ರಂಗಕಲೆಗೆ ಭಾವನೆಗಳನ್ನು ಅರಳಿಸುವ ಶಕ್ತಿ ಇದೆ: ಶಾಸಕ ರಾಜೇಗೌಡ

Update: 2018-09-14 13:38 GMT

ಶೃಂಗೇರಿ, ಸೆ.14: ಭಾರತದ ಸಾಂಸ್ಕೃತಿಕ ಪರಂಪರೆಯು ಉನ್ನತವಾದ ಬದುಕಿನ ಮೌಲ್ಯವನ್ನು ಕಟ್ಟಿಕೊಡುವ ಪವಿತ್ರ ಮಾಧ್ಯಮ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಅವರು ತಿಳಿಸಿದರು. 

ಶೃಂಗೇರಿಯ ಕಾಳಿಂಗನಾವಡ ಪ್ರತಿಷ್ಠಾನದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್, ಶ್ರೀ ಜೆಸಿಬಿ ಎಂ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 'ರಂಗಶೃಂಗೇರಿ' ಕಾರ್ಯಕ್ರಮದಲ್ಲಿ ಕಲಾವಿದರ ಪರವಾಗಿ ನೀಡಲಾದ ರಂಗಬಾಗಿನ ಎಂಬ ವಿನೂತನ ಗೌರವವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. 

ನಮ್ಮ ದೇಶದ ಸಂಗೀತ, ನಾಟ್ಯ ಮತ್ತು ರಂಗ ಕಲೆಗಳಿಗೆ ಅದರದೇ ಆದ ನೈತಿಕ ಮೌಲ್ಯಗಳಿದ್ದು, ಭಾವನೆಯನ್ನು ಕೆರಳಿಸುವ ಬದಲು ಅರಳಿಸುವ ಶಕ್ತಿಯನ್ನು ಹೊಂದಿದೆ. ಈ ಬಗೆಯ ಶ್ರೀಮಂತ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮಲೆನಾಡಿನ ಸಾಂಸ್ಕೃತಿಕ ರಾಯಭಾರಿ ರಮೇಶ್ ಬೇಗಾರು 3 ದಶಕಗಳಿಂದ ನಿರಂತರವಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಇವರ ನೇತೃತ್ವದಲ್ಲಿ ಕ್ಷೇತ್ರ ಮಟ್ಟದಲ್ಲಿ ನುರಿತ ಶ್ರೇಷ್ಠ ಕಲಾವಿದರಿಂದ ಸಂಗೀತ ಶಿಬಿರವು ನೆರವೇರಲಿ ಎಂದು ರಾಜೇಗೌಡ ತಿಳಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಕರ್ಮಿ ರಮೇಶ್ ಬೇಗಾರ್, ಸದಭಿರುಚಿಯ ರಂಗಪ್ರಯೋಗಗಳನ್ನು ಮಲೆನಾಡಿನ ಜನತೆಗೆ ತಲುಪಿಸುವ ಸಲುವಾಗಿ ನಾಟಕೋತ್ಸಗಳನ್ನು ವರ್ಷವಿಡೀ ಶೃಂಗೇರಿಯಲ್ಲಿ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು. 

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಶಿವಶಂಕರ್, ಕಾಲೇಜು ವಿಶ್ವಸ್ಥ ಮಂಡಲಿಯ ಪರಾಶರ, ಪ್ರಾಂಶುಪಾಲ ಸ್ವಾಮಿ, ಎನ್.ಎಸ್.ಎಸ್ ಅಧಿಕಾರಿ ಎ.ಜಿ ಪ್ರಶಾಂತ್ ಮತ್ತು ಹಿರಿಯ ಕಲಾವಿದ ಶ್ರೀಕಂಠಯ್ಯ ಉಪಸ್ಥಿತರಿದ್ದರು. ಸೌಪರ್ಣಿಕ ತೋರಣಗದ್ದೆ ಪ್ರಾರ್ಥಿಸಿದರು. ನಂತರ ಕಲಾಗಂಗೋತ್ರಿ ತಂಡದಿಂದ ಮುಖ್ಯಮಂತ್ರಿ ನಾಟಕ ಪ್ರದರ್ಶನಗೊಂಡಿತು.

ಮೋಡಿಮಾಡಿದ 'ಮುಖ್ಯಮಂತ್ರಿ': ಕಲಾಗಂಗೋತ್ರಿ ಬೆಂಗಳೂರು ಇದರ ಕಲಾವಿದರು, ಖ್ಯಾತ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಮುಖ್ಯಮಂತ್ರಿ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿ ಮಲೆನಾಡ ಕಲಾಪ್ರೇಮಿಗಳನ್ನು ಮೋಡಿಮಾಡಿದರು. ಲೋಹಿತಾಶ್ವ ರಚಿಸಿ, ಬಿ.ವಿ ರಾಜಾರಾಂ ನಿರ್ದೇಶಿಸಿರುವ ಈ ನಾಟಕ ಉದಯಾಂಚಲ ಎಂಬ ರಾಜ್ಯದ ಮುಖ್ಯಮಂತ್ರಿಯ ತುಮುಲ, ರಾಜಕೀಯ ನಡೆ, ಜಾಣಚಾಣಾಕ್ಷತನ ಮತ್ತು ನಾಜೂಕುತನದಿಂದ ಆತನಿಗೆ ಎದುರಾದ ಅವಿಶ್ವಾಸ ನಿರ್ಣಯ ಎಂಬ ಅಗ್ನಿ ಪರೀಕ್ಷೆಯನ್ನು ಗೆಲ್ಲುವ ಕಥಾವಸ್ತುವನ್ನು ಒಳಗೊಂಡಿತ್ತು. 

ಚುರುಕಾದ ಸಂಭಾಷಣೆ, ಕ್ಷಣ-ಕ್ಷಣದ ರಾಜಕೀಯ ತಿರುವು ಮತ್ತು ಮುಖ್ಯಮಂತ್ರಿ ಚಂದ್ರು ಇವರ ಅಪ್ಪಟ ಮ್ಯಾನರಿಸಂನಿಂದ ನಾಟಕ ಕೊನೆಯವರೆಗೂ ಇನ್ನಿಲ್ಲದ ಕುತೂಹಲವನ್ನು ಮೂಡಿಸುತ್ತಾ ಸಾಗಿತು. ನಾಡಿನ ಪ್ರಸಿದ್ಧ ಕಲಾವಿದರಾದ ಮಂಜುನಾಥ ಹೆಗ್ಗಡೆ ಮತ್ತು ಶ್ರೀನಿವಾಸ ಮೇಸ್ಟ್ರು ತಮ್ಮ ಪೂರಕವಾದ ಅಭಿನಯದ ಮೂಲಕ ಗಮನಸೆಳೆದರು. ರಾಜಕೀಯ ಮತ್ತು ಅದರ ಉನ್ನತ ಸ್ಥಾನದಲ್ಲಿರುವವರ ವೈಯಕ್ತಿಕ ಬದುಕು - ಭಾವನೆಗಳ ಹೊಸದೊಂದು ಲೋಕವನ್ನು ನಾಟಕ ಮಾತಿನ ಮೂಲಕವೇ ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ಸು ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News