ಮಡಿಕೇರಿ: ಇಬ್ಬರು ಪೌರ ಕಾರ್ಮಿಕರು ಆತ್ಮಹತ್ಯೆಗೆ ಶರಣು

Update: 2018-09-05 18:11 GMT

ಮಡಿಕೇರಿ, ಸೆ.5 : ನಗರದ ಗಾಂಧಿ ಮೈದಾನದಲ್ಲಿರುವ ರಂಗಮಂಟಪದ ಹಿಂಬದಿಯಲ್ಲಿ ವಾಸವಾಗಿದ್ದ ಪೌರ ಕಾರ್ಮಿಕರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಡಿಕೇರಿ ನಗರ ಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸತೀಶ(38) ಮತ್ತು ಉಷಾ(29) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. 

ಮೂಲತ: ಮೈಸೂರಿನ ಅಶೋಕಪುರ ಸಮೀಪದ ಅಂಬೇಡ್ಕರ್ ಕಾಲೋನಿ ನಿವಾಸಿ ಸತೀಶ್ ಮತ್ತು ಹೆಚ್.ಡಿ.ಕೋಟೆ ರಸ್ತೆಯ ಸಿಲ್ಕ್ ಫ್ಯಾಕ್ಟರಿ ನಿವಾಸಿ ಉಷಾ ಕಳೆದ 8 ವರ್ಷಗಳಿಂದ ಮಡಿಕೇರಿ ನಗರ ಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ನಗರದ ರಂಗಮಂಟಪದ ಹಿಂಬದಿಯ ವಸತಿಯೊಂದರಲ್ಲಿ ಜೊತೆಯಲ್ಲೇ ವಾಸಿಸುತ್ತಿದ್ದ ಈ ಇಬ್ಬರು ಪೌರ ಕಾರ್ಮಿಕರು ಕೂಡ ವಿವಾಹಿತರಾಗಿದ್ದು ಪರಸ್ಪರ ಪತಿ, ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ಬದುಕು ಸಾಗಿಸುತ್ತಿದ್ದರು ಎನ್ನಲಾಗಿದೆ. 

ಕಳೆದ 2 ದಿನಗಳಿಂದ ಕೆಲಸಕ್ಕೂ ಬಾರದೆ, ಮನೆಯ ಬಾಗಿಲನ್ನು ತೆರೆಯದೇ ಇದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ನಿವಾಸಿ ಮೀನಾಕ್ಷಿ ಎಂಬಾಕೆ ಸೆ. 5ರಂದು ಸಂಜೆ ಕಿಟಕಿಯಿಂದ ಗಮನಿಸಿದಾಗ ಇಬ್ಬರ ದೇಹಗಳು ನಿಶ್ಚಲವಾಗಿದ್ದ ಸ್ಥಿತಿಯಲ್ಲಿದ್ದವು. ನಗರಸಭೆ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ. 

ಸ್ಥಳಕ್ಕೆ ಧಾವಿಸಿದ ಮಡಿಕೇರಿ ನಗರ ಪೊಲೀಸರು ಮೃತದೇಹಗಳ ಪರಿಶೀಲನೆ ನಡೆಸಿದ್ದು, ಎರಡು ದಿನಗಳ ಹಿಂದೆ ಇಬ್ಬರೂ ಕೂಡ ಜೊತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು, ಮೃತರ ಕುಟುಂಬ ವರ್ಗಕ್ಕೆ ಮಾಹಿತಿ ನೀಡಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಹೆಚ್ಚಿನ ತನಿಖೆಯಿಂದಷ್ಟೇ ಸತೀಶ ಹಾಗೂ ಉಷಾ ನಡುವಿನ ಸಂಬಂಧ ಏನು ಎನ್ನುವುದು ಬಹಿರಂಗವಾಗಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News