ಓ ಮೆಣಸೇ...

Update: 2018-09-10 09:27 GMT

ವಿಧಾನ ಸಭಾ ಚುನಾವಣೆಯಲ್ಲಿ ಸೋತವರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ - ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ.

ಬಹುಶಃ ಸೋಲಿನ ರುಚಿ ಹತ್ತಿರಬೇಕು.

---------------------

2 ಮಕ್ಕಳನ್ನು ಹೆತ್ತವರು ತೆರಿಗೆ ಕಟ್ಟುತ್ತಾರೆ. 12 ಮಕ್ಕಳನ್ನು ಹೆತ್ತವರು ಸಬ್ಸಿಡಿ ತೆಗೋತಾರೆ -ಬಸವನ ಗೌಡ ಪಾಟೀಲ ಯತ್ನಾಳ್, ಶಾಸಕ.

ಆದರೆ ನಿಮ್ಮಂಥ ನಾಯಕರನ್ನು ಹೆತ್ತವರು ಮಾತ್ರ ಕಣ್ಣೀರು ಸುರಿಸುತ್ತಿದ್ದಾರೆ.

---------------------
ಕಾಂಗ್ರೆಸ್ ಸೋಲಿಸಲು ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆ - ಜನಾರ್ದನ ರೆಡ್ಡಿ, ಮಾಜಿ ಸಚಿವ.

ಅಂದರೆ ಅಕ್ರಮ ಗಣಿಗಾರಿಕೆ ಮಾಡಿರುವುದು ಕೂಡ ಕಾಂಗ್ರೆಸ್‌ನ್ನು ಸೋಲಿಸುವುದಕ್ಕೆ ಎಂದು ತಿಳಿಯಬೇಕೇ?
---------------------

ದೇಶ ವಿಭಜನೆಯನ್ನು ಸಾಂಸ್ಕೃತಿಕವಾಗಿ ಒಪ್ಪಲಾಗದು -ಅನಂತ ಕುಮಾರ ಹೆಗಡೆ, ಸಂಸದ.

ಅದಕ್ಕಾಗಿ ರಾಜಕೀಯವಾಗಿ ವಿಭಜನೆಗೆ ಇಳಿದಿದ್ದೀರಿ.

---------------------

ಡಾ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಜೆಡಿಎಸ್ ವಕ್ತಾರರಂತೆ ಮಾತನಾಡುತ್ತಿದ್ದಾರೆ - ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ.

ಬಿಜೆಪಿ ವಕ್ತಾರರಂತೆ ಮಾತನಾಡಬೇಕೆನ್ನುತ್ತೀರಾ?

---------------------

ನನ್ನನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಬೇಡಿ - ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಮತ್ತೆ ಮತ್ತೆ ಆಸೆ ಹುಟ್ಟಿಸಬೇಡಿ ಎಂದು ಮನವಿ ಮಾಡಿ.

---------------------
ಯಡಿಯೂರಪ್ಪ ಬೀಳುತ್ತೆ ಎಂದಷ್ಟು ಸರಕಾರಕ್ಕೆ ಆಯಸ್ಸು ಜಾಸ್ತಿ -ಎಚ್.ಡಿ. ರೇವಣ್ಣ, ಸಚಿವ.
ಯಾವ ಜ್ಯೋತಿಷಿ ಹೇಳಿದ್ದು?

---------------------

ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಯಾವುದೇ ರಾಷ್ಟ್ರೀಯವಾದಿ ಸಹಿಸಲಾರ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ.

ಅವರು ಸಾಮೂಹಿಕ ಹತ್ಯೆಯನ್ನಷ್ಟೇ ಸಹಿಸುವವರು.

---------------------

ನಾನು ಮುಖ್ಯಮಂತ್ರಿಯಾಗುವವರೆಗೆ ನನಗೆ ದೇಶದಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಇರಲಿಲ್ಲ -ನರೇಂದ್ರ ಮೋದಿ, ಪ್ರಧಾನಿ.

ನಿಮ್ಮ ಖಾತೆಗಳೆಲ್ಲ ಆವರೆಗೆ ವಿದೇಶಗಳಲ್ಲೇ ಇದ್ದಿರಬೇಕು.

