ಐವರು ಅಂತರಾಜ್ಯ ಕಳ್ಳರ ಬಂಧನ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

Update: 2018-09-02 18:08 GMT

ದಾವಣಗೆರೆ,ಸೆ.2: ವಿವಿಧ ಜಿಲ್ಲೆಗಳಲ್ಲಿ ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಐವರು ಅಂತರ್ ರಾಜ್ಯ ದರೋಡೆಕೋರರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.25 ರಂದು ಮಧ್ಯರಾತ್ರಿ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಹೊರವಲಯದಲ್ಲಿರುವ ಗಂಗಾಧರಪ್ಪ ಎಂಬವರ ಮನೆಯಲ್ಲಿ ದರೋಡೆ ನಡೆಸಿ ಪರಾರಿಯಾಗುವ ವೇಳೆ ಮನೆಯ ಕೆಲಸಗಾರರಿಬ್ಬರು ಡಕಾಯಿತರ ಪೈಕಿ ಓರ್ವನನ್ನು ಹಿಡಿದುಕೊಂಡಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದರು. ಹೀಗೆ ಸಿಕ್ಕಿಬಿದ್ದಿದ್ದ ಆರೋಪಿ ಸುನೀತ್ ಕುಮಾರನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಕೃತ್ಯದಲ್ಲಿ ಭಾಗಿಯಾಗಿದ್ದವರ ವಿವರಗಳನ್ನು ನೀಡಿದ್ದನು ಎಂದು ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಪಿಎಸ್‍ಐಗಳಾದ ಕಾಡದೇವರ, ಸಿದ್ದೇಗೌಡ, ಹನುಮಂತಪ್ಪ ಶಿರೇಹಳ್ಳಿ, ಸಿಪಿಐ ಜೆ.ರಮೇಶ್, ಲಕ್ಷ್ಮಣನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ನಿರಂಜನ್ ಕುಮಾರ್, ಮುಖೇಶ್ ಕುಮಾರ್, ರಾಕೇಶ್ ಮತ್ತು ಸಂತೋಷ್‍ ಕುಮಾರ್ ಅವರುಗಳನ್ನು ಬಂಧಿಸಿ 30 ಲಕ್ಷ ರೂ ಮೌಲ್ಯದ 1.06 ಕೆಜಿ ಬಂಗಾರ, ಒಂದು ಲಕ್ಷ ರೂ ಬೆಲೆಯ ಎರಡು ಪಲ್ಸರ್ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಆರೋಪಿಗಳು ಹೊನ್ನಾಳಿ, ನ್ಯಾಮತಿ, ಹರಿಹರ, ಹರಪನಹಳ್ಳಿ, ಅರಸೀಕೆರೆ, ಜಗಳೂರು ದಾವಣಗೆರೆ ನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಕ್ಯಾತಸಂದ್ರ, ಚೇಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಪಾಲೀಶ್ ಮಾಡಿಕೊಡುವ ನೆಪದಲ್ಲಿ ಒಂಟಿ ಹೆಣ್ಣು ಮಕ್ಕಳಿರುವ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಹೀಗೆ ಹೊನ್ನಾಳಿ ಠಾಣಾ ವ್ಯಾಪ್ತಿಯಲ್ಲಿ 5, ನ್ಯಾಮತಿ, ಅರಸೀಕೆರೆ, ಜಗಳೂರು, ಬಿಳಿಚೋಡು, ಸೇರಿದಂತೆ ಹತ್ತಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ತಲಾ 1, ಹರಿಹರ, ಹರಪನಹಳ್ಳಿ ನಗರ ಠಾಣಾ ವ್ಯಾಪ್ತಿಯಲ್ಲಿ 2 ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 3 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ನೀಡಿದರು.

ದೇಶದ ವಿವಿಧ ರಾಜ್ಯಗಳು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ತಂಡ ಸಾಕಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ವಿಚಾರಣೆ ಮುಂದುವರಿದಿದೆ. ಹೆಚ್ಚುವರಿ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಉಪವಿಭಾಗದ ಅಧೀಕ್ಷಕ ಎಂ.ಕೆ.ಗಂಗಲ್, ಜೆ.ರಮೇಶ್, ನ್ಯಾಮತಿ ಠಾಣಾ ಸಿಬ್ಬಂದಿಗಳಾದ ರಾಘವೇಂದ್ರ ಮಜಿದ್, ರಮೇಶ್ ನಾಯ್ಕ, ಶಾಂತರಾಜ್, ಮಹಮದ್ ಇಲಿಯಾಸ್, ರಾಮಂಚಂದ್ರ ಜಾದವ್, ಪೈರೋಜ್, ವೆಂಕಟರಮಣ ಮತ್ತು ಇತರರ ಭಾಗಿಯಾಗಿದ್ದು ಈ ಎಲ್ಲ ಸಿಬ್ಬಂದಿಗಳಿಗೆ ಇಲಾಖೆಯಿಂದ 10 ಸಾವಿರ ರೂ ನಗದು ಬಹುಮಾನ ಘೋಷಿಸಲಾಗಿದೆ ಎಂದರು. 

ಎಎಸ್ಪಿ ಉದೇಶ್, ಡಿವೈಎಸ್‍ಪಿ ಎಂ.ಕೆ.ಗಂಗಲ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News