ಮಡಿಕೇರಿ: ಹೆದ್ದಾರಿ, ಭೂಕುಸಿತ ಪ್ರದೇಶಗಳನ್ನು ಪರಿಶೀಲಿಸಿದ ಕೇಂದ್ರದ ತಂಡ

Update: 2018-09-12 15:59 GMT

ಮಡಿಕೇರಿ,ಸೆ.12: ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 

ಮಡಿಕೇರಿ ಸಮೀಪದ ಹಾಲೇರಿ, ಕಾಂಡಕೊಲ್ಲಿ, ಹಟ್ಟಿಹೊಳೆ, ಸೋಮವಾರಪೇಟೆ ರಸ್ತೆಯ ಭೂಕುಸಿತ ಪ್ರದೇಶಗಳಿಗೆ ತೆರಳಿ ವಾಸ್ತವಾಂಶವನ್ನು ದಾಖಲಿಸಿಕೊಂಡರು. ಕೇಂದ್ರ ಸರಕಾರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಭಿಯಂತರ ಜಿತೇಂದ್ರ ಪನ್ವ, ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಪೊನ್ನುಸ್ವಾಮಿ ಅವರುಗಳು ಅತಿವೃಷ್ಠಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು.

ಬೆಟ್ಟ ಕುಸಿತ, ಹೆದ್ದಾರಿ ಹಾನಿ ಮತ್ತು ತೋಟಗಾರಿಕೆ  ಬೆಳೆಗಳಿಗಾದ ಹಾನಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾತ್ರವಲ್ಲದೆ ಆ ಹಾನಿಗೀಡಿದ ಪ್ರದೇಶಗಳಲ್ಲಿ ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲನೆಯನ್ನು ನಡೆಸಿದರು. ಬಳಿಕ ಮುಕ್ಕೋಡ್ಲು, ಹಟ್ಟಿಹೊಳೆ ಕಡೆಗೆ ತೆರಳಿದ ತಂಡ ಗ್ರಾಮೀಣ ಭಾಗಗಳಲ್ಲಾದ ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದರು.

ಜಿಲ್ಲಾಧಿಕಾರಿ ಶ್ರೀವಿದ್ಯಾ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್  ಅವರುಗಳು ಅತೀವೃಷ್ಠಿಯಿಂದಾಗಿ ಬೆಳೆ, ಕೃಷಿ ಫಸಲು ನಾಶದ ಬಗ್ಗೆ ಅಧಿಕಾರಿಗಳ ತಂಡಕ್ಕೆ ವಿವರಿಸಿದರಲ್ಲದೇ ಈಗಾಗಲೇ ಕೇಂದ್ರ ವಿಪತ್ತು ನಿರ್ವಹಣಾ ನಿಧಿಯ ಮಾರ್ಗಸೂಚಿ ಅನ್ವಯ ನಿಗಧಿಪಡಿಸಲಾಗಿರುವ ಪರಿಹಾರದ ಮೊತ್ತವನ್ನು ಏರಿಕೆ ಮಾಡುವಂತೆಯೂ ಮನವಿ ಸಲ್ಲಿಸಿದರು. ವಿಪತ್ತು ಅಧ್ಯಯನಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ಸೆ.13 ರಂದು ಕೂಡ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಿದೆ. ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಸುದ್ದಿಗಾರರೊಂದಿಗೆ ತಮ್ಮ ಅಧ್ಯಯನ ಭೇಟಿಯ ಕುರಿತು ಯಾವುದೇ  ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಈಗಾಗಲೇ ಕೃಷಿ ಇಲಾಖೆ, ತೋಟಗಾರಿಕೆ, ಕಾಫಿ ಮಂಡಳಿ, ಸಾಂಬಾರ ಮಂಡಳಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಳೆ ಹಾನಿಯಿಂದಾದ ನಷ್ಟದ ಕುರಿತು ಮಾಹಿತಿ ನೀಡಿದ್ದಾರೆ. ಈ ಮಾಹಿತಿಗಳನ್ನು ಕೇಂದ್ರದ ಅಧ್ಯಯನ ತಂಡಕ್ಕೆ ಸಲ್ಲಿಸಲಾಗಿದ್ದು, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯೊಂದಿಗೆ ಚರ್ಚಿಸಿ ಬಳಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರದಿಂದ ಬಂದಿರುವ ಅಧ್ಯಯನ ತಂಡ ಜಿಲ್ಲೆಯಲ್ಲಾದ ಅತಿವೃಷ್ಟಿ ಹಾನಿಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷಿ ಫಸಲು, ತೋಗಾರಿಕೆ ಬೆಳೆಗಳು ನಾಶಗೊಂಡಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದು, ಸಮಗ್ರ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಿದ್ದಾರೆ. ಆ ಬಳಿಕ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

ಶಾಸಕ  ಅಪ್ಪಚ್ಚು ರಂಜನ್ ಮಾತನಾಡಿ, ಬೆಳೆ ಮತ್ತು ಫಸಲು ನಷ್ಟದಿಂದ ಸಂತ್ರಸ್ತರಾದವರಿಗೆ ಹೆಚ್ಚಿನ ಪರಿಹಾರ ಕಲ್ಪಿಸಬೇಕಿದೆ. ತೋಟ, ಕೃಷಿ ಗದ್ದೆ  ಕಳೆದುಕೊಂಡವರಿಗೆ ಜಾಗವನ್ನು ವಿತರಿಸುವ ಅಗತ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಜಿ.ಪಂ. ಮಾಜಿ ಅಧ್ಯಕ್ಷ  ರವಿ ಕುಶಾಲಪ್ಪ, ಪಿಡಬ್ಲೂಡಿ, ಚೆಸ್ಕಾಂ, ಹೆದ್ದಾರಿ ಪ್ರಾಧಿಕಾರ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News