರಕಾರ ಕುಡಿಯ ಜನಾಂಗದ ಕುಟುಂಬಗಳಿಗೆ ಮಾಸಿಕ 25 ಕೆ.ಜಿ ಅಕ್ಕಿ ಹಾಗೂ 5 ಲೀಟರ್ ಸೀಮೆಎಣ್ಣೆಯನ್ನು ಒದಗಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕುಡಿಯರ ಎ.ಮುತ್ತಪ್ಪ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ ಕೊಡಗಿನ ಬೆಳೆಗಾರರು ಸೇರಿದಂತೆ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಹಕಾರ ಸಂಸ್ಥೆ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಎಲ್ಲಾ ವಿಧದ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಐಟಿಡಿಪಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಶಿವಕುಮಾರ್ ಅವರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಂದ ಜಿಲ್ಲೆಯ ಪರಿಶಿಷ್ಟ ಪಂಗಡದ ಜನತೆಗೆ ಹಲವಾರು ಯೋಜನೆಗಳು ತಲುಪುತ್ತಿವೆ. ಆದರೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಮಾಹಿತಿ ದೊರೆತಿದ್ದು, ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಮುತ್ತಪ್ಪ ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜೇನುಕುರುಬ, ಯರವ, ಸೋಲಿಗ ಮತ್ತು ಕಾಡುಕುರುಬ ಜನಾಂಗಗಳಿಗೆ ವಿತರಿಸಲಾಗುತ್ತಿದ್ದ ಪೌಷ್ಠಿಕ ಆಹಾರ ಸಾಮಾಗ್ರಿಗಳನ್ನು ಪ್ರಸಕ್ತ ಜಿಲ್ಲೆಯಲ್ಲಿರುವ 400 ಕುಡಿಯ ಜನಾಂಗದ ಕುಟುಂಬಗಳಿಗೂ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಜೇನುಕುರುಬ, ಯರವ, ಸೋಲಿಗ ಕಾಡುಕುರುಬ ಜನಾಂಗದ ಕುಟುಂಬಗಳಿಗೆ ಪೌಷ್ಠಿಕ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿತ್ತು. ಅದನ್ನು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಕುಡಿಯ ಜನಾಂಗದವರಿಗೂ ವಿಸ್ತರಿಸುವಂತೆ 2012ರಿಂದಲೂ ಮನವಿ ನೀಡಿ ಹೋರಾಟಗಳನ್ನು ನಡೆಸಲಾಗಿತ್ತು. ಆದರೆ ಈ ಸಂಬಂಧ ಸರಕಾರದಿಂದ ಯಾವುದೇ ಆದೇಶ ಹೊರಬಿದ್ದಿರಲಿಲ್ಲ. ಆದರೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯಲ್ಲಿ ಕುಡಿಯ ಜನಾಂಗದವರಿಗೂ ತೀವ್ರ ಹಾನಿಯಾಗಿರುವುದನ್ನು ಹಾಗೂ ಮಳೆಗಾಲದಲ್ಲಿ ಕೂಲಿ ಕೆಲಸ ದೊರೆಯದೆ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿರುವುದರಿಂದ ತಮಗೂ ಪೌಷ್ಠಿಕ ಆಹಾರಗಳನ್ನು ಒದಗಿಸಬೇಕೆಂದು ಜಿಲ್ಲೆಗೆ ಭೇಟಿ ನೀಡಿದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಮೇರೆ ಇದೀಗ ಕುಡಿಯ ಜನಾಂಗದ 400 ಕುಟುಂಬಗಳಿಗೆ ಪೌಷ್ಠಿಕ ಆಹಾರ ವಿತರಿಸುವಂತೆ ಸರಕಾರ ಆದೇಶಿಸಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆ.23ರಂದು ಸಂಘದ ವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸಿದ ನಿರ್ದೇಶಕರು ಸರಕಾರದ ಗಮನಸೆಳೆಯುವುದರೊಂದಿಗೆ ಈ ಆದೇಶವನ್ನು ಹೊರಡಿಸುವಲ್ಲಿ ಯಶಸ್ವಿಯಾಗಿದ್ದು, ಕುಡಿಯ ಜನಾಂಗಕ್ಕೂ ಪೌಷ್ಠಿಕ ಆಹಾರ ಸಾಮಾಗ್ರಿ ದೊರಕಿಸಲು ಕಾರಣರಾದ ಮುಖ್ಯಮಂತ್ರಿಗಳು, ಸಮಾಜಕಲ್ಯಾಣ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಐಟಿಡಿಪಿ ಅಧಿಕಾರಿಗಳಿಗೆ ಕುಡಿಯ ಜನಾಂಗದ ಪರವಾಗಿ ಹಾಗೂ ಸಂಘಟನೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಮುತ್ತಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಲ್ಯಾಂಪ್ಸ್ ಅಧ್ಯಕ್ಷ ಕೆ.ಕುಮಾರ, ಸಂಘಟನೆಯ ಪ್ರಮುಖರಾದ ಮಿಲನ್, ಬೋಪಯ್ಯ, ರತ್ನಾಕರ ಹಾಗೂ ನಾಣಯ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News