'ರಾಹುಲ್ ಗಾಂಧಿ ಒಬ್ಬ ಅಯೋಗ್ಯ' ಎಂದ ಬಿಜೆಪಿ ಶಾಸಕ ಯತ್ನಾಳ್

Update: 2018-09-01 13:48 GMT

ವಿಜಯಪುರ, ಸೆ. 1: ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಅಯೋಗ್ಯ ವ್ಯಕ್ತಿ. ಇಂತಹವರು ಯಾವುದೇ ಕಾರಣಕ್ಕೂ ದೇಶದ ಪ್ರಧಾನಿ ಆಗಬಾರದು’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏಕವಚನದಲ್ಲೆ ಟೀಕಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಶನಿವಾರ ಇಲ್ಲಿನ ಸಿಂಧಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಹುಲ್ ಗಾಂಧಿ ಇದೀಗ ತಾವು ಜನಿವಾರಧಾರಿ ಬ್ರಾಹ್ಮಣರೆಂದು ಹೇಳಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ದೇವರ ನೆನಪಾಗಿದೆ ಎಂದು ವಾಗ್ದಾಳಿ ನಡೆಸಿದರು.

ಅವರಿಗೆ ಏಜೆಂಟ್‌ಗಳಿದ್ದಾರೆ: ರಾಹುಲ್ ಗಾಂಧಿ ಯಾರೂ ಕರೆಯದಿದ್ದರೂ ವಿದೇಶಗಳಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಚೀನಾ ಮತ್ತು ಪಾಕಿಸ್ತಾನದಲ್ಲಿ ಏಜೆಂಟ್‌ಗಳಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಇದೇ ವೇಳೆ ಲೇವಡಿ ಮಾಡಿದರು.

ಭಾರತದ ಸೈನಿಕರನ್ನು ಪಾಕಿಸ್ತಾನಿಯರು ಹತ್ಯೆ ಮಾಡುತ್ತಿದ್ದಾರೆ. ಇದನ್ನು ಮರೆತು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿ ಬಂದರು. ಅಲ್ಲದೆ, ಕಾಂಗ್ರೆಸ್ ಮುಖಂಡರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗುತ್ತಿದ್ದಾರೆಂದು ದೂರಿದರು.

ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಜನ ಭಾರತಕ್ಕೆ ಬರುತ್ತಿದ್ದಾರೆ. ಹೀಗಾಗಿ ಮುಂದೊಂದು ದಿನ ನಾವು ಅವರ ಗುಲಾಮರಾಗಿ ಬಾಳಬೇಕಾಗುತ್ತದೆ. ಆದುದರಿಂದ ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿಯವರನ್ನು ದೇಶದ ಪ್ರಧಾನಿ ಮಾಡಬೇಡಿ ಎಂದು ಯತ್ನಾಳ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News