ದಾವಣಗೆರೆ: ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ

Update: 2018-09-14 13:00 GMT

ದಾವಣಗೆರೆ,ಸೆ.14: ಹೆಂಡತಿಯ ಶೀಲಶಂಕಿಸಿ ಪತಿಯೇ ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹದಡಿ ಗ್ರಾಮ ವ್ಯಾಪ್ತಿಯ ಮತ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಸಾವಿತ್ರಮ್ಮ (30) ಕೊಲೆಗೀಡಾಗಿರುವ ಮಹಿಳೆ. ಬೀರಪ್ಪ ಎಂಬಾತನೆ ಕೊಲೆಮಾಡಿರುವ ಆರೋಪಿ. ಕಳೆದ 4 ತಿಂಗಳಿನಿಂದ ತವರುಮನೆಯಲ್ಲಿದ್ದ ಸಾವಿತ್ರಮ್ಮ ಶುಕ್ರವಾರ ಬೆಳಗ್ಗೆ ಮತ್ತಿಗ್ರಾಮದ ಗಂಡನ ಮನೆಗೆ ಬಂದಿದ್ದರು. ಈ ವೇಳೆ ಬೀರಪ್ಪ ಪತ್ನಿಯೊಂದಿಗೆ ಜಗಳ ತೆಗೆದು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದ ಪರಿಣಾಮ ತೀವ್ರರಕ್ತಸ್ರಾವದಿಂದ ಸಾವಿತ್ರಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೆಂಡತಿಯ ಶೀಲ ಶಂಕಿಸಿ ಈ ಹಿಂದೆ ಗಂಡಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ಸಾವಿತ್ರಮ್ಮ ಮಹಿಳಾ ಸಾಂತ್ವನ ಕೇಂದ್ರದ ಮೊರೆಹೋಗಿದ್ದು, ಅಲ್ಲಿ ನೀಡಿದ್ದ ಸಲಹೆಯಂತೆ ಗಂಡನ ಮನೆ ತೊರೆದು ತವರು ಮನೆಯಲ್ಲಿದ್ದರು ಎನ್ನಲಾಗಿದೆ. 3ನೆ ತರಗತಿ ಓದುತ್ತಿರುವ ಮಗಳು ಸಾವಿತ್ರಮ್ಮನೊಂದಿಗಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಆಧಾರ್ ಕಾರ್ಡ್ ಬೇಕಾಗಿದ್ದರಿಂದ ಅದನ್ನು ತರಲು ಗಂಡನಮನೆಗೆ ಹೋಗಿದ್ದರು. ಆಗ ಮತ್ತೆ ಗಂಡ ಹೆಂಡಿರ ನಡುವೆ ಜಗಳ ಸಂಭವಿಸಿದ್ದು, ಮಾತಿನ ಚಕಮಕಿಯಲ್ಲಿ ಕುಪಿತನಾಡ ಬೀರಪ್ಪ ಕೊಲೆಗೈದಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಎಎಸ್‍ಪಿ, ಡಿವೈಎಸ್‍ಪಿ, ಸಿಪಿಐ ಭೇಟಿನೀಡಿದ್ದು, ಈ ಕುರಿತು ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬೀರಪ್ಪನನ್ನು ಬಂಧಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News