ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಶಿಕ್ಷಣ ನೀತಿ ಜಾರಿ ಅಗತ್ಯ: ಡಿಸಿಎಂ ಪರಮೇಶ್ವರ್

Update: 2018-09-05 17:14 GMT

ತುಮಕೂರು,ಸೆ.05: ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅತಿ ಹೆಚ್ಚು ಮಾನವ ಶಕ್ತಿಯನ್ನು ರೂಪಿಸಿ ವಿಶ್ವಕ್ಕೆ ಕೊಡುಗೆಯಾಗಿ ನೀಡುತ್ತಿರುವ ಹೆಗ್ಗಳಿಕೆ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬಿ.ಹೆಚ್. ರಸ್ತೆ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣದ ಡಾ.ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ಏರ್ಪಡಿಸಿದ್ದ  ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 131ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭೌದ್ಧಿಕ ಮಟ್ಟಕ್ಕೆ ತಕ್ಕಂತೆ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವಂತಹ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಲ್ಲಿ ಮತ್ತಷ್ಟು ಸದೃಢ ರಾಷ್ಟ್ರ ನಮ್ಮದಾಗಲಿದೆ ಎಂದರು. 

ಸಮಾಜವನ್ನು ತಿದ್ದಿ ತೀಡುವಂತಹ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವಂತಹ ಶಿಕ್ಷಕರ ಬಗ್ಗೆ ಪ್ರಶಂಸನಾ ಮಾತುಗಳನ್ನಾಡುವ ದಿನವಿದು. ಇದಕ್ಕೆ ಕಾರಣಕರ್ತರಾದ ರಾಧಾಕೃಷ್ಣನ್ ಅವರ ಜನ್ಮ ದಿನವಾದ ಸೆ.5ರಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿದ್ದ ಗುರುಕುಲ ಪದ್ಧತಿಯು ಆಧುನಿಕ ಜಗತ್ತಿನಲ್ಲಿ ಶಾಲಾ-ಕಾಲೇಜುಗಳಾಗಿ ಬದಲಾಗಿವೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸತ್ಪ್ರಜೆಯನ್ನಾಗಿ ಮಾಡುವ, ಧರ್ಮ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಗುರುಗಳ ಸ್ಥಾನ ಎಲ್ಲಾ ಕ್ಷೇತ್ರಗಳಿಗೂ ಮಿಗಿಲಾದುದು. ಸಮಾಜವನ್ನು ಬದಲಾಯಿಸುವ ಶಕ್ತಿ ಅವರಿಗಿದೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು. 

ಇಂದು ದೇಶ ಅಭಿವೃದ್ಧಿ ಕಂಡಿದ್ದರೆ ಅದಕ್ಕೆ ಅಕ್ಷರ ಜ್ಞಾನ ನೀಡಿದ ಶಿಕ್ಷಕರೇ ಮುಖ್ಯ ಕಾರಣ. 1947ರ ಸ್ವಾತಂತ್ರ ದೊರೆತ ಸಂದರ್ಭದಲ್ಲಿ ಶೇ.12ರಷ್ಟಿದ್ದ ಸಾಕ್ಷರತೆ ಮಟ್ಟ ಇಂದು ಶೇ.80ಕ್ಕೆ ತಲುಪಿದ್ದೇವೆ. ವಿಶ್ವದ ಸರಾಸರಿ ಸಾಕ್ಷರತೆ ಮಟ್ಟ ಶೇ. 84ರಷ್ಟಿದ್ದು, ನಮ್ಮ ದೇಶ ಸಂಪೂರ್ಣ ಸಾಕ್ಷರತೆಯಾಗುವತ್ತ ಸಾಗುತ್ತಿರುವುದು ಸಾಮಾನ್ಯದ ಮಾತಲ್ಲ. ಹಿಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ರೂಪಿಸುವ ಪಂಚವಾರ್ಷಿಕ ಯೋಜನೆಗಳೇ ಸಾಕ್ಷರತೆಯ ಮಟ್ಟ ಹೆಚ್ಚಲು ಮೂಲ ಕಾರಣ. ಈ ಯೋಜನೆಗಳು ದೇಶದ ಶೈಕ್ಷಣಿಕ, ಸಾಮಾಜಿಕ,ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸಿ ಅಭಿವೃದ್ಧಿ ಕಾಣುವಂತೆ ಮಾಡಿವೆ ಎಂದು ತಿಳಿಸಿದರು. 

ನಂತರ ಪರಮೇಶ್ವರ್ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೆಸರಿನಲ್ಲಿ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ತಲಾ ಒಬ್ಬ ಉತ್ತಮ ಮಹಿಳಾ ಶಿಕ್ಷಕಿಗೆ 25,000 ರೂ.ಗಳ ನಗದು ಪುರಸ್ಕಾರವನ್ನು ನೀಡುವುದಾಗಿ ಘೋಷಿಸಿದರು. 

ಕುಣಿಗಲ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಗೋವಿಂದರಾಯ ಅವರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ತಂದೆ-ತಾಯಿಯಂತೆ ಕಾಣಬೇಕು. ಇಂದಿನ ಮಕ್ಕಳು ಹಿರಿಯ ಮಾತು ಕೇಳುತ್ತಿಲ್ಲವೆಂಬ ತಳಮಳದ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ.  ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಗುರು ಹಾಗೂ ಗುರಿಯನ್ನು ಹೊಂದಿರಬೇಕು. ಅದೇ ರೀತಿ ಶಿಕ್ಷಕರೂ ಕೂಡ ಸೇವಾ ಮನೋಭಾವ, ಆತ್ಮತೃಪ್ತಿ, ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಮಕ್ಕಳಿಗೆ ಗುಣಮಟ್ಟದ ಬೋಧನೆ ನೀಡಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ತುಮಕೂರು ದಕ್ಷಿಣ ಜಿಲ್ಲೆಯ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಲಾ 6 ರಂತೆ ಒಟ್ಟು 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೇ, 2017ರ ಸೆ.1 ರಿಂದ 2018ರ ಆಗಸ್ಟ್ 31ರವರೆಗೆ ನಿವೃತ್ತಿ ಹೊಂದಿದ ತುಮಕೂರು ತಾಲೂಕಿನ 134 ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿದರು, ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಗೋವಿಂದರಾಜು ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ: 
ಕಳೆದ ಏಪ್ರಿಲ್ 2018ರ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದ ಚಿಕ್ಕನಾಯಕನಹಳ್ಳಿಯ ಆರ್. ಚಿನ್ಮಯಿ ಹಾಗೂ ಮುಬಾರಕ್ ಅಗಾ, ತಿಪಟೂರಿನ ಎಸ್. ಚಿನ್ಮಯಿ, ತುಮಕೂರು ತಾಲೂಕಿನಲ್ಲಿ ಗರಿಷ್ಟ ಅಂಕ ಪಡೆದ ನಿಹಾ ಅಜ್‍ಮತ್, ಹೆಚ್.ಎಲ್. ನಿಶಾ ಹಾಗೂ ವಿನುತಾ ಅವರಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲ ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ವಿಧಾನಪರಿಷತ್ ಸದಸ್ಯ ಎಂ.ಕಾಂತರಾಜ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್, ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ, ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ತುಮಕೂರು ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಕರು, ವಿವಿಧ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News