ಮೈಸೂರು: ತೈಲ ಬೆಲೆ ಇಳಿಸಲು ಒತ್ತಾಯಿಸಿ ಪ್ರಗತಿಪರ ಚಿಂತಕರ ವೇದಿಕೆ ಧರಣಿ
ಮೈಸೂರು,ಸೆ.15: ತೈಲ ಬೆಲೆ ಇಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಶನಿವಾರ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮಾತನಾಡಿ, ತೈಲಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರಿಂದ ಜನಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ. ದಿನಕ್ಕೊಂದು ರೀತಿ ತೈಲಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ ಜನರ ಕ್ಷಮೆಯಾಚಿಸಲಿ. ತೈಲಬೆಲೆ ಮೇಲಿನ ತೆರಿಗೆ ತೆಗೆದುಹಾಕಿ ಜನರಿಗೆ ಮೋಸ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು.
ತಮಗೆ ಬೇಕಾದ ಖಾಸಗಿ ಒಡೆತನದ ರಿಲಯನ್ಸ್ ಕಂಪನಿ ಮೇಲಿನ ತೆರಿಗೆಯನ್ನು ಸಡಿಲಗೊಳಿಸಿ ಜನಸಾಮಾನ್ಯರ ಮೇಲೆ ಹೇರಿರುವುದು ಖಂಡನೀಯ, ಕೂಡಲೇ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಯನ್ನು ಇಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕೆ.ಸಿ ಪುಟ್ಟಸಿದ್ದಶೆಟ್ಟಿ, ಮಹೇಶ್, ಸೋಮಶೇಕರ್, ಹರ್ಷ, ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.