ಮಂಡ್ಯ: ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

Update: 2018-09-10 17:53 GMT

ಮಂಡ್ಯ, ಸೆ.10: ಪೆಟ್ರೋಲ್, ಡೀಸೆಲ್, ಇಂಧನ ದರ ಏರಿಕೆ ವಿರುದ್ಧ ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಭಾಗಶಃ ಯಶಸ್ವಿಯಾಗಿದೆ.

ಮಂಡ್ಯ ನಗರ ಸೇರಿದಂತೆ ತಾಲೂಕು ಕೇಂದ್ರಗಳಾದ ಮದ್ದೂರು, ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ, ಮಳವಳ್ಳಿ, ಪಾಡವಪುರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬಹುತೇಕ ವರ್ತಕರು ಸ್ವಯಂಪ್ರೇರಿತರಾಗಿ ವ್ಯಾಪಾರವಹಿವಾಟು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ನೀಡಿದರು. ಸಿನಿಮಾ ಪ್ರದರ್ಶನ ರದ್ದುಪಡಿಸಲಾಗಿತ್ತು. ಆದರೆ, ಕೆಲವು ಬೇಕರಿ, ಸಣ್ಣಪುಟ್ಟ ಅಂಗಡಿ, ಹೊಟೇಲ್‍ಗಳು ತೆರೆಯಲಾಗಿತ್ತು.

ಮಂಡ್ಯದ ಪೇಟೆ ಬೀದಿ, ನೂರಡಿ ರಸ್ತೆ, ವಿವಿ ರಸ್ತೆ, ಹೊಳಲು ವೃತ್ತ, ಗುತ್ತಲು ರಸ್ತೆಯಲ್ಲಿ ಬಹುತೇಕ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಸಾರಿಗೆ ಬಸ್‍ಗಳ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಖಾಸಗಿ ಬಸ್ ಮಾಲಕರ ಸಂಘ ಬಂದ್‍ಗೆ ಸಾಥ್ ನೀಡಿದ ಹಿನ್ನೆಲೆಯಲ್ಲಿ ಸಂಜೆವರೆಗೂ ಬಸ್‍ಗಳಿಲ್ಲದೆ ಸಾರ್ವಜನಿಕರು ಪರದಾಡಿದರು. ಖಾಸಗಿ ಟೆಂಪೋ, ಟ್ಯಾಕ್ಸಿ, ಆಟೋರಿಕ್ಷಾಗಳಲ್ಲಿ ಜನರು ಸಂಚರಿಸಿದರು. 

ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಬ್ಯಾಂಕ್, ಸರಕಾರಿ ಕಚೇರಿಗಳು ತೆರೆದಿದ್ದವು. ಬಸ್ ಸಂಚಾರ ರದ್ದಾದ ಹಿನ್ನೆಲೆಯಲ್ಲಿ ನಗರ ಪಟ್ಟಣಗಳಲ್ಲಿ ಜನಸಂದಣಿ ವಿರಳವಾಗಿತ್ತು. ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ  ವ್ಯತ್ಯಯವಾಗಲಿಲ್ಲ. 

ಮೋದಿ ಪ್ರತಿಕೃತಿ ದಹನ: ಮಂಡ್ಯ ನಗರ ಒಳಗೊಂಡಂತೆ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್, ಬಿಎಸ್ಪಿ, ಸಿಪಿಎಂ ಕಾರ್ಯಕರ್ತರು, ಕರವೇ, ಇತರೆ ಕನ್ನಡಪರ ಸಂಘಟನೆಗಳ ಮುಖಂಡರು, ಸದಸ್ಯರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ವತಿಯಿಂದ ಮಂಡ್ಯದ ಸಂಜಯ ವೃತ್ತದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿ ದಹನ ನಡೆಯಿತು. ಮತ್ತೊಂದೆಡೆ ಕಾಂಗ್ರೆಸ್ ಮುಖಂಡರು ಬೈಸಿಕಲ್ ತುಳಿಯುವ ಅಣಕು ಪ್ರದರ್ಶನ ಮೂಲಕ ಇಂಧನ ದರ ಏರಿಕೆ ವಿರೋಧಿಸಿದರು.

ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಜಬೀವುಲ್ಲಾ, ಸಿ.ಎಂ.ದ್ಯಾವಪ್ಪ, ಹಾಲಹಳ್ಳಿ ರಾಮಲಿಂಗಯ್ಯ, ಪ್ರಶಾಂತ್ ಬಾಬು, ಹನಕೆರೆ ಶಶಿ, ಅರವಿಂದ್, ಇತರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ, ಜಿಲ್ಲಾಧ್ಯಕ್ಷ ಸುರೇಶ್ ನಲ್ಲಹಳ್ಳಿ, ನರಸಿಂಹಮೂರ್ತಿ, ರಾಜು, ಕರವೇ ಶಿವರಾಮೇಗೌಡ ಬಣದ ಎಚ್.ಡಿ.ಜಯರಾಮು, ಟಿ.ಕೆ.ಸೋಮಶೇಖರ್, ಕಲಾವಿದ ಪ್ರಕಾಶ್, ಮಲ್ಲಯ್ಯ, ಜಿ.ಸಿ.ಶಂಕರೇಗೌಡ, ಪಿ.ಎ.ಜೋಸೆಫ್, ಸಂತೋಷ್, ನಾರಾಯಣಗೌಡ ಬಣದ ಶಂಕರೇಗೌಡ, ಇತರರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಇಂಧನ ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ 
ಭಾರತ್ ಬಂದ್ ಸಂಬಂಧ ಕಾಂಗ್ರೆಸ್ ಬಣಗಳು ಪ್ರತಿಭಟನೆ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದವು. ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮತ್ತೊಂದೆಡೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ನೇತೃತ್ವದಲ್ಲಿ ಪ್ರತಿಭಟನೆ ನಡೆದವು. ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಂಜಯ ವೃತ್ತದಲ್ಲಿ ನರೇಂದ್ರಮೋದಿ ಪ್ರತಿಕೃತಿ ದಹಿಸಲಾಯಿತು. ಎಂ.ಎಸ್.ಆತ್ಮಾನಂದ ನೇತೃತ್ವದಲ್ಲಿ ಅಣಕು ಸೈಕಲ್ ಪ್ರದರ್ಶನ ನಡೆಸಲಾಯಿತು.

ದೂರ ಉಳಿದ ಜೆಡಿಎಸ್
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದರೂ ಭಾರತ್ ಬಂದ್‍ನಿಂದ ಜೆಡಿಎಸ್ ದೂರ ಉಳಿಯಿತು. ಕಾಂಗ್ರೆಸ್, ಬಿಎಸ್ಪಿ, ಕೆಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರೆ, ಜೆಡಿಎಸ್‍ನಿಂದ ಯಾವುದೇ ಪ್ರತಿಭಟನೆ ವ್ಯಕ್ತವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News