ಮೋದಿಗೆ ಪಾಠಕಲಿಸುವ ಕಾಲ ಬಂದಿದೆ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್
ಮೈಸೂರು,ಸೆ.10: ಪ್ರಧಾನಿ ನರೇಂದ್ರ ಮೋದಿಯವರೆ ಇಷ್ಟುದಿನ ಸುಳ್ಳು ಹೇಳಿದ್ದು ಸಾಕು, ಜನ ನಿಮಗೆ ತಕ್ಕ ಪಾಠಕಲಿಸುವ ಕಾಲ ಹತ್ತಿರ ಬಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನಗರದ ಗಾಂಧಿವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ಗೆ ಬೆಂಬಲಿಸಿ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೋದಿ ಜನರನ್ನು ಸುಳ್ಳು ಹೇಳಿ ಮೋಸಮಾಡಿದರು. ಆದರೆ ಜನರೀಗ ಅವರಿಗೆ ಪಾಠಕಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಕರೆ ನೀಡಿರುವ ಬಂದ್ಗೆ ನಾವು ಸಹ ಬೆಂಬಲ ವ್ಯಕ್ತಪಡಿಸುತ್ತೇವೆ. ಜನಪರವಾಗಿ ಯಾರೇ ಪ್ರತಿಭಟಿಸಿದರು ನಮ್ಮ ಬೆಂಬಲ ಇದ್ದೇಇರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಕರೆ ನೀಡಿರುವ ಬಂದ್ ಬಗ್ಗೆ ಮಾತನಾಡುವ ಬಿಜೆಪಿಯವರು ಎಂದೂ ಭಾರತ್ ಬಂದ್ ಮಾಡಿಲ್ಲವೆ? ಗಲಾಟೆಗಳನ್ನು ಮಾಡಿಸಿ ಅಶಾಂತಿ ಉಂಟುಮಾಡಿಲ್ಲವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.