---------------------

ಇಂಧನ ಬೆಲೆ ಏರಿಕೆ ತಾತ್ಕಾಲಿಕ -ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ.

ಹೌದು, ತಮ್ಮ ಸರಕಾರ ಅಸ್ತಿತ್ವದಲ್ಲಿರುವವರೆಗೆ.

---------------------

ಜೆಡಿಎಸ್ ಜತೆ ಸೇರಿ ಲೋಕಸಭೆ ಚುನಾವಣೆ ಎದುರಿಸಲು ಮನಸ್ಸಿಲ್ಲ. ಆದರೆ ಬಿಜೆಪಿಯನ್ನು ಸೋಲಿಸಲು ಮೈತ್ರಿ ಅನಿವಾರ್ಯ -ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.

ಇಲ್ಲವಾದರೆ ಅವರು ಕಾಂಗ್ರೆಸ್‌ನ್ನು ಸೋಲಿಸಲು ಬಿಜೆಪಿ ಜೊತೆಗೆ ಮೈತ್ರಿ ಮಾಡುವ ಸಾಧ್ಯತೆಗಳಿವೆ.

---------------------

ಪ್ರಧಾನಿ ಹತ್ಯೆಗೆ ಸಂಚು ನಡೆದಿದೆ ಎನ್ನುವುದರ ಕುರಿತು ನಾನೇನೂ ಮಾತನಾಡುವುದಿಲ್ಲ - ದೇವೇಗೌಡ, ಮಾಜಿ ಪ್ರಧಾನಿ.

ನಗರ ನಕ್ಸಲ್ ಎಂಬ ಆರೋಪ ನಿಮ್ಮ ತಲೆಗೂ ಕಟ್ಟಬಹುದೆಂಬ ಭಯವೇ?

---------------------

ಪೆಟ್ರೋಲ್ ದರ ಪ್ರತೀ ಲೀಟರ್‌ಗೆ ರೂ. 48ಕ್ಕಿಂತ ಹೆಚ್ಚಿರಬಾರದು - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ.

ಈಗ ಹೆಚ್ಚಾಗಿದೆಯಲ್ಲ, ಅದಕ್ಕೆ ಪರಿಹಾರ?

---------------------
ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಇರುವ ರಾಜ್ಯದ ಹಣಕಾಸಿನ ಬೀಗದ ಕೀ ಕೇಳಿ ಕೇಳಿ ಸಾಕಾಯ್ತು -ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ.

ಅದು ದೇವೇಗೌಡರ ಸೊಂಟದಲ್ಲಿ ನೇತಾಡುತ್ತಿದೆಯಂತೆ.

---------------------
ಕಲಿಯುಗದಲ್ಲಿ ಎಲ್ಲವೂ ಕೆಟ್ಟದ್ದು ಆಗುತ್ತದೆ ಎಂಬ ವಾದ ಒಪ್ಪತಕ್ಕದ್ದಲ್ಲ - ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ.

ಮೋದಿಯುಗಕ್ಕಷ್ಟೇ ಅದು ಸೀಮಿತ.

---------------------

‘ಸಾಲಮಾಡಿ ತುಪ್ಪ ತಿನ್ನು’ ಗಾದೆಯನ್ನು ಕುಮಾರಸ್ವಾಮಿ- ಸಿದ್ದರಾಮಯ್ಯ ಯಥಾವತ್ತಾಗಿ ಅನುಸರಿಸುತ್ತಿದ್ದಾರೆ - ಪ್ರಹ್ಲಾದ್ ಜೋಶಿ, ಸಂಸದ.

ಸಾಲ ಮಾಡಿ ಪೆಟ್ರೋಲ್ ಹಾಕಿಸುವವರ ಬಗ್ಗೆಯೂ ಹೇಳಿ.

---------------------

ನಾಯಿಯ ಬಾಯಿಯಲ್ಲಿ ಮೂಳೆಯಿದ್ದರೆ ಅದು ಬೊಗಳುವುದಿಲ್ಲ - ಅರುಣ್ ಶೌರಿ, ಮಾಜಿ ಕೇಂದ್ರ ಸಚಿವ.

