ಮೈಸೂರು ಅರಮನೆ ಪ್ರವೇಶಿಸಿದ ಅರ್ಜುನ ನೇತೃತ್ವದ ದಸರಾ ಗಜಪಡೆ: ಜಿಲ್ಲಾಡಳಿತದಿಂದ ಭವ್ಯ ಸ್ವಾಗತ

Update: 2018-09-05 15:05 GMT

ಮೈಸೂರು,ಸೆ.5: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯ ಚಿನ್ನದ ಅಂಬಾರಿ ಹೊರುವ ಅರ್ಜುನ ಸೇರಿದಂತೆ 6 ಗಜಪಡೆಗಳ ಮೊದಲ ತಂಡ ಬುಧವಾರ ಸಂಜೆ 4.30ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಅರಮನೆ ಪ್ರವೇಶಿಸುತ್ತಿದ್ದಂತೆ ಭವ್ಯ ಸ್ವಾಗತ ನೀಡಲಾಯಿತು.

ಕಾಡಿನಿಂದ ನಾಡಿಗೆ ಪ್ರವೇಶಿಸಿದ ಆನೆಗಳು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಪ್ರವೇಶ ಮಾಡುತ್ತಿದ್ದಂತೆ ಚಾಮುಂಡಿ ಬೆಟ್ಟದ ಪ್ರಧಾನ ಆಗಮಿಕ ಶಶಿಶೇಖರ ದೀಕ್ಷತರು ಪೂಜೆಸಲ್ಲಿಸಿದರು. ನಂತರ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಪುಷ್ಪಾರ್ಚನೆ ಮಾಡುವ ಮೂಲಕ ಬರಮಾಡಿಕೊಂಡರು. 

ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಿ, ಪೊಲೀಸ್ ಗೌರವ ರಕ್ಷೆ ಮೂಲಕ ಸ್ವಾಗತ ಕೋರಲಾಯಿತು. ನಂತರ ಅಂಬವಿಲಾಸ ಅರಮನೆ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಗಜಪಡೆಯ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದ ಅರ್ಜುನ, ವರಲಕ್ಷ್ಮಿ, ಚೈತ್ರ , ಗೋಪಿ, ವಿಕ್ರಮ, ಧನಂಜಯ ಆನೆಗಳು ಅರಮನೆ ಆವರಣ ಪ್ರವೇಶಿಸಿದವು. ಸೆ.2 ರಂದು ವೀರನಹೊಸಹಳ್ಳಿಯಿಂದ ಹೊರಟು ಮೈಸೂರು ತಲುಪಿದ ಆನೆಗಳು ಅಶೋಕಪುರಂ ಅರಣ್ಯ ಭವನದ ಆವರಣದಲ್ಲಿ ತಂಗಿದ್ದವು. ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಗಜಪಡೆಯನ್ನು ಉಪಚರಿಸಿ, ಅಲಂಕರಿಸಿ, ಅರಣ್ಯ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆಗಮಿಸಿದ ಗಜಪಡೆ: ಮಧ್ಯಾಹ್ನ 3.30ಕ್ಕೆ ಸರಿಯಾಗಿ ಅರಣ್ಯಭವನದಿಂದ ಅಲಂಕೃತ ಆನೆಗಳು ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕೃಷ್ಣಮೂರ್ತಿಪುರಂ, ಬಲ್ಲಾಳ್ ವೃತ್ತ, ಆರ್.ಟಿ.ಓ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಸಯ್ಯಾಜಿರಾವ್ ರಸ್ತೆ, ನಗರಪಾಲಿಕೆ ವೃತ್ತ, ಪುರಂದರದಾಸರ ರಸ್ತೆ ಮೂಲಕ ಅರಮನೆ ಪೂರ್ವ ದ್ವಾರದ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶಿದವು. 

ಜಾನಪದ ಕಲಾತಂಡಗಳ ಮೆರುಗು: ಜಯಮಾರ್ತಾಂಡ ದ್ವಾರದಲ್ಲಿ ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು. ಕಂಸಾಳೆ, ಪೂಜಾಕುಣಿತ, ವೀರಗಾಸೆ, ಡೊಳ್ಳುಕುಣಿತ ಎಲ್ಲರ ಗಮನ ಸೆಳೆಯಿತು.

ಸಾರ್ವಜನಿಕರ ವೀಕ್ಷಣೆ: ಅರಮನೆ ಪ್ರವೇಶಿಸುವ ಗಜಪಡೆಗಳನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಅರಮನೆ ಪ್ರವೇಶಿಸಿ ವೀಕ್ಷಿಸಿದರು. ವಿದೇಶಿಗರು ಸಹ ಆನೆಗಳ ಅಗಮನ ಕಂಡು ಪುಳಕಿತರಾದರು.

ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ವಿಶ್ವನಾಥ್, ಎಲ್.ನಾಗೇಂದ್ರ, ಹರ್ಷವರ್ಧನ್, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್‍ಪ್ರಸಾದ್, ಆರಿಫ್ ಹುಸೇನ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಸಂತೋಷ್, ಸಚಿವ ಜಿ.ಟಿ.ದೇವೇಗೌಡರ ಪತ್ನಿ ಲಲಿತ, ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್, ಡಿಸಿಪಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾಂಪ್ರದಾಯಿಕ ದಸರಾ ಆಚರಣೆ: ಸಚಿವ ಜಿ.ಟಿ.ದೇವೇಗೌಡ
ಈ ಬಾರಿಯ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಅರಮನೆ ಆವರಣದಲ್ಲಿ ಬುಧವಾರ ಗಜಪಡೆಗಳಿಗೆ ಸ್ವಾಗತ ನೀಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡುತ್ತಿದ್ದು, ದಸರಾದ ಪ್ರಮುಖ ಆಕರ್ಷಣೆ ಗಜಪಡೆ. ಇವುಗಳ ಸಂಪೂರ್ಣ ಹೊಣೆಯನ್ನು ಜಿಲ್ಲಾಡಳಿತ ವಹಿಸಿದ್ದು, ಆನೆಗಳು ಮತ್ತು ಮಾವುತರು, ಕಾವಾಡಿಗಳ ಸೌಕರ್ಯವನ್ನು ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ಹಂತದ ಗಜಪಡೆ ಇಂದು ಅರಮನೆ ಪ್ರವೇಶಿಸಿದ್ದು, ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಂಡಿರುವುದಾಗಿ ಉನ್ನತ ಶಿಕ್ಷಣ ಹಾಗೂ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮಾವುತರಿಗೆ ಸೂರು: ದಸರಾ ಮಹೋತ್ಸವದ ಗಜಪಡೆಗಳ ನಿರ್ವಹಣೆ ಹೊತ್ತಿರಿವ ಮಾವುತರು ಮತ್ತು ಕಾವಾಡಿಗಳಲ್ಲಿ ಯಾರಿಗೆ ಮನೆ ಇಲ್ಲವೊ ಅಂತಹವರಿಗೆ ಶಾಶ್ವತವಾಗಿ ಸೂರು ಒದಗಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News