ಮುಂಬೈ:ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷ ನಿಗೂಢ ನಾಪತ್ತೆ
ಮುಂಬೈ, ಸೆ.8: ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷ ಸಿದ್ದಾರ್ಥ್ ಕಿರಣ್ ಸಂಘ್ವಿ ಬುಧವಾರ ಮುಂಬೈನ ಕಮಲಾ ಮಿಲ್ಸ್ ಬಳಿ ಇರುವ ತನ್ನ ಕಚೇರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಘ್ವಿ ಮಲಬಾರ್ ಹಿಲ್ಸ್ನಲ್ಲಿ ಪತ್ನಿ ಹಾಗೂ ನಾಲ್ಕು ವರ್ಷದ ಮಗನೊಂದಿಗೆ ವಾಸವಾಗಿದ್ದು, ಬುಧವಾರ ಬೆಳಗ್ಗೆ 8:30ಕ್ಕೆ ಕಚೇರಿಗೆ ತೆರಳಿದವರು ಮತ್ತೆ ಮನೆಗೆ ವಾಪಸಾಗಿಲ್ಲ. ಸಿಂಘ್ವಿ ಅವರ ಕಾರು ನಾಪತ್ತೆಯಾದ ಮರುದಿನ ನವಮುಂಬೈನಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಾರಿನ ಸೀಟಿನಲ್ಲಿ ರಕ್ತದ ಕಲೆಯಿತ್ತು.
ಪೊಲೀಸರು ಮುಂಬೈನ ಎನ್ಎಂ ಜೋಶಿ ಮಾರ್ಗ್ ಪೊಲೀಸ್ ಸ್ಟೇಶನ್ನಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು, ಇದೊಂದು ಅಪಹರಣ ಕೃತ್ಯವಾಗಿರಬಹುದು ಎಂದು ಶಂಕಿಸಿದ್ದಾರೆ.
‘‘ಸಿಂಘ್ವಿ ಪತ್ನಿ ರಾತ್ರಿ 10 ಗಂಟೆಯ ತನಕ ಪತಿಗೆ ಫೋನ್ ಕರೆ ಮಾಡಲು ಯತ್ನಿಸಿ, ಬುಧವಾರ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ನಾವು ಮುಂಬೈ, ನವಿಮುಂಬೈ ಹಾಗೂ ಥಾಣೆ ಪೊಲೀಸ್ ಠಾಣೆಗಳಿಗೆ ವೈಯರ್ಲೆಸ್ ಸಂದೇಶ ಕಳುಹಿಸಿದ್ದೇವೆ. ಐರೋಲಿ ಪೊಲೀಸರು ಸಂಘ್ವಿ ಅವರ ಮಾರುತಿ ಇಗ್ನಿಸ್ ಕಾರು ಪತ್ತೆಯಾಗಿರುವ ವಿಚಾರ ತಿಳಿಸಿದರು. ನಮ್ಮ ತಂಡ ಎಚ್ಡಿಎಫ್ಸಿ ಬ್ಯಾಂಕ್ ಉಪಾಧ್ಯಕ್ಷನನ್ನು ಶೀಘ್ರವೇ ಪತ್ತೆ ಹಚ್ಚಲಿದೆ’’ಎಂದು ಪೊಲೀಸ್ ಅಧಿಕಾರಿ ರವೀಂದ್ರ ಶಿಸ್ವೆ ಹೇಳಿದ್ದಾರೆ.