ಮೀಸಲಾತಿ ಪ್ರಕಟ: ತುಮಕೂರು ನಗರಪಾಲಿಕೆಯ ಮೇಯರ್ ರೇಸ್‍ನಲ್ಲಿ ಲಲಿತಾ ರವೀಶ್

Update: 2018-09-04 15:37 GMT

ತುಮಕೂರು.ಸೆ.04: ತುಮಕೂರು ನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪ್ರಕಟವಾಗಿದ್ದು, ಮೇಯರ್ ಬಿ.ಸಿ.ಎಂ.(ಎ) ಮಹಿಳೆಗೂ, ಉಪಮೇಯರ್ ಪರಿಶಿಷ್ಟ ಜಾತಿ ಮಹಿಳೆಗೂ ಮೀಸಲಾಗಿದೆ. 

ಪಾಲಿಕೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ 9 ಜನ ಮಹಿಳಾ ಅಭ್ಯರ್ಥಿಗಳು ಆಯ್ಕೆಗೊಂಡಿದ್ದು, ಇವರಲ್ಲಿ ಒಂದನೇ ವಾರ್ಡಿನಿಂದ ನಳಿನಿ ಇಂದ್ರಕುಮಾರ್, 15 ವಾರ್ಡಿನಿಂದ ವಿ.ಎಸ್.ಗಿರಿಜಾ, 27 ವಾರ್ಡಿನಿಂದ ಚಂದ್ರಕಲಾ ಅವರು ಬಿಜೆಪಿ ಪಕ್ಷದ ಗೆಲುವು ಪಡೆದಿದ್ದರೆ, ಕಾಂಗ್ರೆಸ್ ಪಕ್ಷದಿಂದ 10ನೇ ವಾರ್ಡಿನ ನೂರುನ್ನಿಸಾ, 13ನೇ ವಾರ್ಡಿನಿಂದ ಫರಿದಾ ಬೇಗಂ, 14ನೇ ವಾರ್ಡಿನಿಂದ ನಾಜೀರಾ ಬಾನು, 29ನೇ ವಾರ್ಡಿನಿಂದ ನಾಜೀಮಾ ಬೀ ಅವರುಗಳು ಆಯ್ಕೆಯಾದರೆ, ಜೆಡಿಎಸ್‍ನಿಂದ ಮಾಜಿ ಮೇಯರ್ ಲಲಿತಾ ರವೀಶ್ ಎರಡನೇ ಬಾರಿಗೆ 21ನೇ ವಾರ್ಡಿನಿಂದ ಆಯ್ಕೆಯಾಗಿದ್ದಾರೆ.

ಉಪಮೇಯರ್ ಗೆ ಮೀಸಲಾಗಿರುವ ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರದಿಂದ 9ನೇ ವಾರ್ಡಿನ ಪ್ರಭಾವತಿ ಸುಧೀಶ್ವರ್ ಮತ್ತು 19ನೇ ವಾರ್ಡಿನಿಂದ ರೂಪಶ್ರೀ ಆಯ್ಕೆಯಾಗಿದ್ದಾರೆ.

ಪಾಲಿಕೆಯಲ್ಲಿ ಈ ಹಿಂದಿನಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆದರೆ 21ನೇ ವಾರ್ಡಿನಿಂದ ಗೆಲುವು ಸಾಧಿಸಿರುವ ಲಲಿತಾ ರವೀಶ್ ಮೇಯರ್ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. ಈ ಹಿಂದಿನ ಆಡಳಿತಾವಧಿಯಲ್ಲಿರುವ ಜೆಡಿಎಸ್ ಎರಡು ಬಾರಿ, ಕಾಂಗ್ರೆಸ್ ಮೂರು ಬಾರಿ ಮೇಯರ್ ಪದವಿ ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಮೊದಲ ಅವಧಿಗೆ ಜೆಡಿಎಸ್‍ಗೆ ಜೈ ಎನ್ನುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಕಾಂಗ್ರೆಸ್ ಪ್ರತಿಷ್ಠೆಯಾಗಿ ಪಡೆದರೆ ಮಾತ್ರ ಬಿಜೆಪಿಗೆ ಒಂದು ಅವಕಾಶ ಲಭಿಸಬಹುದು. 

ಉಪಮೇಯರ್ ರೇಸ್‍ನಲ್ಲಿ ಇರುವ ಪ್ರಭಾವತಿ ಮತ್ತು ರೂಪಶ್ರೀ ಇವರಲ್ಲಿ, ಪರಿಶಿಷ್ಟ ಜಾತಿಯ ಒಳಪಂಗಡದ ಕಿತ್ತಾಟ ಬಂದರೆ ರೂಪಶ್ರೀ ಉಪಮೇಯರ್ ಆಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಸಾಲಿನ ಕೊನೆಯಲ್ಲಿ ಪ್ರಭಾವತಿ ಅವರ ಪತಿ ಸುಧೀಶ್ವರ್ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದ ಕಾರಣ ಇದೇ ಜಾತಿಯ ಮತ್ತೊಂದು ಪ್ರಬಲ ಪಂಗಡಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಒಟ್ಟಾರೆ ಅತಿ ಹೆಚ್ಚು ಸ್ಥಾನ ಪಡೆದರೂ, ಪಕ್ಷದಿಂದ ಮೂವರು ಬಿಸಿಎಂ(ಎ)ಗೆ ಸೇರಿದ ಮಹಿಳೆಯರು ಗೆಲುವು ಪಡೆದಿದ್ದರೂ ಅಧಿಕಾರದ ಗದ್ದುಗೆ ಏರಲು ಬಿಜೆಪಿಗೆ ಅವಕಾಶ ಇಲ್ಲದಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News