ಏಷ್ಯನ್ ಗೇಮ್ಸ್ ನಲ್ಲಿ ಕೊಡಗಿನ ಕ್ರೀಡಾ ಕಲಿಗಳ ಐತಿಹಾಸಿಕ ಸಾಧನೆ
ಮಡಿಕೇರಿ ಸೆ.3: ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ತಂಡಗಳು ಈ ಬಾರಿ ಅಮೋಘ ಸಾಧನೆಯನ್ನು ಮಾಡಿವೆ. ಗಮನಾರ್ಹ ಸಂಖ್ಯೆಯಲ್ಲಿ ಪದಕಗಳನ್ನು ಗಳಿಸಿ ದೇಶದ ಕ್ರೀಡಾಪಟುಗಳು ವಿಶ್ವದ ಗಮನ ಸೆಳೆದಿದ್ದಾರೆ.
ಈ ಸಾಧನೆಯಲ್ಲಿ ಕೊಡಗಿನ ಕ್ರೀಡಾಪಟುಗಳ ಪಾತ್ರವೂ ಇರುವುದು ವಿಶೇಷ. ಟೆನ್ನಿಸ್ನಲ್ಲಿ ಮಚ್ಚಂಡ ರೋಹನ್ ಬೋಪಣ್ಣ ಹಾಗೂ ಅಥ್ಲೆಟಿಕ್ಸ್ ನಲ್ಲಿ ಮಾಚೆಟ್ಟಿರ ಆರ್. ಪೂವಮ್ಮ ಅವರದ್ದು ಚಿನ್ನದ ಪದಕದ ಸಾಧನೆಯಾಗಿದೆ. ಪೂವಮ್ಮ 4*400 ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಪದಕಗಳಿಸಿದ್ದಾಳೆ. ಸ್ಕ್ವಾಷ್ನಲ್ಲಿ ಕುಟ್ಟಂಡ ಜೋತ್ಸ್ನಾ ಚಿಣ್ಣಪ್ಪಳಿಗೆ ಬೆಳ್ಳಿಯ ಪದಕ ಬಂದಿದ್ದರೆ, ಸೈಲಿಂಗ್ನಲ್ಲಿ ಕೇಳಪಂಡ ಪಾರ್ಥ ಗಣಪತಿ ಕಂಚಿನ ಪದಕಗಳಿಸಿದ್ದಾರೆ.
ಹಾಕಿಯಲ್ಲಿ ಎಸ್.ವಿ. ಸುನಿಲ್ ಕಂಚಿನ ಪದಕ ಸಾಧನೆ ಮಾಡಿದ ತಂಡದ ಆಟಗಾರ. 4*400 ಪರುಷರ ರಿಲೇ ತಂಡದಲ್ಲಿ ಕಾರೆಕೊಪ್ಪ ಜೀವನ್ ನಿರ್ಣಾಯಕ ಘಟ್ಟದಲ್ಲಿ ಇರದಿದ್ದರೂ ತಂಡದ ಸ್ಪರ್ಧಿಯಾಗಿ ಇವರೂ ಬೆಳ್ಳಿಯ ಪದಕದ ಪಾಲುದಾರರು. ಇನ್ನು ಬ್ಯಾಡ್ಮಿಂಟನ್ನಲ್ಲಿ ಮಾಚಿಮಂಡ ಅಶ್ವಿನಿ ಪೊನ್ನಪ್ಪ ಅವರು ಮಾತ್ರ ಪದಕದ ಪಟ್ಟಿಯಲ್ಲಿ ಇಲ್ಲ. ಆದರೆ ಏಷ್ಯನ್ ಗೇಮ್ಸ್ ನಲ್ಲಿ ಭಾರತ ತಂಡ ಈ ತನಕ ಮಾಡದಿದ್ದ ಸಾಧನೆಯನ್ನು ಇವರು ತೋರಿರುವುದು ಶ್ಲಾಘನೀಯವಾಗಿದೆ.
ಕೊಡಗಿನ ಕ್ರೀಡಾಪಟುಗಳು ಈ ಬಾರಿ ತೋರಿರುವ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪದಕ ಗೆದ್ದಿರುವ ಜಿಲ್ಲೆಯ ಕ್ರೀಡಾಕಲಿಗಳು ಸಾಧನೆಯನ್ನು ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಅರ್ಪಿಸಿರುವುದು ವಿಶೇಷವಾಗಿದೆ.