ಮೈತ್ರಿ ಸರಕಾರ ಶೀಘ್ರದಲ್ಲೆ ಪತನ: ಬಿಎಸ್‌ವೈ

Update: 2018-09-02 13:48 GMT

ಬಾಗಲಕೋಟೆ, ಸೆ. 2: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ಅವಧಿ ಪೂರ್ಣಗೊಳಿಸುವುದಿಲ್ಲ. ಈ ಸರಕಾರ ಶೀಘ್ರದಲ್ಲೆ ಪತನವಾಗಲಿದೆ ಎಂದು ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ರವಿವಾರ ಮುದೋಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಸರಕಾರ ಇದ್ದು ಸತ್ತಂತೆಯೇ ಇದೆ. ಮೈತ್ರಿ ಸರಕಾರ ಹೆಚ್ಚೆಂದರೆ ಇನ್ನು ಮೂರು ತಿಂಗಳು ಮಾತ್ರ ಆಡಳಿತ ನಡೆಸಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ರೈತರ ಸಾಲಮನ್ನಾ ಘೋಷಣೆ ಮಾಡಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದು, ಸಿಎಂ ಕುಮಾರಸ್ವಾಮಿ ಬರ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರು ದಿನದ ಸಂಭ್ರಮದಲ್ಲಿರುವ ಸರಕಾರಕ್ಕೆ ಸಮಸ್ಯೆಗಳ ಬಗ್ಗೆ ಗಮನವಿಲ್ಲ. ಬಹುಮತ ಪಡೆದಿರುವ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನ ಬಿಜೆಪಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಮನ್ವಯ ಸಮಿತಿ ಸಭೆ ನಡೆಸಿದ್ದೆ ದೊಡ್ಡ ಸಾಧನೆ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದ್ದು, ಈ ಸರಕಾರ ಬಹಳ ದಿನ ಉಳಿಯದು. ಕಾಂಗ್ರೆಸ್‌ನಲ್ಲಿ ಗೊಂದಲದ ವಾತಾವರಣವಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿಎಸ್‌ವೈ ಸಿಎಂ ಆಗುತ್ತಾರೆಂಬುದು ಬಯಲಾಗಲಿದೆ ಎಂದರು.

ಕುಮಾರಸ್ವಾಮಿ ದೇವಸ್ಥಾನ ಭೇಟಿಗೆ ನಮ್ಮ ಅಭ್ಯಂತರವಿಲ್ಲ. ಆದರೆ, ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಬೆಂಬಲ ಬೆಲೆ ಕೇಂದ್ರ ನಿಗದಿ ಮಾಡಿದರೂ ಇನ್ನೂ ಖರೀದಿ ಮಾಡ್ತಿಲ್ಲ. ತಮ್ಮ ಹಾಗೂ ಸಿದ್ದರಾಮಯ್ಯ ಫೋನ್ ಕದ್ದಾಲಿಕೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಲೋಕಸಭೆ ಚುನಾವಣೆಗೆ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದಲಾದರೂ ಸ್ಪರ್ಧಿಸಲಿ, ನಮಗೇನು ನಷ್ಟವಿಲ್ಲ. ಪ್ರಧಾನಿ ಮೋದಿ ಪ್ರಭಾವ ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತ ಎಂದು ನುಡಿದರು.

‘ಮುಖ್ಯಮಂತ್ರಿಯಾಗಲು ಯಾರ್ಯಾರು ಹಗಲುಗನಸು ಕಾಣುತ್ತಿದ್ದಾರೆಂಬುದು ಶೀಘ್ರದಲ್ಲೆ ತಿಳಿಯಲಿದೆ. ಹಾಸನ ಸೇರಿದಂತೆ ಎಲ್ಲೆಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಏನೇನು ಮಾತನಾಡಿದ್ದಾರೆಂಬುದು ಗೊತ್ತಾಗಲಿದೆ’

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News