ತುಮಕೂರು: ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 777 ಪ್ರಕರಣಗಳ ಇತ್ಯರ್ಥ

Update: 2018-09-12 17:20 GMT

ತುಮಕೂರು,ಸೆ.12: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜಿಲ್ಲಾದ್ಯಂತ ಸೆಪ್ಟೆಂಬರ್ 8ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 247 ವ್ಯಾಜ್ಯ ಪೂರ್ವ ಪ್ರಕರಣ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ 530 ಸೇರಿ ಒಟ್ಟು 777 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಬಾಬಾ ಸಾಹೇಬ ಜಿನರಾಳ್ಕರ್ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ 120 ಸಿವಿಲ್ ಪ್ರಕರಣಗಳನ್ನು ಬಗೆಹರಿಸಿ 4,09,953 ರೂ.ಗಳ ಪರಿಹಾರ ಕೊಡಿಸಲಾಗಿದ್ದು, 272 ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಿ 9,75,733 ರೂ.ಗಳ ದಂಡ ವಸೂಲಿ ಮಾಡಲಾಗಿದೆ. 112 ಚೆಕ್ ಅಮಾನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು 4,00,000 ರೂ.ಗಳನ್ನು ಫಿರ್ಯಾದಿದಾರರಿಗೆ ನಷ್ಟ ಪರಿಹಾರ ಕೊಡಿಸಲಾಗಿದೆ.

ಇದರ ಜೊತೆಗೆ 9 ಭೂ ಸ್ವಾಧೀನ ಪ್ರಕರಣ ಇತ್ಯರ್ಥಪಡಿಸಿ 15,05,563 ರೂ.ಗಳ ನಷ್ಟ ಪರಿಹಾರ ಕೊಡಿಸಲಾಗಿದ್ದು, 247 ಬ್ಯಾಂಕ್ ಬಾಕಿ ವಸೂಲಾತಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ 1,46,55,558 ರೂ.ಗಳನ್ನು ವಸೂಲಿ ಮಾಡಲಾಗಿದೆ. ಅದಾಲತ್‍ನಲ್ಲಿ 8 ಮೋಟಾರು ವಾಹನ ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು ರೂ.34,60,000 ರೂ.ಗಳ ನಷ್ಟ ಪರಿಹಾರ ಕೊಡಿಸಲಾಗಿದ್ದು, 7 ಕಾರ್ಮಿಕ ಪ್ರಕರಣಗಳು ಹಾಗೂ 2 ವೈವಾಹಿಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಬಾಬಾ ಸಾಹೇಬ ಜಿನರಾಳ್ಕರ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News