ಇಂಜಿನಿಯರಿಂಗ್, ಮೆಡಿಕಲ್‍ಗೆ ಆಕರ್ಷಿತರಾಗಲು ಅರ್ಥಿಕ ಕಾರಣ ಮುಖ್ಯ: ಡಾ.ಜಿ.ಪರಮೇಶ್ವರ್

Update: 2018-09-16 12:02 GMT

ತುಮಕೂರು,ಸೆ.16: ವೃತ್ತಿಪರ ಕೋರ್ಸುಗಳಾದ ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳನ್ನು ವಿದ್ಯಾರ್ಥಿಗಳು ವೃತ್ತಿ ಗೌರವದ ಹೊರತಾಗಿಯೂ ಅರ್ಥಿಕ ಸದೃಢತೆಗೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಶ್ರೀಗಂಗಾಭವಾನಿ ಮಹಿಳಾ ಸಹಕಾರ ಸಂಘ(ರಿ), ಶ್ರೀರಾಜರಾಜೇಶ್ವರಿ ಮಹಿಳಾ ಸಮಾಜ(ರಿ) ಜಂಟಿಯಾಗಿ ಆಯೋಜಿಸಿದ್ದ ಗಣ್ಯರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದಿತರಾಗಿ ಮಾತನಾಡಿದ ಅವರು, ಇಂಜಿನಿಯರ್ ಮತ್ತು ವೈದ್ಯ ಪದವಿ ಪಡೆದವರಿಗೆ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಬೇಡಿಕೆ. ನಮ್ಮ ದೇಶದಲ್ಲಿಯೂ ಉತ್ತಮ ಅವಕಾಶಗಳು ದೊರೆಯಲಿವೆ. ಈ ಹಿನ್ನೆಲೆಯಲ್ಲಿ ಇತರೆ ಕೋರ್ಸುಗಳಿಗಿಂತ ವೃತ್ತಿಪರ ಕೋರ್ಸುಗಳ ಕಡೆಗೆ ಹೆಚ್ಚಾಗಿ ಯುವಜನತೆ ಆಕರ್ಷಿತರಾಗುತ್ತಿದ್ದಾರೆ ಎಂದರು.

ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 5 ಲಕ್ಷದಷ್ಟು ಇಂಜಿನಿಯರಿಂಗ್ ಪದವಿಧರರು ಹೊರಬರುತ್ತಿದ್ದು, ಇವರಲ್ಲಿ ಶೇ.25 ರಿಂದ 30ರಷ್ಟು ಜನರು ಹೊರದೇಶಗಳಿಗೆ ಹೋಗುತ್ತಿದ್ದಾರೆ. ವೈದ್ಯಕೀಯ ಪದವಿ ಪಡೆದ ಸುಮಾರು 70 ರಿಂದ 80 ಸಾವಿರ ವೈದ್ಯರಲ್ಲಿ ಶೇ.20ಷ್ಟು ಮಂದಿ ವಿದೇಶಗಳಿಗೆ ತೆರಳುತ್ತಿದ್ದಾರೆ. ಉಳಿದವರು ಖಾಸಗಿ ಅಭ್ಯಾಸದಲ್ಲಿ ತೊಡಗಿದ್ದು, ಸರಕಾರಿ ಸೇವೆಗೆ ಸೇರುವವರ ಸಂಖ್ಯೆ ಕಡಿಮೆ. ಇದರಿಂದಾಗಿ ಇಂದಿಗೂ ಭಾರತದಲ್ಲಿ ವೈದ್ಯರ ಕೊರತೆಯಿದೆ. ವೈದ್ಯರಾದರೆ ತಾವು ಬದುಕಿರುವವರೆಗೂ ರೋಗಿಗೆ ಚಿಕಿತ್ಸೆ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿಪರ ಕೋರ್ಸುಗಳಿಗೆ ಹೆಚ್ಚಿನ ಪ್ರಾದಾನ್ಯತೆ ನೀಡಿ, ಪಿಯುಸಿ ನಂತರ ಬಹುಜನರು ಈ ಕೋರ್ಸುಗಳಿಗೆ ಅದ್ಯತೆ ನೀಡುತ್ತಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಇಂದು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಎಲ್ಲ ರಂಗದಲ್ಲಿಯೂ ಮಂಚೂಣಿಯಲ್ಲಿದ್ದಾರೆ. ಈ ಸಾಲಿನ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯಿಂದ ಸ್ಯಾನ್‍ಪ್ರಾನ್ಸಿಕೋಗೆ ಮಹಿಳೆಯರೇ ಸತತ 19 ಗಂಟೆಗಳ ಕಾಲ ನಾಗರಿಕ ವಿಮಾನ ಚಲಾಯಿಸಿ, ಪುರುಷರಿಗಿಂತ ನಾವೇನು ಕಡಿಮೆಯಿಲ್ಲ ಎಂದು ತೋರಿಸಿದ್ದಾರೆ. ಅಲ್ಲದೆ ಯುದ್ದ ವಿಮಾನಗಳನ್ನು ಚಲಾಯಿಸಿ, ಎದುರಾಯಿಯ ಮೇಲೆರಗುವ ಧೈರ್ಯ ತೋರಿದ್ದಾರೆ. ಭವಿಷ್ಯದಲ್ಲಿ ಮಹಿಳೆಯರ ಮುಂದೆ ದೊಡ್ಡ ಅವಕಾಶಗಳ ಮಹಾಪೂರವೇ ಇದೆ ಎಂದ ಅವರು, ಇಂತಹ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸುತ್ತಿರುವ ಶ್ರೀಮತಿ ಗಂಗಮ್ಮ ನೇತೃತ್ವದ ಶ್ರೀಗಂಗಾಭವಾನಿ ಮಹಿಳಾ ಸಹಕಾರ ಸಂಘ ಮತ್ತು ಶ್ರೀರಾಜರಾಜೇಶ್ವರಿ ಮಹಿಳಾ ಸಂಘದ ಕೆಲಸ ಶ್ಲಾಘನೀಯ. ಇವರು ನಗರದಲ್ಲಿ ನಿವೇಶನ ಪಡೆದರೆ, ಕಚೇರಿ ನಿರ್ಮಾಣಕ್ಕೆ ಸರಕಾರದ ವತಿಯಿಂದ ಅನುದಾನ ಕೊಡಿಸುವ ಭರವಸೆಯನ್ನು ಗೃಹ ಸಚಿವರು ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗಂಗಾಭವಾನಿ ಮಹಿಳಾ ಸಹಕಾರ ಸಂಘ(ರಿ)ದ ಅಧ್ಯಕ್ಷೆ ಶ್ರೀಮತಿ ಗಂಗಮ್ಮ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ, ನಮ್ಮ ಸಂಘದ ಹೆಸರಿನಲ್ಲಿ ಆನಾಥ ಹೆಣ್ಣು ಮಕ್ಕಳಿಗೆ ತರಬೇತಿ ಸಂಸ್ಥೆ ಆರಂಭಿಸಬೇಕೆಂದಿದ್ದು, ಸರಕಾರದ ವತಿಯಿಂದ ಸಹಕಾರ ಕೊಡಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಮೇಲಿನ ಎರಡು ಸಂಘಗಳು ನೀಡುವ ಗಂಗಾಶ್ರೀ ಪ್ರಶಸ್ತಿಯನ್ನು ಮಹಿಳೆಯರ ಸ್ವಾವಲಂಬನೆಗಾಗಿ ದುಡಿದ ಶ್ರೀಮತಿ ಸುನಂದಮ್ಮ, ಶ್ರೀಮತಿ ಭಾಗ್ಯಮ್ಮ, ಶ್ರೀಮತಿ ಲಲಿತಮ್ಮ ಅವರುಗಳಿಗೆ ನೀಡಿ ಗೌರವಿಸಲಾಯಿತು. 2017-18ನೇ ಸಾಲಿನ ಎಸೆಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸಾಕ್ಷರತ ಪ್ರೇರಕ, ಉಪಪ್ರೇರಕರು ತಮ್ಮ ಸೇವೆಯನ್ನು ಖಾಯಂ ಮಾಡುವಂತೆ ಉಪಮುಖ್ಯಮಂತ್ರಿ ಗಳಲ್ಲಿ ಮನವಿ ಮಾಡಿದರು.
ವೇದಿಕೆಯ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಪ್ರಕಾಶನಗರದ ಓಂ ನಮಃಶಿವಾಯ ಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ತು.ಬಿ.ಮಲ್ಲೇಶ್, ಬಿ.ಇ.ಓ ರಂಗಧಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News