ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ

Update: 2018-09-06 17:02 GMT

ಮೈಸೂರು,ಸೆ.6: ಪತಿ ವರದಕ್ಷಿಣೆ ತರುವಂತೆ ನಿತ್ಯ ಕುರುಕುಳ ನೀಡುತ್ತಿದ್ದರಿಂದ ಮನನೊಂದ ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ತಾಲ್ಲೂಕಿನ ದೊಡ್ಡಕಾಟೂರಿನಲ್ಲಿ ನಡೆದಿದೆ ಎನ್ನಲಾಗಿದೆ.

ಮೃತರನ್ನು ಮೂಲತಃ ಟಿ.ನರಸೀಪುರ ತಾಲೂಕಿನ ಗಣಗನೂರು ಗ್ರಾಮದ ಮಹದೇವಮ್ಮ(25) ಎಂದು ಹೇಳಲಾಗಿದೆ. ಎರಡು ವರ್ಷಗಳ ಹಿಂದೆ ಮಹದೇವಮ್ಮ ಅವರನ್ನು ಶಂಕರ್ ಎಂಬ ವ್ಯಕ್ತಿಗೆ ವಿವಾಹ ಮಾಡಿಕೊಡಲಾಗಿತ್ತು. ಪತಿ ಶಂಕರ್ ನಿತ್ಯ ಕುಡಿದು ಬಂದು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಮೃತ ಮಹದೇವಮ್ಮ ಪೋಷಕರು ಆರೋಪಿಸಿದ್ದಾರೆ.

ಧಾನ್ಯಗಳ ಸಂರಕ್ಷಣೆಗೆ ಬಳಸುವ ವಿಷಾಂಶವುಳ್ಳ ಮಾತ್ರೆ ಸೇವಿಸಿ ಮಹದೇವಮ್ಮ ಒದ್ದಾಡುತ್ತಿದ್ದರು. ಇದನ್ನು ಗಮನಿಸಿದವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 

ಈ ಸಂಬಂಧ ಮೈಸೂರು ತಾಲೂಕು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News