ಈ ಹಿಂದೆ ನೀವು ಬೊಗಳದೇ ಇರುವುದಕ್ಕೆ ಕಾರಣ ಸಿಕ್ಕಿತು.

---------------------

ನೋಟು ನಿಷೇಧದಿಂದ ಭಾರತದಲ್ಲಿ ತೆರಿಗೆ ಅನುಸರಣೆ ಹೆಚ್ಚಾಗಿದೆ - ಅರುಣ್ ಜೇಟ್ಲಿ, ಕೇಂದ್ರ ಸಚಿವ.

ಆ ತೆರಿಗೆ ಯಾವ ದೇಶಕ್ಕೆ ಸಂದಾಯವಾಗುತ್ತಿದೆ ಎನ್ನುವುದನ್ನೂ ಹೇಳಿ.

---------------------

ಮಾಂಸ ತಿಂದು ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಮಾಡಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು -ಬಸವನ ಗೌಡ ಪಾಟೀಲ ಯತ್ನಾಳ್, ಶಾಸಕ.

ದುರ್ಮಾಂಸ ತಿಂದೇ ನೀವು ಅಧಿಕಾರ ಹಿಡಿದಿರಿ ಎನ್ನುವ ವಾದ ಇದೆ.

---------------------

ಕಾಂಗ್ರೆಸ್ ಪಕ್ಷದಲ್ಲಿ ಬ್ರಾಹ್ಮಣರ ಡಿಎನ್‌ಎ ಇದೆ -ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ.

ಹೌದು, ತಪಾಸಣೆ ನಡೆಸಿದರೆ ಜನಿವಾರಗಳೂ ಪತ್ತೆಯಾಗುತ್ತವೆ.

---------------------

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ಗೆ ನಾನು ಯಾರು, ನನ್ನ ಶಕ್ತಿ ಏನೆಂದು ತೋರಿಸುತ್ತೇನೆ -ಪ್ರತಾಪ ಸಿಂಹ, ಸಂಸದ.

ಆ ಶಕ್ತಿಯನ್ನು ಕೊಡಗಿನ ನೆರೆಯ ಸಂದರ್ಭದಲ್ಲಿ ಯಾಕೆ ಪ್ರದರ್ಶಿಸಿಲ್ಲ?

---------------------

ನನ್ನ ವಿರುದ್ಧ ಮಾನ ನಷ್ಟ ಹೂಡಲು ಯಡಿಯೂರಪ್ಪರಿಗೆ ಅದು ಇದೆಯಾ? - ಕುಮಾರಸ್ವಾಮಿ, ಮುಖ್ಯಮಂತ್ರಿ.

ಅದು ನಿಮ್ಮ ಜೊತೆಗೆ ಕೈ ಜೋಡಿಸಿ ಸರಕಾರ ಮಾಡಿದ ಆ ದಿನವೇ ನಷ್ಟವಾಗಿದೆಯಂತೆ.

---------------------
 ಇನ್ನು ಮುಂದೆ ಬೇರೆ ದೇಶಕ್ಕಾಗಿ ಪಾಕಿಸ್ತಾನ ಯುದ್ಧ ಮಾಡುವುದಿಲ್ಲ - ಇಮ್ರಾನ್ ಖಾನ್, ಪಾಕ್ ಪ್ರಧಾನಿ.

  ಕ್ರಿಕೆಟ್ ಆಡುವುದಕ್ಕೆ ಅನುಮತಿ ಇದೆಯೇ?

---------------------

ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ 14 ಹಿಂದೂ ಕಾರ್ಯಕರ್ತರು ನಿರ್ದೋಷಿಗಳು -ಪ್ರಮೋದ್ ಮುತಾಲಿಕ್, ಶ್ರಿರಾಮ ಸೇನೆ ಮುಖಂಡ.

ಅವರನ್ನು ಬಿಡುಗಡೆ ಮಾಡಿ, ನಿಮ್ಮನ್ನು ಬಂಧಿಸಿದರೆ ನಿಜವಾದ ದೋಷಿಯನ್ನು ಬಂಧಿಸಿದಂತಾಗುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...